ಭಾರತೀಯ ಸೇನೆ ಸೇವೆಗೆ ನಾವು ಸದಾ ಸಿದ್ಧ

KannadaprabhaNewsNetwork |  
Published : May 11, 2025, 01:22 AM IST
10ಕೆಡಿವಿಜಿ9-ದಾವಣಗೆರೆಯಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎಂ.ಎಸ್.ಮಹೇಂದ್ರಕರ್ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಿಡಿದು, ದೇಶಭಕ್ತಿಯ ಘೋಷಣೆ ಮಾಡುವ ಮೂಲಕ ಮಾಜಿ ಸೈನಿಕರು ತಾವು ಭಾರತೀಯ ಸೇನೆ ಪರ ಹೋರಾಡಲು ಸಿದ್ಧವಿರುವುದಾಗಿ ಘೋಷಿಸಿದರು. | Kannada Prabha

ಸಾರಾಂಶ

ಭಾರತೀಯ ಸೇನೆಗೆ ಪಾಕಿಸ್ಥಾನ ಯಾವುದರಲ್ಲೂ ಸಾಟಿ ಇಲ್ಲ, ಇಂತಹ ಕುತಂತ್ರಿ ಪಾಕಿಸ್ತಾನದ ವಿರುದ್ಧ ಅಗತ್ಯ ಬಿದ್ದರೆ, ನಮ್ಮ ಸಹಾಯದ ಬೇಕೆನಿಸಿದರೆ ನಾವೆಲ್ಲರೂ ಮತ್ತೆ ಯುದ್ಧಕ್ಕೆ ಸಿದ್ಧ ಎಂದು ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಯೋಧರು ಘೋಷಿಸಿದ್ದಾರೆ.

ದಾವಣಗೆರೆಯ ಮಾಜಿ ಯೋಧರಿಂದ ಘೋಷಣೆ । ರಾಷ್ಟ್ರ ಧ್ವಜ ಹಿಡಿದು ಪ್ರಕಟ । ಹೋರಾಡುವ ನಮ್ಮ ಕಿಚ್ಚು ಇನ್ನೂ ಆರಿಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತೀಯ ಸೇನೆಗೆ ಪಾಕಿಸ್ಥಾನ ಯಾವುದರಲ್ಲೂ ಸಾಟಿ ಇಲ್ಲ, ಇಂತಹ ಕುತಂತ್ರಿ ಪಾಕಿಸ್ತಾನದ ವಿರುದ್ಧ ಅಗತ್ಯ ಬಿದ್ದರೆ, ನಮ್ಮ ಸಹಾಯದ ಬೇಕೆನಿಸಿದರೆ ನಾವೆಲ್ಲರೂ ಮತ್ತೆ ಯುದ್ಧಕ್ಕೆ ಸಿದ್ಧ ಎಂದು ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಯೋಧರು ಘೋಷಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ, ಮಾಜಿ ಯೋಧ ಎಂ.ಎಸ್.ಮಹೇಂದ್ರಕರ್, ಪಹಲ್ಗಾಂನಲ್ಲಿ ಉಗ್ರರು 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ನಂತರ ಆಪರೇಷನ್ ಸಿಂದೂರ ಮೂಲಕ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದ್ದು, ಇದೀಗ ಯುದ್ಧದ ಕಾರ್ಮೋಡ ಕವಿದ ಪರಿಸ್ಥಿತಿಯಲ್ಲಿ ಸೇನೆಗೆ ನಾವು ಸಿದ್ಧರಿದ್ದೇವೆ ಎಂದರು.

ಸೇನಾ ವೃತ್ತಿಯಿಂದ ನಾವು ನಿವೃತ್ತರಾಗಿರಬಹುದು. ಆದರೆ, ನಾಡು, ನುಡಿ, ದೇಶ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಭಾರತೀಯ ಸೇನೆಗೆ ನಮ್ಮ ಅಗತ್ಯ ಬಿದ್ದರೆ, ಮತ್ತೆ ಸೇನೆ ಜೊತೆಗೆ ಕೈಜೋಡಿಸಲು ನಾವೆಲ್ಲರೂ ಸಿದ್ಧ. ಅಗತ್ಯ ಬಿದ್ದರೆ ಮತ್ತೆ ಸೇನೆಗೆ ನಮ್ಮ ಸೇವೆ ನೀಡಲು ತಯಾರಾಗಿದ್ದೇವೆ ಎಂದು ತಿಳಿಸಿದರು.

ಸೇನೆಯಲ್ಲಿ ನಾವೆಲ್ಲ ಇದ್ದಾಗ 1971ರಲ್ಲಿ ಪಾಕ್ ವಿರುದ್ಧ ನಾವು ಗೆಲುವು ಸಾಧಿಸಿದ್ದೆವು. ಕಾರ್ಗಿಲ್‌ ಯುದ್ಧದಲ್ಲೂ ನಾವೂ ಭಾಗಿಯಾಗಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಸುಮಾರು 570 ಮಾಜಿ ಸೈನಿಕರಿದ್ದೇವೆ. ದಾವಣಗೆರೆ ತಾಲೂಕಿನಲ್ಲಿ ಸುಮಾರು 200 ಜನರಿದ್ದೇವೆ. ಇನ್ನೂ ಸಾಕಷ್ಟು ಜನರು ಸಂಘದಲ್ಲಿ ಸದಸ್ಯತ್ವ ಪಡೆದಿಲ್ಲ. ನಮ್ಮ ಜಿಲ್ಲೆಯಲ್ಲಿರುವ ಮಾಜಿ ಸೈನಿಕರು ಸೇನೆಯ ಎಲ್ಲಾ ವಿಭಾಗಗಳಲ್ಲೂ ಕಾರ್ಯ ನಿರ್ವಹಿಸಿದ ಅನುಭವಿಗಳಿದ್ದೇವೆ ಎಂದು ವಿವರಿಸಿದರು.

