- ಸರ್ಕಾರ ರಚನೆಗೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಬೇಕು. ಅಭಿವೃದ್ಧಿಗೆ ಬೇಡವೇ ?
ಕನ್ನಡಪ್ರಭ ವಾರ್ತೆ ಯಾದಗಿರಿ
"ಕುಡೀಲಿಕ್ಕೆ ನೀರಿಲ್ಲದೆ ನಾವು,ನಮ್ ಜನಾ ಸಾಯ್ತಿದ್ದೀವಿ ಅಧ್ಯಕ್ಷರೇ..! ಅನ್ನದಾತ ಆತ್ಮಹತ್ಯೆ ಮಾಡಿಕೊಳ್ತಿದ್ದಾನೆ.. ನಮಗೇ ನೀರಿಲ್ಲಾ ಅಂತಾ ಒದ್ದಾಡ್ತಿದ್ರೆ, ಈ ಸರ್ಕಾರ ತೆಲಂಗಾಣಕ್ಕೆ ನೀರು ಹರಿಸ್ತಿದೆ. ಯಾವುದೇ ಪಕ್ಷದ ಸರ್ಕಾರಗಳಿರಲಿ, ಸರ್ಕಾರ ರಚನೆಗೆ ಉತ್ತರ ಕರ್ನಾಟಕ- ಕಲ್ಯಾಣ ಕರ್ನಾಟಕದ ಬಲ ಬೇಕು, ಅಭಿವೃದ್ಧಿ ವಿಚಾರಕ್ಕೆ ಬಂದ್ರೆ ಮಾತ್ರ ನಮ್ ಭಾಗದ ಜನರ ಗೋಳು ಕೇಳೋದೇ ಇಲ್ಲ.. "ವಿಧಾನಸಭೆ ಅಧಿವೇಶನದಲ್ಲಿ, ಈ ಭಾಗದ ಜನರ ಗೋಳಿನ ಕತೆ ಕುರಿತು ಸರ್ಕಾರದೆದುರು ಎಳೆಎಳೆಯಾಗಿ ವಾಸ್ತವಾಂಶ ಬಿಚ್ಚಿಟ್ಟ ಜಿಲ್ಲೆಯ ಗುರುಮಠಕಲ್ ಶಾಸಕ, ಜೆಡಿಎಸ್ನ ಶರಣಗೌಡ ಕಂದಕೂರ ಇಡೀ ಸದನವನ್ನು ಗಂಭೀರವಾಗಿಸಿದರು. ಹಿಂದಿನ ಅಧಿವೇಶನಗಳಲ್ಲೂ ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರದ ಗಮನ ಸೆಳೆದಿದ್ದ ಶಾಸಕ ಶರಣಗೌಡ ಕಂದಕೂರ, ಉತ್ತರ ಕರ್ನಾಟಕ- ಕಲ್ಯಾಣ ಕರ್ನಾಟಕ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
====ಬಾಕ್ಸ್:1===ಕೆಟ್ಟದ್ದೆಲ್ಲ ನಮಗೆ, ಒಳ್ಳೆದಲ್ಲ ನಿಮಗೆ..!
ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿಗಳಿಂದಾಗಿ ವಿಷಗಾಳಿ ಕುರಿತು ಸದನದಲ್ಲಿ ಗಂಭೀರವಾಗಿ ಚರ್ಚೆ ನಡೆಸಿದ್ದ ಕಂದಕೂರು, ಇದೇ ವಿಷಯ ಪ್ರಸ್ತಾಪಿಸುವ ಮೂಲಕ, ಜನರ ಬದುಕು ಹಿಂಡುತ್ತಿರುವ ವಿಷಗಾಳಿ ಸೂಸುತ್ತಿರುವ ಫ್ಯಾಕ್ಟರಿ ಬಂದ್ ಮಾಡುವಂತೆ ಕೋರಿದರು.ಕಡೇಚೂರು ಬಾಡಿಯಾಳ ಕಡೆಗಳಲ್ಲಿ ಫ್ಯಾಕ್ಟರಿಗಳಿಂದ ವಿಷಪೂರಿತ ಗಾಳಿ ಬರುತ್ತಿದೆ. ಜನರ ಬದುಕು ಹೀನಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಕಂದಕೂರ, ಛೊಲೋ ಛೊಲೋ ಫ್ಯಾಕ್ಟರಿಗಳೆಲ್ಲ ಈ ಕಡೆ (ದಕ್ಷಿಣ ಕರ್ನಾಟಕ-ಬೆಂಗಳೂರು), ವಿಷಗಾಳಿ ಸೂಸೋ ಕೆಟ್ಟ ಫ್ಯಾಕ್ಟರಿಗಳೆಲ್ಲ ನಮ್ ಕಡೆ (ಕಲ್ಯಾಣ ಕರ್ನಾಟಕ) ಸ್ಥಾಪಿಸುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ, ಯಾರ ಮುಂದೆ ನಮ್ಮ ಸಮಸ್ಯೆ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಕೊಪ್ಪಳದ ಗವಿ ಶ್ರೀಗಳ ಹೇಳಿಕೆಯನ್ನು ಸ್ಮರಿಸಿದ ಶಾಸಕ ಕಂದಕೂರ, ಸರ್ಕಾರ ತಾಯಿ ಇದ್ದ ಹಾಗೆ, ವಿಷ ಕೊಟ್ಟರೂ ನಾವು ಕುಡಿಯುತ್ತೇವೆ, ಹಾಲು ಕೊಟ್ಟರೂ ಕುಡಿಯುತ್ತೇವೆ. ಫ್ಯಾಕ್ಟರಿಗಳೆಲ್ಲ ಹೀಗೆ ಸ್ಥಾಪನೆಯಾಗುತ್ತಾ ಸಾಗಿದರೆ ನಮ್ಮ ಭಾಗದಲ್ಲಿ ತೊಟ್ಟಿಲ ತೂಗುವ ಕೈಗಳಿಗಿಂತ, ಸ್ಮಶಾನಕ್ಕೆ ಹೋಗುವ ಕೈಗಳೇ ಹೆಚ್ಚಾಗಬಹುದು ಎಂಬ ಆತಂಕವಿದೆ ಎಂದರು.
