ಗಾಂಜಾಕ್ಕಲ್ಲ, ಮೆಣಸಿನಕಾಯಿ ಬೆಳೆಗೆ ನೀರು ಬಿಡಿ

KannadaprabhaNewsNetwork |  
Published : Dec 26, 2023, 01:31 AM IST
ಮೆಣಸಿನಕಾಯಿ ಬೆಳೆಗೆ ಫೆಬ್ರವರಿ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸಬೇಕೆಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಎಂಟು ದಿನಗಳಿಂದ ಅಹೋರಾತ್ರಿ ಧರಣಿಯ ಭಾಗವಾಗಿ ಶಹಾಪುರದ ಬಸವೇಶ್ವರ ಸರ್ಕಲ್ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. (ಚಿತ್ರಗಳು : ಮಂಜುನಾಥ ಬಿರಾದರ್) | Kannada Prabha

ಸಾರಾಂಶ

ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಕಾಲುವೆಗೆ ನೀರು ಹರಿಸಿ ಎಂದು ಗೋಳಾಗುತ್ತಿರುವ ರೈತರು.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಬೆಳೆದು ನಿಂತ ಮೆಣಸಿನಕಾಯಿ ಬೆಳೆಗಳ ಸಂರಕ್ಷಿಸಲು, ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಜಲಾಶಯದಿಂದ ಹರಿಸುವಂತೆ ಆಗ್ರಹಿಸಿ ಸಾವಿರಾರು ರೈತರು ನೀರಾವರಿ ಕಚೇರಿಗೆ ಬೀಗಮುದ್ರೆ ಹಾಕಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಜೊತೆಗೆ, ಡಿ.25ರಂದು ಕರೆ ನೀಡಲಾಗಿದ್ದ ಶಹಾಪುರ ಬಂದ್‌ಗೆ ವ್ಯಾಪಕ ಬೆಂಬಲ ದೊರೆತಿದೆ.

ಬಂದ್‌ ಕರೆ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಶಹಾಪುರ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಬಂದ್ ಮಾಡುವ ಮೂಲಕ, ವ್ಯಾಪಾರಸ್ಥರು ರೈತರಿಗೆ ಬೆಂಬಲ ಸೂಚಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು, ರಸ್ತಾಪುರ ಕ್ರಾಸ್ ಹಾಗೂ ಭೀಮರಾಯನ ಗುಡಿ ಹತ್ತಿರ ಮುಂಜಾಗ್ರತ ಕ್ರಮವಾಗಿ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು.

ನೀರು ಹರಿಸುವ ವಿಚಾರದಲ್ಲಿ ಸರ್ಕಾರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ಇಲ್ಲಿನ ಬಸವೇಶ್ವರ ವೃತ್ತದ ಬಳಿ ಬೀದರ್‌-ಶ್ರೀರಂಗಪಟ್ಟಣ-150 ರಾಜ್ಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆಗೆ ಕಾವೇರಿಸಿದ್ದರು. ನೀರು ಬಿಡುವವರಿಗೆ ನಮ್ಮ ಹೋರಾಟ ರಾಜ್ಯ ಹೆದ್ದಾರಿ ಮೇಲೆ ಮುಂದುವರೆಯಲಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ, ಕಾಲುವೆಗೆ ಸಮರ್ಪಕವಾಗಿ ನೀರು ಹರಿಸದೇ ಇದ್ದಲ್ಲಿ ಮೆಣಸಿನಕಾಯಿ ಬೆಳೆ ನಷ್ಟದತ್ತ ಸಾಗುತ್ತದೆ. ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗಲೇ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನೋವು ವ್ಯಕ್ತಪಡಿಸಿದರು.

ನಾವು ನೀರು ಬಿಡಿ ಎಂದು ಕೇಳುತ್ತಿರುವುದು ಗಾಂಜಾ ಬೆಳೆಸುವುದಕ್ಕೆ ಅಲ್ಲ, 14 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯು ನಮ್ಮ ಕಣ್ಣೆದುರಿಗೆ ಒಣಗಿ ಹೋಗುತ್ತಿದೆ. ಒಂದು ಬೆಳಗಾದರೂ ನೀರು ಸಿಗುವದೆಂಬ ಆಶಾಭಾವದಿಂದ ಭೂಮಿಯಲ್ಲಿ ಬಿತ್ತಿದ್ದ ಬೆಳೆಗಳು ನೀರಿಲ್ಲದೇ ಸೊರಗಿ ಕಮರಿ ಬೆಂಡಾಗುತ್ತಿವೆ. ಕೂಡಲೇ ಸರ್ಕಾರ ಬೆಳೆಗಳ ನೆರವಿಗೆ ಧಾವಿಸಿ ಅನ್ನದಾತರನ್ನು ಉಳಿಸಬೇಕು, ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.

ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಾಗರತ್ನ ಪಾಟಿಲ್ ಮಾತನಾಡಿ, ಸರ್ಕಾರ ಕಾಟಾಚಾರಕ್ಕೆ ಮಾತುಕತೆ ನಡೆಸಿದರೂ ರೈತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಹೇಳುತ್ತಿಲ್ಲ. ನೀರು ಬರುವವರೆಗೆ ರಾಜ್ಯ ಹೆದ್ದಾರಿ ಮೇಲೆ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ ರೈತರ ತಾಳ್ಮೆ ಮಾಡುತ್ತಿದೆ. ನಮ್ಮ ಸಹನೆಯ ಕಟ್ಟೆ ಹೊಡೆಯು ಮುಂಚೆ ನಮಗೆ ನೀರು ಕೊಡಿ, ಇಲ್ಲದಿದ್ದರೆ ಕುರ್ಚಿ ಖಾಲಿ ಮಾಡಿ, ರೈತರ ಕಣ್ಣೀರಿನ ಶಾಪ ನಿಮಗೆ ತಟ್ಟದೇ ಇರುವುದಿಲ್ಲ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ನೀರು ಕೊಡಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ರೈತರ ಹೋರಾಟಕ್ಕೇ ಬೆಂಬಲ ಘೋಷಿಸಿದರು. ತಮ್ಮ ತಲೆ ಬೋಳಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಸರ್ಕಾರ ರೈತರಿಗೆ ನೀರು ಹರಿಸುವಲ್ಲಿ ಜಿದ್ದಿಗೆ ಬಿದ್ದಂತೆ ಕಾಣುತ್ತದೆ. ರಾಜ್ಯದ ತುಂಬಾ ಹೆಂಡ ಸಾರಾಯಿಯ ಹೊಳೆ ಹರಿಸಲು ಸಿದ್ಧವಿದೆ. ಆದರೆ ರೈತರಿಗೇ ನೀರು ಕೊಡಲು ಸಿದ್ಧವಿಲ್ಲ ಎಂದು ಟೀಕಿಸಿದರು. ಅನೇಕ ರೈತ ಮುಖಂಡರು ತಮ್ಮ ತಲೆ ಬೋಳಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಕಲ್ಯಾಣ ಕರ್ನಾಟಕ ವಿಭಾಗದ ಉಪಾಧ್ಯಕ್ಷ ರಾಕೇಶ ಗೌಡ, ಕಲ್ಬುರ್ಗಿ ರೈತ ಸಂಘದ ಜಿಲ್ಲಾಧ್ಯಕ್ಷ ಅಲ್ಲ ಪಟೇಲ್ ಹಿಜೇರಿ, ಬಿಜೆಪಿ ಹಿರಿಯ ಮುಖಂಡ ಬಸವರಾಜ್ ವಿಭೂತಿಹಳ್ಳಿ, ಜಿಲ್ಲಾ ಕಾರ್ಯದರ್ಶಿ ಭೈರಪ್ಪ, ಮಹಿಳಾ ಹೋರಾಟಗಾರ್ತಿ ಯಶೋಧಾ, ರೈತ ಮುಖಂಡ ಮಲ್ಲನಗೌಡ ಪರಿವಾಣ, ಅಶೋಕ್ ರಾವ್ ಮಲ್ಲಾಬಾದಿ, ಚಂದ್ರಕಲಾ ವಡಿಗೇರ, ಮಲ್ಲಣ್ಣ ಚಿಂತಿ, ಪ್ರಭು ಕೊಂಗಂಡಿ, ಮಲ್ಲಣ್ಣ ನೀಲಹಳ್ಳಿ, ಹಣಮಂತ ಕೊಂಗಂಡಿ, ಗುರಣ್ಣ ದೇಸಾಯಿ, ಶಂಕರ್ ನಾಯಕ್ ಜಾದವ್, ಸಿದ್ದಣ್ಣ ಎಂಕಂಚಿ, ಮುದ್ದಣ್ಣ ಅಮ್ಮಪುರ್, ಬಾಬುರಾವ್ ಹೊಸಮನಿ, ತಿಪ್ಪಣ್ಣ ಬಿರಾದಾರ್, ಅಡಿವಪ್ಪ ಜಾಕಾ, ಅರುಣಿ ಬಸವರಾಜ, ಶ್ರೀಕಾಂತಗೌಡ ಸುಬೇದಾರ್, ಭೀಮಣ್ಣ ಮಿಲ್ಟ್ರಿ, ಅನಿಲ್ ಕುಮಾರ್, ಮರೆಪ್ಪ ಲಕ್ಷ್ಮಿಪುರ, ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.

ಹೆಂಡತಿಯ ಕಿವಿಯ ಬೆಂಡೋಲೆ ಮಾರಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಮಾಡಿದ ಸಾಲ ತೀರಿಸಲಾಗದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಸಿಂಗನಹಳ್ಳ ಮೆಣಸಿನಕಾಯಿ ಬೆಳೆಗಾರ ಸೂಕೂರ್‌ ಸಾಬ ಬೇಸರ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?