ಹರಪನಹಳ್ಳಿ: ರೈತ ಒಕ್ಕಲುತನ ಮಾಡುವುದನ್ನು ನಿಲ್ಲಿಸಿದರೆ ಜಗವು ಬಿಕ್ಕಬೇಕಾಗುತ್ತದೆ. ರೈತನ ಉದಾರತನ ಗುಣದಿಂದ ನಾವು ನೆಮ್ಮದಿಯಾಗಿ ಜೀವಿಸುತ್ತಿದ್ದೇವೆ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಇಂದು ಯಾವುದಾದರೂ ಮಠಗಳ ಪೀಠಾಧಿಪತಿಗಳಾಗುವ ಮುನ್ನ ಮಠವು ಆರ್ಥಿಕವಾಗಿ ಸಮೃದ್ಧವಾಗಿ ಇದೆಯೊ ಇಲ್ಲವೋ ಎಂಬುದನ್ನು ಮೊದಲೇ ಅರಿತು ನಂತರ ಪಟ್ಟಾಧಿಕಾರವನ್ನು ಸ್ವೀಕರಿಸುವವರ ಮಧ್ಯೆ ಕೋಲಶಾಂತೇಶ್ವರ ಸ್ವಾಮಿಗಳು ಮಠಕ್ಕೆ ಸೀಮಿತವಾಗಿರುವ ಭೂಮಿಯಲ್ಲಿಯೇ ದುಡಿದು ಮಠವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕೋಲಶಾಂತೇಶ್ವರ ಸ್ವಾಮಿಗಳ ನಿತ್ಯ ಕಾಯಕವನ್ನು ಇಂದಿನ ಸ್ವಾಮೀಜಿಗಳು ಮಾದರಿಯಾಗಿ ಅಳವಡಿಸಿಕೊಳ್ಳಬೇಕು ಎಂದರು. ರೈತನ ದುಡಿಮೆಯ ಫಲದಿಂದ ದೇಶದಲ್ಲಿ ಕೈಗಾರಿಕೆಗಳು, ನವೋದ್ಯಮಗಳು ಸೇರಿದಂತೆ ದೇಶದ ವಿವಿಧ ಕ್ಷೇತ್ರಗಳ ಬೆಳವಣಿಗೆಯಾಗಲು ಸಾದ್ಯವಾಗಿದೆ. ರೈತನು ವರ್ಷಪೂರ್ತಿ ಶ್ರಮ ವಹಿಸಿ ದುಡಿದ ಆಹಾರ ಧಾನ್ಯಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಅಲ್ಲಿ ವ್ಯಾಪಾರಿಗಳು, ಮದ್ಯವರ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಮನಬಂದಂತೆ ರೈತನ ಬೆಲೆಯನ್ನು ನಿಗದಿ ಮಾಡಿ ಅನ್ಯಾಯವೆಸಗುತ್ತಿದ್ದಾರೆ ಎಂದರು.ಕೃಷಿ ಸಹಾಯಕ ನಿರ್ದೇಶಕ ಉಮೇಶ್ ವಿ.ಸಿ. ಮಾತನಾಡಿ, ರೈತನು ಅವಧಿಗು ಮುನ್ನವೇ ಬೆಳೆಯನ್ನು ವೇಗವಾಗಿ ಬೆಳೆದುಕೊಳ್ಳಲು ಭೂಮಿಗೆ ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ನೀಡಿ ಭೂಮಿಯು ತನ್ನ ನೈಜ ಸತ್ವವನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
ಕೃಷಿ ಕೇತ್ರದಲ್ಲಿ ಸಾಧನೆಗೈದ ರೈತರಿಗೆ ಕೋಲಶಾಂತೇಶ್ವರ ಮಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿಗಳು, ಕೂಡ್ಲಿಪೇಟೆಯ ಕಲ್ಲಳ್ಳಿಮಠದ ರುದ್ರಮುನಿ ಸ್ವಾಮೀಜಿ, ಕೂಲಹಳ್ಳಿ ಚಿನ್ಮಯಾನಂದ ಸ್ವಾಮಿಗಳು, ಅಡವಿಹಳ್ಳಿ ವೀರಗಂಗಾಧರ ಹಾಲಸ್ವಾಮಿಗಳು, ನಿಚ್ಚವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮಿಗಳು, ಕ್ಯಾರಕಟ್ಟಿ ಅಜ್ಜಯ್ಯ ಸ್ವಾಮಿಗಳು, ಮಾಜಿ ಸಂಸದ ವೈ.ದೇವೇಂದ್ರಪ್ಪ, ಬಿಡಿಸಿಸಿ ನಿರ್ದೇಶಕ ವೈ.ಡಿ. ಅಣ್ಣಪ್ಪ, ಅಕ್ಷರ ಸೀಡ್ಸ್ ಮಾಲೀಕ ಎನ್. ಕೊಟ್ರೇಶ್, ಎ.ಬಿ. ಪ್ರಶಾಂತ್ ಪಾಟೀಲ್, ಇಟಗಳ್ಳಿ ಬಸವರಾಜಪ್ಪ, ಸಿದ್ದಪ್ಪ, ಎ.ಎಚ್. ಕೊಟ್ರೇಶ್, ಕೆ.ಮಹಾಂತೇಶ್, ಐ.ಸಲಾಂಸಾಹೇಬ್ ಇದ್ದರು.