ಅವಕಾಶ ನೀಡಿದರೆ ನಾವು ಯುದ್ಧಕ್ಕೆ ಹೋಗಲು ಸಿದ್ಧರಿದ್ದೇವೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ದಾವಣಗೆರೆ ಜಿಲ್ಲೆಯ ಮಾಜಿ ಸೈನಿಕರ ಮಾಹಿತಿ ಕೇಳಿದ್ದು, ನಾವು ಪಟ್ಟಿಯನ್ನು ಸಹ ನೀಡಿದ್ದೇವೆ. ಅಗತ್ಯ ಬಿದ್ದರೆ ನಾವೆಲ್ಲರೂ ಮತ್ತೆ ದೇಶ ಸೇವೆಗೆ ಸಿದ್ಧರಿದ್ದೇವೆ ಎಂದರು.

ಮಾಜಿ ಸೈನಿಕರ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಬೇಕು. ನಾವು ಇಸಿಎಚ್‌ಗೆ ಶಿವಮೊಗ್ಗಕ್ಕೆ ಹೋಗಬೇಕಾಗಿದೆ. ಇದು ನಮಗೆ ಬಹಳ ತೊಂದರೆಯಾಗಿದೆ. ದಾವಣಗೆರೆ ಎಸ್ಸೆಸ್ ಹೈಟೆಕ್ ಆಸ್ಪತ್ರೆ ಅಥವಾ ನಂಜಪ್ಪ ಆಸ್ಪತ್ರೆಗೆ ನೀಡಬೇಕು. ನಮ್ಮ ಸಂಘಕ್ಕೆ ಜಿಲ್ಲಾಡಳಿತ, ಸರ್ಕಾರ, ಪಾಲಿಕೆ, ಜಿಪಂ ಅಥವಾ ದೂಡಾದಿಂದ ಜಾಗ ನೀಡಿದರೆ, ಸಮಾಜಮುಖಿ ಕಾರ್ಯಗಳ ಜೊತೆಗೆ ಸೇನೆ, ಪೊಲೀಸ್ ಇಲಾಖೆಗೆ ಸೇರಲು ಅನುಕೂಲವಾಗುವಂತೆ ಯುವ ಜನರಿಗೆ ತರಬೇತಿ, ಮಾರ್ಗದರ್ಶನ ನೀಡಲು ಸಂಘದ ನಾವೆಲ್ಲರೂ ಬದ್ಧ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂಘದ ಉಪಾಧ್ಯಕ್ಷ ಎಂ.ವಾಸಪ್ಪ, ಕಾರ್ಯದರ್ಶಿ ಬಿ.ವಿ.ಚಂದ್ರಪ್ಪ, ಎಚ್.ಪ್ರಕಾಶ, ಸರ್ವಶ್ರೀ ಚನ್ನಪ್ಪ, ಜಿ.ಅಂದಪ್ಪ, ಎನ್.ಎಂ.ಬಸಪ್ಪ, ಎಚ್.ಬಸವರಾಜ, ಕಲ್ಯಾಣಕುಮಾರ, ಚಂದ್ರಪ್ಪ ಬೆಳ್ಳೂಡಿ, ಉದಯಕುಮಾರ, ರಘುನಾಥ, ಚಂದ್ರಪ್ಪ, ಕೆ.ಬಿ.ಸಂತೋಷಕುಮಾರ ಇತರರು ಇದ್ದರು.

ಇದೇ ವೇಳೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು, ತಮ್ಮ ಹಳೆಯ ಯೋಧರ ಕಿಚ್ಚು ಮೆರೆಯುವ ಮೂಲಕ ದೇಶಾಭಿಮಾನದ ಘೋಷಣೆಗಳನ್ನು ಮಾಜಿ ಸೈನಿಕರು ಮೊಳಗಿಸಿದರು.ಕೋಟ್‌..

ದಾವಣಗೆರೆಯಲ್ಲಿ ಸಮುದಾಯ ನಿರ್ಮಾಣ ಮಾಡಿ ಯುವಕರಿಗೆ ತರಬೇತಿ ನೀಡುವ ಉದ್ದೇಶ ಸಂಘ ಹೊಂದಿದೆ. ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ಧೇಶ ಸಂಘಕ್ಕೆ ಎಂಸಿಸಿಎ ಬ್ಲಾಕ್‌ನಲ್ಲಿ ಮಳಿಗೆ ನೀಡಿದ್ದ ಪಾಲಿಕೆಯು ಈಗ ಅದನ್ನು ವಾಪಾಸ್‌ ಪಡೆದಿದೆ. ಇದು ಮಾಜಿ ಸೈನಿಕರ ಬಗ್ಗೆ ಪಾಲಿಕೆ ಅಧಿಕಾರಿಗಳು ಹೊಂದಿರುವ ಕಾಳಜಿ ಸಾಕ್ಷಿಯಾಗಿದೆ

ಎಂ.ಎಸ್.ಮಹೇಂದ್ರಕರ್, ಅಧ್ಯಕ್ಷ, ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