ಕಲ್ಲಂಗಡಿ ಸೇವನೆ: 7 ಮಂದಿ ಅಸ್ವಸ್ಥ

KannadaprabhaNewsNetwork |  
Published : Apr 18, 2025, 12:36 AM IST
ವಾಂತಿ ಭೇದಿಯಿಂದ ಅಸ್ವಸ್ಥಗೊಂಡವರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. | Kannada Prabha

ಸಾರಾಂಶ

ಕಲ್ಲಂಗಡಿ ಸೇವಿಸಿದ 7 ಜನ ತೀವ್ರ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಮುಂಡಗೋಡ: ಕಲ್ಲಂಗಡಿ ಸೇವಿಸಿದ 7 ಜನ ತೀವ್ರ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಅಸ್ವಸ್ಥರು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಶೋಕ ಡೊಳ್ಳೇಶ್ವರ, ಸೌಂದರ್ಯ ಡೊಳ್ಳೇಶ್ವರ, ನಿರ್ಮಲಾ ಡೊಳ್ಳೇಶ್ವರ, ರತ್ನವ್ವ ಕೆರಿಮನಿ, ಅಕ್ಕಮ್ಮ ಪಾಟೀಲ, ಚೇತನ್‌, ಗಗನ್ ಆಸ್ಪತ್ರೆಗೆ ದಾಖಲಾದವರು.

ಗ್ರಾಮದಲ್ಲಿ ಟಾಟಾ ಏಸ್ ಗಾಡಿಯಲ್ಲಿ ಮಾರಾಟಕ್ಕೆ ಬಂದಿದ್ದ ಕಲ್ಲಂಗಡಿ ಹಣ್ಣನ್ನು ಖರೀದಿಸಿ ಸೇವನೆ ಮಾಡಿದ್ದು, ಬುಧವಾರ ರಾತ್ರಿ ಇದ್ದಕ್ಕಿದ್ದಂತೆ ವಾಂತಿ-ಭೇದಿ ಹಾಗೂ ಚಳಿ ಜ್ವರ ಬಂದಿದೆ. ಬೆಳಗಾಗುವರೆಗೂ ಪರದಾಡಿದ್ದು, ತೀವ್ರ ಅಸ್ವಸ್ಥಗೊಂಡಿದ್ದಾರೆ. ಬೆಳಗಿನಜಾವ ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಅಸ್ವಸ್ಥ ಮಹಿಳೆ, ಎರಡು ಕಲ್ಲಂಗಡಿ ಹಣ್ಣು ಖರೀದಿಸಿದ್ದೆವು. ಒಂದು ಚೆನ್ನಾಗಿತ್ತು, ಸೇವಿಸಿದೆವು. ಇನ್ನೊಂದು ಹಣ್ಣನ್ನು ಎರಡು ದಿನದ ಬಳಿಕ ಸೇವಿಸಿದೆವು. ರಾತ್ರಿ ಅನ್ನ, ಹಾಲು ಊಟ ಮಾಡಿದೆವು. ಆದರೆ ಮಧ್ಯ ರಾತ್ರಿ ವೇಳೆಗೆ ವಾಂತಿ-ಭೇದಿ ಹಾಗೂ ಮೈಕೈ ನೋವು ಜಾಸ್ತಿಯಾಯಿತು. ಹಣ್ಣು ಸೇವನೆ ಮಾಡದ ಇಬ್ಬರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಹಾಗಾಗಿ ಹಣ್ಣು ಸೇವನೆಯಿಂದಲೇ ಹೀಗಾಗಿರುವುದು ಎಂದು ದೂರಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸ್ವರೂಪರಾಣಿ ಪಾಟೀಲ್, ಮೇಲ್ನೋಟಕ್ಕೆ ಕಲುಷಿತ ಆಹಾರ ಸೇವನೆಯೇ ಗ್ರಾಮಸ್ಥರು ಅಸ್ವಸ್ಥರಾಗಲು ಕಾರಣವಾಗಿದೆ. ಈಗಾಗಲೇ ರಕ್ತ ಹಾಗೂ ಭೇದಿ ಸ್ಯಾಂಪಲ್ ನ್ನು ಕಾರವಾರ ಪರೀಕ್ಷಾ ಘಟಕಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪೂರ್ಣ ಮಾಹಿತಿ ತಿಳಿಯುತ್ತದೆ. ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ನರೇಂದ್ರ ಪವಾರ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಚಿಕತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಒಂದೆಡೆ ಬಿರು ಬಿಸಿಲು, ಇನ್ನೊಂದೆಡೆ ಅಕಾಲಿಕ ಮಳೆ ಇದರ ನಡುವೆ ಅಗತ್ಯ ನೀರು ಕುಡಿಯದೇ ಇರುವುದು ಹಾಗೂ ಇದರೊಂದಿಗೆ ಕಲಬೆರಕೆ ಆಹಾರ ಸೇರಿ ಜನರ ಆರೋಗ್ಯ ಹಾಳಾಗುತ್ತಿದೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ತಾಜಾ ಮತ್ತು ಬಿಸಿಯಾದ ಆಹಾರವನ್ನೇ ಸೇವನೆ ಮಾಡಬೇಕು. ಆಹಾರದ ವಿಷಯದಲ್ಲಿ ಜನ ಜಾಗೃತರಾಗಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ವಾಂತಿ ಭೇದಿಯಿಂದ ಅಸ್ವಸ್ಥಗೊಂಡವರನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