ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇವೆ: ಸಚಿವ ಸಂತೋಷ್ ಲಾಡ್

KannadaprabhaNewsNetwork |  
Published : Oct 31, 2024, 01:05 AM ISTUpdated : Oct 31, 2024, 01:06 AM IST
ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರು ಬುಧವಾರ ಸಂಡೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಭರ್ಜರಿಯಾಗಿ ಪ್ರಚಾರ ಕೈಗೊಂಡು ಮತಯಾಚಿಸಿದರು. | Kannada Prabha

ಸಾರಾಂಶ

ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವೆ.

ಸಂಡೂರು: ಕ್ಷೇತ್ರದ ಅಭಿವೃದ್ಧಿಗೆ ನಾನು ಹಾಗೂ ಈ.ತುಕಾರಾಂ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಬಡಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.

ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಅವರ ಪರವಾಗಿ ತಾಲೂಕಿನ ಲಿಂಗದಹಳ್ಳಿ, ಉಬ್ಬಲಗುಂಡಿ, ಮಾಳಾಪುರ, ನೀರ್ಲಾಹಳ್ಳಿಕ್ಯಾಂಪ್, ಯು. ರಾಜಾಪುರ, ಯು.ಮಲ್ಲಾಪುರ, ಗಾಳೆಮ್ಮನಗುಡಿ ಗ್ರಾಮ, ತಿಮ್ಮಲಾಪುರ, ಕೊರಚರಹಟ್ಟಿ, ಕೆರೆರಾಂಪುರ, ಮೆಟ್ರಿಕಿ, ಗುಂಡ್ಲಹಳ್ಳಿ, ಸುಲ್ತಾನಪುರ, ಚಿಕ್ಕಂತಾಪುರ, ಕೋಡಾಲು, ಮರುಟ್ಲ, ಅಂತಾಪುರ ಕೊರಚರಹಟ್ಟಿ, ಡಿ. ಅಂತಾಪುರ, ತುಮಟಿ ತಾಂಡ, ಆವಿನಮಡುಗು, ವಿಠಲಾಪುರ, ಎಂ.ಗಂಗಲಾಪುರ, ಎಂ.ಬಸಾಪುರ, ಎಂ. ಲಕ್ಕಲಹಳ್ಳಿ ಹಾಗೂ ರಾಮಸಾಗರ ಗ್ರಾಮಗಳಲ್ಲಿ ಭರ್ಜರಿಯಾಗಿ ಪ್ರಚಾರ ಮಾಡಿ ಅವರು ಮಾತನಾಡಿದರು.

ಕ್ಷೇತ್ರದ ಜನತೆಗೆ ಅಗತ್ಯವಾದ ಕುಡಿಯುವ ನೀರು, ಉತ್ತಮ ರಸ್ತೆ, ಆಸ್ಪತ್ರೆ, ಶಾಲೆ ಮುಂತಾದ ಮೂಲ ಸೌಕರ್ಯಗಳನ್ನು ಕೊಡಲು ನಾನು ಮತ್ತು ಈ. ತುಕಾರಾಂ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ತಾಲೂಕಿನಲ್ಲಿ ಎಲ್ಲ ಜನಾಂಗದವರು ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಕಳೆದ ೨೫ ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ. ಗಣಿ ಭಾಗದ ಜನತೆಗೆ ಅನುಕೂಲವಾಗಲೆಂದು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆತಂದು, ಡಿಗ್ಗಿಂಗ್‌ಗೆ ಅವಕಾಶ ಕಲ್ಪಿಸಲಾಯಿತು. ಆದರೆ, ರೈತರ ಜಮೀನುಗಳಿಂದ ತೆಗೆದ ಸುಮಾರು ₹೭೦೦ ಕೋಟಿ ಬೆಲೆ ಬಾಳುವಷ್ಟು ಅದಿರನ್ನು ಬಿಜೆಪಿ ಸರ್ಕಾರ ಸೀಜ್ ಮಾಡಿಸಿತು ಎಂದರು.

ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಡು ಬಡವರಿಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಬಿಜೆಪಿಯವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ಐದು ವರ್ಷಕ್ಕೊಮ್ಮೆ ಬರುತ್ತಾರೆ. ಅವರಿಗೆ ಇಲ್ಲಿನ ಅಭಿವೃದ್ಧಿಗಿಂತ ಇಲ್ಲಿನ ಸಂಪತ್ತಿನ ಮೇಲೆಯೇ ಹೆಚ್ಚಿನ ಆಸಕ್ತಿ. ಸಂಡೂರು ತಾಲೂಕಿನ ಸಂಪತ್ತು ಕ್ಷೇತ್ರದ ಜನತೆಗಾಗಿ ಸದ್ಬಳಕೆ ಆಗಬೇಕಿದೆ ಎಂದು ತಿಳಿಸಿದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಅವರನ್ನು ಬೆಂಬಲಿಸಿ, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಸಂಸದ ಈ.ತುಕಾರಾಂ ಮಾತನಾಡಿ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಆಶಯಗಳಂತೆ ಕ್ಷೇತ್ರದಲ್ಲಿ ಆಡಳಿತ ನಡೆಸಿಕೊಂಡು ಹೋಗಿದ್ದೇವೆ. ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಕ್ಷೇತ್ರದ ಮತದಾರರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ. ಅನ್ನಪೂರ್ಣಾ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಕೋರಿದರು.

ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಮತಯಾಚಿಸಿದರು. ಮುಖಂಡರಾದ ತುಮಟಿ ಲಕ್ಷ್ಮಣ, ಆಶಾಲತಾ ಸೋಮಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!