;Resize=(412,232))
ಶಿವಮೊಗ್ಗ : ಯತ್ನಾಳ್ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅಭಿಪ್ರಾಯ ಹೇಳಿದ ಮಾತ್ರಕ್ಕೆ ನಾವು ರೆಬೆಲ್ಸ್ ಅಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಅಭಿಪ್ರಾಯ ಹೇಳಿದ ಮಾತ್ರಕ್ಕೆ ರೆಬಲ್ಸ್ ಆಗಲ್ಲ, ಇಡೀ ದೇಶದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರ ಪ್ರಕ್ರಿಯೆ ನಡೆಯುತ್ತಿದೆ. ಉತ್ತರ ಪ್ರದೇಶ, ಕರ್ನಾಟಕದಂತ ಕೆಲವು ರಾಜ್ಯದಲ್ಲಿ ಬಾಕಿ ಉಳಿದಿದೆ. ಆ ಪ್ರಕ್ರಿಯೆ ನಡೆಯುವವರೆಗೂ ನಮಗೊಂದು ಅವಕಾಶ ಇದೆ. ನಮ್ಮ ಅಭಿಪ್ರಾಯವನ್ನ ಹೇಳಿದ್ದೇವೆ ಎಂದರು.
ಹೈಕಮಾಂಡ್ ಕೊಟ್ಟ ನಿರ್ಧಾರವನ್ನು ಪಾಲನೆ ಮಾಡುವ ಕಾರ್ಯಕರ್ತರು ನಾವು. ಅದರಲ್ಲೇ ನಿರಂತರವಾಗಿ ಇದ್ದೇವೆ. ಒಬ್ಬರಾಗಿ ಹೇಳುವುದಕ್ಕಿಂತ ಗುಂಪಾಗಿ ಅಭಿಪ್ರಾಯ ಹೇಳಿದ್ದೇವೆ. ಯಾರನ್ನೋ ವೈಯಕ್ತಿಕ ಟಾರ್ಗೆಟ್ ಮಾಡಿ ಹೇಳಿಲ್ಲ. ಯಾರು ಕಡಿಮೆ, ಯಾರು ದೊಡ್ಡೋರು ಅಂತಾ ಹೇಳಿಲ್ಲ. ಈಗಿರುವವರು ಕೆಟ್ಟವರು, ಒಳ್ಳೆಯವರು ಅಂತಾ ವಾದನು ಅಲ್ಲ. ಭವಿಷ್ಯ ರಾಜಕೀಯ ಬೆಳವಣಿಗೆ ಗಮನಿಸಿ ಹೇಳಿದ್ದೇವೆ ಎಂದರು.
ಹೈಕಮಾಂಡ್ ತೀರ್ಮಾನದವರೆಗೂ ಇದು ಇರುತ್ತದೆ. ಅವರು ನಮ್ಮ ಅಭಿಪ್ರಾಯ ಕ್ಲೋಸ್ ಅನ್ನೋವರೆಗೂ ನಾವು ಹೇಳ್ತೇವೆ. ನಮ್ಮ ತಂಡದಿಂದ ಸಾಕಷ್ಟು ಹೋರಾಟ ಕೂಡ ಮಾಡಿದ್ದೇವೆ. ಅಭಿಪ್ರಾಯ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಯತ್ನಾಳ್ ಉಚ್ಚಾಟನೆ ನಂತರ ನಮ್ಮ ಧ್ವನಿ ಏನು ಕಡಿಮೆಯಾಗಿಲ್ಲ. ಆ ನಂತರವೂ ನಾವು ಹೋರಾಟ ಮಾಡ್ತಿದ್ದೇವೆ. ನುಸುಳುಕೋರರ ಬಗ್ಗೆ ಎರಡು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ರಾಜ್ಯ ಗೃಹ ಸಚಿವ ಪರಮೇಶ್ವರ್ ಒಂದು ಸಭೆ ಕೂಡ ಮಾಡಿಲ್ಲ. ಅಕ್ರಮವಾಗಿ ಇರುವವರ ಬಗ್ಗೆ ಹೇಳಿದರೆ ಕ್ರಮ ಆಗಲಿಲ್ಲ. ನಮ್ಮ ಉದ್ದೇಶ ಹಾಗೂ ನಮ್ಮ ಧ್ವನಿ ಮುಂದುವರಿದಿದೆ ಎಂದರು.
ಯತ್ನಾಳ್ ಬಿಜೆಪಿಯಿಂದ ಹೊರಗೆ ಹೋದ ಮೇಲೆ ಅವರು ಜಾಸ್ತಿ ಪಾಪ್ಯುಲರ್ ಆಗಿದ್ದಾರೆ. ಯತ್ನಾಳ್ ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಬಿಜೆಪಿ ತತ್ವ- ಸಿದ್ದಾಂತದ ಜೊತೆ ಪಕ್ವವಾಗಿದ್ದಾರೆ. ಇವತ್ತಲ್ಲ ನಾಳೆ ಪಕ್ಷ ಅವರನ್ನು ಪರಿಗಣಿಸುತ್ತದೆ ಎಂದು ಹೇಳಿದರು.
ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗಲಾಟೆ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ. ಅದಕ್ಕಾಗಿಯೇ ಅವರ ಹೈಕಮಾಂಡ್ ಇದೆ. ಕಿತ್ತಾಟ ಮುಂದುವರೆಸೋದು ಅಥವಾ ಸಮಾಧಾನ ಅವರು ತೀರ್ಮಾನ ಮಾಡಿಕೊಳ್ಳುತ್ತಾರೆ. ಅದರೇ, ಅವರ ಕಿತ್ತಾಟದಲ್ಲಿ ರಾಜ್ಯ ಅಧೋಗತಿಗೆ ಹೋಗಿದೆ. ಇನ್ನು ಹೋಗುತ್ತಿದೆ. ರಾಜ್ಯದ ಜನರಿಗೆ ಸರ್ಕಾರದ ಬಗ್ಗೆ ಅಸಮಾಧಾನ ಶುರುವಾಗಿದೆ. ಜನ ಬಹಳ ಅಪೇಕ್ಷೆ ಪಟ್ಟು ಬದಲಾವಣೆಗೆ ಸರ್ಕಾರ ತಂದಿದ್ದರು. ಅವರ ನಿರೀಕ್ಷೆ ಹುಸಿಯಾಗಿದೆ. ಬೇಸರ ಇದೆ. ಆರ್ಥಿಕ ಸ್ಥಿತಿ ಕುಸಿತ, ಹಣಕಾಸಿನ ದುರ್ಬಳಕೆ ಹೆಚ್ಚಾಗಿದೆ ಎಂದು ಆರೋಪಿಸಿದರು.
ರಾಜ್ಯಕ್ಕೆ ಬಂಡವಾಳ ಹೂಡಲು ಯಾರೂ ಸಹ ಮುಂದೆ ಬರುತ್ತಿಲ್ಲ, ರಾಜ್ಯದ ಹಿತಕ್ಕೆ ರಾಜಕೀಯ ಇರಬೇಕು. ಆದರೆ ಇಲ್ಲಿ ಸ್ವಾರ್ಥಕ್ಕಾಗಿ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಕುರ್ಚಿ ಕಿತ್ತಾಟ ಸಾಮಾನ್ಯವಾಗಿ ಎಲ್ಲಾ ಪಾರ್ಟಿಯಲ್ಲಿ ಇರುತ್ತದೆ. ಆದರೆ, ರಾಜ್ಯ ಹಾಗೂ ಜನರಿಗೆ ಸಂಕಷ್ಟ ತರುವುದು ಸೂಕ್ತ ಅಲ್ಲ ಎಂದು ಹೇಳಿದರು.
ಲಕ್ಷಣ್ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯೋದು ಸುಳ್ಳು. ಸಾಧ್ಯನೇ ಇಲ್ಲ. ಈಗ ಎಲೆಕ್ಷನ್ ತುಂಬಾ ದುಬಾರಿಯಾಗಿದೆ. 224 ಜನ ಶಾಸಕರು ಕೂಡ ಸುಭದ್ರ ಸರ್ಕಾರ ಇರಲಿ ಅಂತ ಬಯಸುತ್ತಾರೆ. ಮಧ್ಯಂತರ ಚುನಾವಣೆಯನ್ನು ಯಾರು ಕೂಡ ಬಯಸಲ್ಲ. ಸರ್ಕಾರ ಬೀಳಿಸಿ, ಚುನಾವಣೆಗೆ ಹೋಗಲು ಯಾರು ಬಯಸಲ್ಲ ಎಂದರು.
ಮಧ್ಯಂತರ ಚುನಾವಣೆ ಬರಬಾರದು. ಒನ್ ನೇಷನ್- ಒನ್ ಎಲೆಕ್ಷನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಮಧ್ಯಂತರ ಚುನಾವಣೆ ಆದರೆ ಜನರನ್ನ ಕೆರಳಿಸುತ್ತದೆ. ರಾಜಕೀಯ ವ್ಯವಸ್ಥೆಯಲ್ಲಿ ಜನರು ಸಂಕಷ್ಟಕ್ಕೆ ಹೋಗುತ್ತಾರೆ ಎಂದರು.
ಅಧಿವೇಶನ ನಂತರ ಕಾಂಗ್ರೆಸ್ ಸರ್ಕಾರದಲ್ಲಿ ಮೇಜರ್ ಸರ್ಜರಿ: ಸದಾನಂದ ಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ಕೂಡ ಸರ್ಕಾರದ ಒಂದು ಪ್ರಕ್ರಿಯೆ. ಸಿಎಂ ಹಾಗೂ ಅವರ ಹೈಕಮಾಂಡ್ ಗೆ ಬಿಟ್ಟದ್ದು. ನಾನು ರಾಜಕೀಯವಾಗಿ ಮಾತನಾಡಲ್ಲ. ರಾಜ್ಯದ ಹಿತದೃಷ್ಟಿಯಿಂದ ಮಾತನಾಡುವುದಾದರೆ ಸಚಿವರ ಕಾರ್ಯವೈಖರಿ ನೋಡಿ ಮಾಡೋದು ಒಳ್ಳೆಯದು. ಜನ ಕೂಡ ಉತ್ತಮ ಕೆಲಸ ಮಾಡೋರು ಬರಲಿ ಎಂದು ಅಪೇಕ್ಷೆ ಪಡುತ್ತಾರೆ. ಆ ತರ ಮಾಡಿದ್ರೆ ಒಳ್ಳೆಯದು ಎಂದರು.