ಕನ್ನಡಪ್ರಭ ವಾರ್ತೆ ದೇವಲಾಪೂರ
ಕೊಬ್ಬಿನಂಶದ ಆಹಾರ, ಅತಿಯಾದ ಉಪ್ಪು, ಸಕ್ಕರೆ, ಎಣ್ಣೆ ಪದಾರ್ಥ ಸೇವನೆಯಿಂದ ಹಾಗೂ ಧೂಮಪಾನ, ಮದ್ಯಪಾನ, ನಿರಂತರ ಒತ್ತಡದಿಂದ ತಾವೆಲ್ಲರೂ ಹೊರಗೆ ಬಂದು ಸುಸ್ತಿರ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಧಿಕಾರಿ ಬಿ.ಪಿ.ಯಲಿಗಾರ ಹೇಳಿದರು.ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಅಧಿಕ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಾರೋಗ್ಯಕರ ಆಹಾರ, ನಿರಂತರ ಒತ್ತಡ ಅಥವಾ ಒತ್ತಡದಂತಹ ಅನಾರೋಗ್ಯಕರ ಜೀವನಶೈಲಿ, ಅಧಿಕ ಬಿಪಿಯ ಕುಟುಂಬದ ಇತಿಹಾಸ ಮತ್ತು ಬೊಜ್ಜು ತೂಕ ಹೆಚ್ಚಿನ ಅಧಿಕ ಬಿಪಿಯನ್ನು ಪ್ರಚೋದಿಸುವ ಕೆಲವು ಅಂಶಗಳಾಗಿವೆ ಎಂದು ವಿವರಿಸಿದರು.ಚಿಕ್ಕಮಕ್ಕಳ ತಜ್ಞ ಬಿ.ಐ.ಕುಂದರನಾಡ ಮಾತನಾಡಿ, ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿ ಲಕ್ಷಣ ರಹಿತವಾಗಿರುತ್ತದೆ. ಇದು ಅನೇಕ ವ್ಯಕ್ತಿಗಳಲ್ಲಿ ಗಮನಾರ್ಹ ಲಕ್ಷಣಗಳನ್ನುಂಟು ಮಾಡುವುದಿಲ್ಲ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಕೆಲವು ಲಕ್ಷಣಗಳು ಮತ್ತು ಚಿಹ್ನೆಗಳು ಉದ್ಭವಿಸಬಹುದು. ಅಧಿಕ ರಕ್ತದೊತ್ತಡಕ್ಕೆ ತೀವ್ರ ತಲೆನೋವು, ಆಯಾಸ, ದೃಷ್ಟಿ ಸಮಸ್ಯೆಗಳು, ಎದೆ ನೋವು, ಉಸಿರಾಟದ ತೊಂದರೆ ಮತ್ತು ಅನಿಯಮಿತ ಹೃದಯ ಬಡಿತ, ಅಧಿಕ ರಕ್ತದೊತ್ತಡದ ಲಕ್ಷಣಗಳನ್ನು ಅನುಭವಿಸುವುದು ಎಂದು ತಿಳಿಸಿದರು. ದಂತ ಆರೋಗ್ಯ ಅಧಿಕಾರಿ ಡಾ.ಸಾಗರ ದೇಸಾಯಿ ಮಾತನಾಡಿ, ಬಿಪಿ ಹೆಚ್ಚಾದರೇ ಹೃದಯಾಘಾತ, ಬ್ರೈನ್ ಸ್ಟ್ರೋಕ್ ನಂತಹ ಅಪಾಯಕಾರಿ ಸ್ಥಿತಿಗಳು ಬರಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ತಕ್ಷಣವೇ ಎಚ್ಚರಿಸದಿದ್ದರೇ ಪರಿಸ್ಥಿತಿ ಕೈ ಮೀರುವ ಅಪಾಯವಿದೆ. ಅದಕ್ಕಾಗಿಯೇ ಬಿಪಿ ಹೆಚ್ಚಾದ ತಕ್ಷಣ ಕೆಲವು ಸಲಹೆಗಳನ್ನು ಪಾಲಿಸುವುದು ಅಗತ್ಯ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಅರವಳಿಕೆ ತಜ್ಞರಾದ ಡಾ.ಸವಿತಾ ಗುರವ, ಎನ್ಸಿಡಿ ಆಪ್ತ ಸಮಾಲೋಚಕ ಆನಂದ ತೊಳಿ ಅಧಿಕ ರಕ್ತದೊತ್ತಡ ಕುರಿತು ಆರೋಗ್ಯ ಶಿಕ್ಷಣ ನೀಡಿದರು. ಆಸ್ಪತ್ರೆಯ ಎಲ್ಲ ಅಧಿಕಾರಿ ವರ್ಗ, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.