ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆ ಪಟ್ಟಣ ಸೇರಿದಂತೆ ಮೈಸೂರು-ಊಟಿ ಹೆದ್ದಾರಿ ಬದಿಯಂಚಿನ ಹಳ್ಳಿಗಳಿಗೆ ಕಬಿನಿ ನೀರು ಸರಬರಾಜಾಗದೆ ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದ ನಂತರ ಅಧಿಕಾರಿಗಳೇ ದರ್ಬಾರ್ ನಡೆಸುತ್ತಿದ್ದು, ಅಧಿಕಾರಿಗಳ ಆಡಳಿತದಲ್ಲಿ ಕುಡಿವ ನೀರಿನ ಸಮಸ್ಯೆ ತಿಂಗಳಲ್ಲಿ ಎರಡು, ಮೂರು ಭಾರಿ ನೀರಿನ ಸಮಸ್ಯೆ ಎದುರಾಗಿದೆ ಎಂದು ಪಟ್ಟಣದ ನಾಗರೀಕರು ಆರೋಪಿಸಿದ್ದಾರೆ.
ಕಬಿನಿ ಕುಡಿವ ನೀರಿನ ಯೋಜನೆಯ ಡಿಜಿಟಲ್ ಸ್ಟಾರ್ಟರ್ ಗಳು ಕೆಟ್ಟಿವೆ. ವೋಲ್ಟೇಜ್ ಸಮಸ್ಯೆಯಿಂದ ಸ್ಟಾರ್ಟರ್ಗಳು ಹಾಳಾಗುತ್ತಿವೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಅವರ ಸ್ಪಷ್ಟನೆಯಾಗಿದೆ.
ಡಿಜಿಟಲ್ ಸ್ಟಾರ್ಟರ್ ಕೆಟ್ಟಿವೆ ದುರಸ್ಥಿಯಾಗುವ ತನಕ ಮ್ಯಾನುವಲ್ ಸ್ಟಾರ್ಟರ್ ಖರೀದಿಗೆ ಪುರಸಭೆ ಮುಂದಾಗಿದೆ ಎನ್ನಲಾಗಿದೆ. ಆದರೆ ಕೆಟ್ಟಿರುವ ಡಿಜಿಟಲ್ ಸ್ಟಾರ್ಟರ್ ದುರಸ್ಥಿ ಪಡಿಸಲು ಆಗಲ್ಲ ಎಂದಾಕ್ಷಣ ಮ್ಯಾನುವಲ್ ಸ್ಟಾರ್ಟರ್ ಖರೀದಿಸಲು ವಾರಗಟ್ಟಲೇ ಬೇಕಾ ಎಂದು ಪಟ್ಟಣದ ಜನ ಪ್ರಶ್ನಿಸಿದ್ದಾರೆ. ಪಟ್ಟಣದಲ್ಲಿ ಇರುವ ಬೋರ್ವೆಲ್ಗಳಲ್ಲಿ ಕುಡಿವ ನೀರು ಕೊಡಲಾಗುತ್ತಿದೆ ಅಲ್ಲದೆ ಟ್ಯಾಂಕರ್ ಮೂಲಕ ಕೂಡ ನೀರು ಒದಗಿಸಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಸಮಜಾಯಿಸಿ ನೀಡಿದ್ದಾರೆ.ಹಣ ಕೊಟ್ಟು ಖರೀದಿ:ಪಟ್ಟಣದಲ್ಲಿ ಬಹುತೇಕ ನಾಗರೀಕರು ಖಾಸಗಿ ಟ್ಯಾಂಕರ್ ಗಳ ಮೂಲಕ ಹಣ ಕೊಟ್ಟು ನೀರು ಖರೀದಿಸುತ್ತಿರುವುದು ದಿನ ನಿತ್ಯದ ಕೆಲಸವಾಗಿದೆ ಇದು ತಪ್ಪುವುದು ಎಂದೂ ಎಂದು ಪಟ್ಟಣದ ನಾಸೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಕೆಡುತ್ತಿದೆ:
ಕಬಿನಿ ಕುಡಿವ ನೀರಿನ ಪೈಪ್ ಒಡೆದಿದೆ, ಯಂತ್ರಗಳು ಕೆಟ್ಟಿವೆ, ಸ್ಟಾರ್ಟರ್ ಗಳು ಕೆಟ್ಟಿವೆ ಎಂದು ದುರಸ್ಥಿ ಪಡಿಸುವ ನೆಪದಲ್ಲಿ ಕುಡಿವ ನೀರಿಗೆ ಕೋಟ್ಯಾಂತರ ರು.ನೀರಿನಂತೆ ಪುರಸಭೆ ಖರ್ಚು ಮಾಡುತ್ತಿದೆ ಎನ್ನಲಾಗಿದೆ.ಪುರಸಭೆ ಹಾಗೂ ಕಬಿನಿ ನೀರು ಪಡೆದ ಗ್ರಾಪಂಗೆ ಒಳಪಡುವ ಗ್ರಾಮಗಳಲ್ಲಿ ಕಬಿನಿ ನೀರು ಇಲ್ಲದೆ ಬೋರ್ವೆಲ್ ಮೂಲಕ ನೀರು ನೀಡಲು ಪ್ರಯತ್ನಿಸಿದ್ದು ಕಬಿನಿ ನೀರು ಕುಡಿದ ಜನರಿಗೆ ಬೊರ್ ನೀರು ಕುಡಿಯಲು ಆಗುತ್ತಿಲ್ಲ. ಇದು ಗುಂಡ್ಲುಪೇಟೆ ಜನತೆಗೆ ಮಾತ್ರ ಕಬಿನಿ ನೀರಿನ ಸಮಸ್ಯೆಯಲ್ಲ, ಬದಲಾಗಿ ಮೈಸೂರು-ಊಟಿ ಹೆದ್ದಾರಿ ಬದಿಯ ಕಬಿನಿ ಸಂಪರ್ಕ ಪಡೆದ ಗ್ರಾಮಗಳಲ್ಲಿ ನೀರಿನ ಹಾಹಾಕಾರ ಎದುರಾಗಿದ್ದು ಜನರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಕಬಿನಿ ನೀರು ಪಡೆದ ಹಲವಾರು ಗ್ರಾಮಗಳಲ್ಲಿ ನೀರಿನ ಬವಣೆಗೆ ಮಿತಿಯೇ ಇಲ್ಲ.ಕರೆಂಟ್ ಇರುವ ಸಮಯ ನೋಡಿ ಗಂಡಸರು ಹಾಗು ಹೆಂಗಸರು ಕಾದು ಕುಳಿತು ಕಬಿನಿಯನ್ನು ಶಬರಿಯಂತೆ ಕಾಯುವಂತಾಗಿದೆ.‘ಕಬಿನಿ ನೀರಿನ ಯೋಜನೆಯ ಡಿಜಿಟಲ್ ಸ್ಟಾರ್ಟರ್ ಕೆಟ್ಟಿವೆ ದುರಸ್ಥಿ ಆಗಿಲ್ಲ.ಹೊಸದಾಗಿ ಮ್ಯಾನುವಲ್ ಸ್ಟಾರ್ಟರ್ ಗಳು ಖರೀದಿಗೆ ಪುರಸಭೆ ಮುಂದಾಗಿದೆ.ನಾಳೆಯೊಳಗೆ ಗುಂಡ್ಲುಪೇಟೆ ಪಟ್ಟಣಕ್ಕೆ ಕಬಿನಿ ನೀರು ಬರಲಿದೆ. ಕೆ.ಪಿ ವಸಂತಕುಮಾರಿ ಪುರಸಭೆ ಮುಖ್ಯಾಧಿಕಾರಿ
‘ಗುಂಡ್ಲುಪೇಟೆ ತಾಲೂಕಿನ ಚಿಕ್ಕಾಟಿ ಗ್ರಾಮದಲ್ಲಿ ಕಬಿನಿ ನೀರು ಸ್ಥಗಿತಗೊಂಡಿರುವ ಕಾರಣ 2 ವಾರದಿಂದ ನೀರು ಬಂದಿಲ್ಲ. ಗ್ರಾಮದಲ್ಲಿ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಪಂ ಕೂಡ ನಿರ್ಲಕ್ಷ್ಯ ವಹಿಸಿದೆ. ಶಾಸಕರು ಕುಡಿವ ನೀರಿನ ಸಮಸ್ಯೆ ಬಗೆಹರಿಸಲಿ.-ಮಂಜು, ಚಿಕ್ಕಾಟಿ, ಗುಂಡ್ಲುಪೇಟೆ