ಹೊಸಕೋಟೆ: ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ರಾಜ್ಯಮಟ್ಟದ ಸ್ಪರ್ಧೆಗಳನ್ನು ಪ್ರತಿಬಿಂಬಿಸುವಂತಾಗಬೇಕು ಎಂಬುದೇ ನಮ್ಮ ಆಶಯ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ವಿ.ಸತೀಶ್ ಗೌಡ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಮಾತನಾಡಿ, ಸರ್ಕಾರಿ ಶಾಲೆಗಳನ್ನ ಉಳಿಸಬೇಕೆನ್ನುವ ದೃಷ್ಟಿಯಿಂದ ಶಾಸಕ ಶರತ್ ಬಚ್ಚೇಗೌಡರು ಪಣತೊಟ್ಟಿದ್ದು, 159 ಕೋಟಿ ರು.ಗಳ ವೆಚ್ಚದಲ್ಲಿ ಪ್ರತಿ ಗ್ರಾಪಂಗೊಂದು ಮಾದರಿ ಶಾಲೆ ನಿರ್ಮಿಸಲು ಮುಂದಾಗಿದ್ದಾರೆ. ಇದರ ಪರಿಣಾಮ ದೆಹಲಿ ರಾಜ್ಯದಂತೆ ಪ್ರಥಮವಾಗಿ ಹೊಸಕೋಟೆ ತಾಲೂಕಿನಲ್ಲಿ ಸರ್ಕಾರಿ ಶಾಲೆ ದಾಖಲಾತಿಗೆ ಸರದಿಯಲ್ಲಿ ನಿಲ್ಲುವ ಕಾಲ ದೂರವಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಪೋಷಕರು ಖಾಸಗಿ ಶಾಲೆ ಎಂಬ ಭ್ರಮೆಯನ್ನ ಬಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಬೇಕು ಎಂದು ಹೇಳಿದರು.
ಖಾಸಗಿ ಶಾಲೆ ಶುಲ್ಕದ ಹೊರೆ:ತುಮಕೂರು ವಿವಿ ಸಿಂಡಿಕೇಟ್ ಸದಸ್ಯ ದೇವರಾಜ್ ಮಾತನಾಡಿ, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುವಲ್ಲಿ ಪ್ರಥಮ ಆದ್ಯತೆ ನಿಡುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಬೇಕಾದರೂ ಸಹ ಅಷ್ಟೇ ಹೊರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ಕೊಟ್ಟರೂ ಅವರು ಅತ್ತ ಸುಳಿಯುತ್ತಿಲ್ಲ. ಆದ್ದರಿಂದ ಪೋಷಕರು ಒಮ್ಮೆ ಆತ್ಮಾವಲೋಕನ ಮಾಡಿಕೊಂಡು ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ವೆಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಸೂಲಿಬೆಲೆಯ ದೇವಿಕಾ ಎಂಬ ವಿದ್ಯಾರ್ಥಿನಿಗೆ ಶಾಸಕ ಶರತ್ ಬಚ್ಚೇಗೌಡರ ಪರವಾಗಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶ್ಗೌಡ ೨೦ ಸಾವಿರ ರು.ಗಳ ಆರ್ಥಿಕ ನೆರವು ನೀಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಪ್ರೋತ್ಸಾಹಿಸಿದರು.
ಫೋಟೋ: 1 ಹೆಚ್ಎಸ್ಕೆ 1 ಮತ್ತು 2
ಹೊಸಕೋಟೆಯ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಬಿ.ವಿ.ಸತೀಶ್ಗೌಡ ಉದ್ಘಾಟಿಸಿದರು.