===ಬಾಕ್ಸ್:2===- 3 ಸಾವಿರ ಕ್ಯಾನ್ಸರ್ ರೋಗಿಗಳು !
ಆರೋಗ್ಯ ವರದಿಯೊಂದರ ಪ್ರಕಾರ, ಜಿಲ್ಲೆಯಲ್ಲಿ 3 ಸಾವಿರದಷ್ಟು ಹಾಗೂ ರಾಯಚೂರು ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳಿದ್ದಾರೆಂಬ ಸಮೀಕ್ಷೆಯಾಗಿದೆ. ಸರ್ಕಾರದ ಇದರ ಬಗ್ಗೆ ಗಂಭೀರ ಗಮನಹರಿಸಲಿ. ನಮ್ಮ ಭಾಗದ ಆಸ್ಪತ್ರೆಗಳ ಬಗ್ಗೆ ಚಿಂತನೆ ನಡೆಸಲಿ. ಬಡವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ದುಡಿದ ಹಣವನ್ನೆಲ್ಲ ಅಲ್ಲಿ ಸುರಿದು ಸಾಯುತ್ತಿದ್ದಾರೆ ಎಂದು ಶಾಸಕ ಕಂದಕೂರ ಹೇಳಿದರು.ಸರ್ಕಾರ ರಚನೆಗೆ ಗ್ಯಾರಂಟಿಗಳೇ ಮಾನದಂಡವಲ್ಲ. ಇದರಿಂದಲೇ ಓಟ್ ಬೀಳೋದಿಲ್ಲ ಅನ್ನೋದಕ್ಕೆ ತೆಲಂಗಾಣದಲ್ಲಿ ಕೆಸಿಆರ್ ಸರ್ಕಾರದ ಉದಾಹರಿಸಿದ ಶಾಸಕ ಕಂದಕೂರ, ಯಾವುದೇ ಸರ್ಕಾರ ಜನರಿಗೆ ಕೊಡುವ ಕಾರ್ಯಕ್ರಮಗಳು ಮುಂದಿನ ಎಲೆಕ್ಷನ್ಗಾಗಿ ಇರಬಾರದು, ಮುಂದಿ ಜನರೇಶನ್ಗಾಗಿ ಇರಬೇಕು ಎಂದರು.
ಕುಡಿವ ನೀರಿಗೆ 2ಸಾವಿರ ಕೋಟಿ ಯೋಜನೆ ಬಗ್ಗೆ ಸಚಿವರು ಹೇಳಿದ್ದಾರೆ. ಆದರೆ, ಕಳೆದ ಮೂರುವರೆ ತಿಂಗಳಿನಿಂದ ನನ್ನ ಕ್ಷೇತ್ರದಲ್ಲಿ (ಗುರುಮಠಕಲ್) ಒಂದು ಬೋರ್ವೆಲ್ ಕೊರೆಯಿಸಲು ಆಗಿಲ್ಲ. ಜೆಜೆಎಂ ಹಣೆಬರಹ ಹಾಗೂ ಅದರ ವಾಸ್ತವಾಂಶ ಎಲ್ಲರಿಗೂ ಗೊತ್ತಿದೆ.ಅನುದಾನವನ್ನೇ ನೀಡಿಲ್ಲ, ಸಾಲ ಮಾಡಿದ ಸದಸ್ಯರು ಎಲ್ಲಿಂದ ಪಂಚಾಯಿತಿಗಳಲ್ಲಿ ಹಣ ತರಬೇಕು. ಕುಡಿವ ನೀರು ಸಮಸ್ಯೆ ಬಗ್ಗೆ ಗಂಭೀರ ಪರಿಗಣಿಸಿ ಎಂದು ಕಿಡಿ ಕಾರಿದರು. ನೀರಿಗಾಗಿ, ಉದ್ಯೋಗಕ್ಕಾಗಿ ಹಾಗೂ ಭೂಮಿಗೆ ನೀರು ಹರಿಸಲು ನಾವು ಬೇಡಿಕೊಳ್ಳಬೇಕು. ಏನು ಪಾಪ ಮಾಡಿದ್ದೇವೆ ? ಇದೇನು ನಮ್ಮ ಪರಿಸ್ಥಿತಿ ಎಂದು ಕಂದಕೂರ ಈ ಭಾಗದ ಜ್ವಲಂತ ಸಮಸ್ಯೆ ಸದನದ ಮುಂದಿಟ್ಟಾಗ, ಕುರಿತು ಮೇಜು ಕುಟ್ಟಿ ಸದಸ್ಯರು ಬೆಂಬಲಿಸಿದರು.
-19ವೈಡಿಆರ್10 : ಬುಧವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರರೀ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
---- ನಮ್ಮ ಭಾಗದ ಜನರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಶಾಸಕ ಕಂದಕೂರ