ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಕೆಲಸ ಮಾಡುವ ಹುದ್ದೆಗೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಿದರೆ ಹೆಸರು ತನ್ನಷ್ಟಕ್ಕೆ ತಾನೇ ಬರುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಗೋವಿಂದರಾಜು ತಿಳಿಸಿದರು.ಸಮೀಪದ ಗಿರಿ ಕ್ಷೇತ್ರದ ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಆವರಣದಲ್ಲಿ ನಿವೃತ್ತರಾದ ಮುಖ್ಯ ಶಿಕ್ಷಕ ಎಂ.ಆರ್. ಅಶೋಕ್ ಅವರಿಗೆ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ವೆಂಕಟೇಶ್ವರ ಪ್ರೌಢಶಾಲೆ ಪ್ರಾರಂಭವಾಗಿ 40 ವರ್ಷ ಕಳೆದಿದೆ. ಈ ಭಾಗಕ್ಕೆ ಪ್ರೌಢಶಾಲೆ ತರಲು ಈ ಭಾಗದ ಗ್ರಾಮಸ್ಥರು ಹೋರಾಟ ನಡೆಸಿ ಪ್ರಾರಂಭಿಸಿದ್ದರು. ಈ ಶಾಲೆಗೆ ಗಣಿತ ಶಿಕ್ಷಕರಾಗಿ ಬಂದ ಮಾರ್ಗನಳ್ಳಿ ಗ್ರಾಮದ ಎಂ.ಆರ್. ಅಶೋಕ್ ಬಂದ ಮೇಲೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಜೊತೆಗೆ ಸಂಸ್ಕೃತಿ ಸಂಪ್ರದಾಯ ಧರ್ಮದ ಬಗ್ಗೆ ಮನವರಿಕೆ ಮಾಡುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಸುಂದರ ಜೀವನ ಕಟ್ಟಿಕೊಳ್ಳಲು 34 ವರ್ಷದಿಂದ ಪ್ರಾಮಾಣಿಕವಾಗಿ ಶ್ರಮಿಸಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದರು.
ವೆಂಕಟೇಶ್ವರ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ್ ಮಾತನಾಡಿ, ಈ ಭಾಗದ ಗ್ರಾಮೀಣ ಮಕ್ಕಳಿಗೆ ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸಿ ವಿದ್ಯಾರ್ಥಿಗಳ ಮನಸ್ಸು ಗೆದ್ದು ಅವರ ಜೀವನಕ್ಕೆ ದಾರಿದೀಪವಾಗಿರುವ ಎಂ.ಆರ್. ಅಶೋಕ್ ಅವರು ನಿವೃತ್ತಿಯ ನಂತರ ನಮ್ಮ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ವೆಂಕಟೇಶ್ವರ ಪ್ರೌಢಶಾಲೆಯ ಅಧ್ಯಕ್ಷ ದಾಸರಹಳ್ಳಿ ನಾಗರಾಜ್ ಮಾತನಾಡಿ, ಗಣಿತ ಶಿಕ್ಷಣದ ಶಿಕ್ಷಕರು ಬರುವವರೆಗೂ ಈ ಶಾಲೆಗೆ ನೀವೇ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಕೆಡಿಪಿ ತಾಲೂಕು ಸದಸ್ಯ ಸಮೀವುಲ್ಲಾ ಮಾತನಾಡಿ, ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ ಶಾಲೆಗಳಲ್ಲಿ ಗುಣಮಟ್ಟದ ಫಲಿತಾಂಶ ಬರುತ್ತದೆ ಎಂಬುದಕ್ಕೆ ಕಾರಣ ಅಶೋಕ್ ಈ ಶಾಲೆಗೆ ಬಂದ ಪ್ರಾರಂಭದಿಂದಲೂ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಕೀರ್ತಿ ಬಂದಿರುವುದನ್ನು ನೆನಪಿಸಿ 60ನೇ ವರ್ಷದ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ವೈದ್ಯಾಧಿಕಾರಿ ಡಾ. ಯುವರಾಜ್, ಉಪನ್ಯಾಸಕರಾದ ತಮ್ಮಣ್ಣಗೌಡ, ಕೃಷ್ಣೇಗೌಡ, ನಿವೃತ್ತ ಶಿಕ್ಷಣಾಧಿಕಾರಿ ಸೋಮನಾಥ್, ಗ್ರಾಮ ಪಂಚಾಯತಿ ಸದಸ್ಯರಾದ ದಾಸರಹಳ್ಳಿ ದೇವರಾಜ್, ಕುಮಾರ್, ಗಣೇಶ್, ನಿಂಗರಾಜು, ನಳಿನ ಅಶೋಕ್, ಬೋರೇಗೌಡ, ಗಣೇಶ್, ನಿವೃತ್ತ ಉಪನ್ಯಾಸಕ ಶಾಂತಕುಮಾರ್, ನಿವೃತ್ತ ಶಿಕ್ಷಕ ಕೆಂಪಯ್ಯ, ಶಿವಕುಮಾರ್, ಜಿ ರಾಜಶೇಖರ್, ಶಿವಶಂಕರ್, ಮಣಿ, ಶಿವಕುಮಾರ್, ದರ್ಶಿನಿ ನಂಜುಂಡೇಗೌಡ, ಹರ್ಷಿತಾ, ಜಮ್ಮು, ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರು ಇತರರು ಹಾಜರಿದ್ದರು.