ಕನ್ನಡಪ್ರಭ ವಾರ್ತೆ ಕೋಲಾರಯುವಕರು ಮತ್ತು ವಿದ್ಯಾರ್ಥಿಗಳು ಧೂಮಪಾನ, ಗುಟ್ಕಾ, ತಂಬಾಕು, ಗಾಂಜಾ, ಮದ್ಯ, ಕೊಕಾ ಮುಂತಾದ ಮಾದಕ ವಸ್ತುಗಳ ಬಳಕೆಯಿಂದ ದೂರವಿರುವುದಾಗಿ ಸಂಕಲ್ಪ ಮಾಡಿದಾಗ ಮಾತ್ರ ನಮ್ಮ ಕೋಲಾರ ಜಿಲ್ಲೆಯನ್ನು ವ್ಯಸನ ಮುಕ್ತ ಮಾದರಿ ಜಿಲ್ಲೆಯನ್ನಾಗಿ ಮಾಡಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಅಭಿಪ್ರಾಯಪಟ್ಟರು.ನಗರದ ಕ್ಲಾಕ್ ಟವರ್ ಸಮೀಪದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಕೈಗಾರಿಕಾ ಪ್ರಾಂಗಣದಲ್ಲಿ ದುಶ್ಚಟಗಳಿಂದ ದೂರವಿರಿ ಓದುವುದೇ ನಿಮ್ಮ ಗುರಿ, ಮಾದಕ ವಸ್ತುಗಳ ನಿರ್ಮೂಲನೆ, ಬಾಲ್ಯ ವಿವಾಹ, ಪೋಕ್ಸೋ ಕಾಯ್ದೆಗಳ ಬಗ್ಗೆ ಅರಿವು ಅಭಿಯಾನ ಉದ್ಘಾಟಿಸಿ ಮಾತನಾಡಿದರು. ಭವಿಷ್ಯ ಹಾಳು ಮಾಡುವ ವ್ಯಸನ
ಮಾದಕ ವಸ್ತುಗಳ ವಿರುದ್ದ ಕಠಿಣಾ ಕಾನೂನುಗಳನ್ನು ಜಾರಿಗೆ ತರಲಾಗಿದ್ದು ಕೆಲವೊಂದು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನುಗಳು ಸಿಗುವುದಿಲ್ಲ. ಅನೇಕ ಸಂಕಷ್ಟಗಳಿಗೆ ಸಿಲುಕಿ ಪಶ್ಚಾತ್ತಾಪ ಪಡುವಂತಾಗುತ್ತಾರೆ, ಶಿಕ್ಷೆಗೆ ಒಳಗಾದವರಿಗೆ ಸಮಾಜದಲ್ಲಿ ಸರ್ಕಾರಿ ಉದ್ಯೋಗವಿರಲಿ ಖಾಸಗಿ ಉದ್ಯೋಗಗಳನ್ನು ಸಿಗುವುದು ಕಷ್ಟಕರವಾಗಲಿದೆ. ಕ್ಷಣಿಕ ಸುಖಕ್ಕಾಗಿ ಜೀವನದಲ್ಲಿ ಭವಿಷ್ಯ ಹಾಳು ಕೊಳ್ಳುತ್ತಿರುವುದು ವಿಷಾದನೀಯ ಸಂಗತಿ ಎಂದರು. ನಾಗರೀಕ ಸಮಾಜದಲ್ಲಿ ಶಿಕ್ಷಣಸ್ಥರ ಸಮಾಜದಲ್ಲೂ ಬಾಲ್ಯವಿವಾಹ ಪ್ರಕರಣಗಳು ಕಳೆದ ವರ್ಷ ೮೦೦ ಪ್ರಕರಣಗಳು ಕಂಡು ಬಂದಿರುವುದು ಕಳವಳಕಾರಿಯಾಗಿದೆ, ಇಂತಹ ವಿವಾಹ ಮಾಡಿದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೋಷಕರಿಗೆ ೨ ವರ್ಷ ಜೈಲು ೧ ಲಕ್ಷ ರೂ ದಂಡ ವಿಧಿಸಬಹುದಾಗಿದೆ. ಇದರಲ್ಲಿ ಭಾಗಿಯವರಿಗೂ ಶಿಕ್ಷೆಯುಂಟು ಎಂದು ವಿವರಿಸಿದರು.
ಅಪ್ರಾಪ್ತರು ವಾಹನ ಚಲಾಯಿಸುವುದ ಅಪರಾಧವಾಗಲಿದೆ. ಅಪ್ರಾಪ್ತರಿಗೆ ವಾಹನ ನೀಡಿದ ಮಾಲೀಕರಿಗೆ ಹಾಗೂ ಪೋಷಕರಿಗೂ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ೧೮ ವರ್ಷ ಮೇಲ್ಪಟ್ಟವರು ಮಾತ್ರ ವಾಹನ ಪರವಾನಗಿ ಪಡೆದು ಚಲಾಯಿಸ ಬೇಕು. ವಾಹನಗಳಿಗೆ ವಿಮೆ ಮಾಡಿಸಿರಬೇಕು. ವಿಮೆ ಕ್ಲೈಮ್ ಮಾಡಲು ವಾಹನ ಚಾಲಕನು ೧೮ ವರ್ಷ ಮೇಲ್ಪಟ್ಟಿರಬೇಕು ಎಂದು ತಿಳಿಸಿದರು.ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ವಿಕಾಸ್.ಡಿ, ಈಜಲ-ಈನೆಲ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವೆಂಕಟಾಚಲಪತಿ, ಲಕ್ಷ್ಮೀ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಜಿಲ್ಲಾ ಸಲಹೆಗಾರ ಮಹಮದ್.ಪಿ, ಹಿರಿಯ ದಲಿತ ಹೋರಾಟಗಾರ ಟಿ.ವಿಜಯಕುಮಾರ್, ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಅಬ್ಬಣಿ ಶಿವಪ್ಪ. ಸಂವಾದ ಮಂಜುನಾಥ್ ಇದ್ದರು.