ಕಳೆಕಟ್ಟಿದ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ

KannadaprabhaNewsNetwork |  
Published : Jan 19, 2024, 01:45 AM IST
ಪೋಟೋ೧೮ಸಿಪಿಟಿ೧: ಕೆಂಗಲ್ ದನಗಳ ಜಾತ್ರೆಯಲ್ಲಿ ಗಮನಸೆಳೆಯುತ್ತಿರುವ ಏಕಲವ್ಯ ಹೋರಿ.  | Kannada Prabha

ಸಾರಾಂಶ

ಚನ್ನಪಟ್ಟಣ: ಸುಮಾರು ೪ ವರ್ಷಗಳ ಬಳಿಕ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಕಳೆಕಟ್ಟಿದ್ದು, ಹಳ್ಳಿಕಾರ್ ತಳಿ ರಾಸುಗಳು ಸೇರಿದಂತೆ ವಿವಿಧ ತಳಿಯ ರಾಸುಗಳ ಗಜ್ಜೆಯ ಸದ್ದು ಕೇಳಿಬಂದಿದೆ.

ಚನ್ನಪಟ್ಟಣ: ಸುಮಾರು ೪ ವರ್ಷಗಳ ಬಳಿಕ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಕಳೆಕಟ್ಟಿದ್ದು, ಹಳ್ಳಿಕಾರ್ ತಳಿ ರಾಸುಗಳು ಸೇರಿದಂತೆ ವಿವಿಧ ತಳಿಯ ರಾಸುಗಳ ಗಜ್ಜೆಯ ಸದ್ದು ಕೇಳಿಬಂದಿದೆ.

ಅಯ್ಯನಗುಡಿ ಜಾತ್ರೆ ಎಂದೇ ಪ್ರಸಿದ್ಧವಾದ ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದ ರಾಸುಗಳು ಆಗಮಿಸುತ್ತವೆ. ಹೊರರಾಜ್ಯಗಳಿಂದಲೂ ವರ್ತಕರು ಆಗಮಿಸಿ ರಾಸುಗಳನ್ನು ಖರೀದಿಸುತ್ತಾರೆ. ಕೊರೋನಾ ಕಾರಣಕ್ಕೆ ಮೂರು ವರ್ಷ ಹಾಗೂ ಕಳೆದ ವರ್ಷ ರಾಸುಗಳಿಗೆ ಅಂಟಿದ್ದ ಚರ್ಮರೋಗದ ಕಾರಣ ದನಗಳ ಜಾತ್ರೆಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಈ ಬಾರಿ ಯಾವುದೇ ವಿಜ್ಞವಿಲ್ಲದೇ ದನಗಳ ಜಾತ್ರೆ ನಡೆದಿದ್ದು, ದೂರದೂರುಗಳಿಂದ ರೈತರು ತಮ್ಮ ರಾಸುಗಳೊಂದಿಗೆ ಕೆಂಗಲ್‌ ಜಾತ್ರೆಗೆ ಆಗಮಸಿ ಮೆರಗು ತಂದಿದ್ದಾರೆ.

ಕೆಂಗಲ್ ದೇವಾಯಲಯದ ಆವರಣ, ಪಕ್ಕದ ನೀಲಗಿರಿ ತೋಪು, ಬೆಂಗಳೂರು-ಮೈಸೂರು ಹೆದ್ದಾರಿ, ಚಿಕ್ಕಮಣ್ಣುಗುಡ್ಡೆ ಪ್ರದೇಶದಲ್ಲಿ ರಾಸುಗಳನ್ನು ಕಟ್ಟಿದ್ದು, ರಾಜ್ಯವಲ್ಲದೇ ಹೊರರಾಜ್ಯಗಳಿಂದಲೂ ಆಗಮಿಸಿರುವ ವರ್ತಕರು ಹಾಗೂ ರೈತರು ರಾಸುಗಳನ್ನು ಮಾರುವ ಹಾಗೂ ಖರೀದಿಸುವ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ತಳಿಯ ರಾಸುಗಳೊಂದಿಗೆ ಪೋಟೋ ಕ್ಲಿಕಿಸಿಕೊಳ್ಳಲು ಜನ ಮುಗಿ ಬಿದ್ದರು.

ಹಳ್ಳಿಕಾರ್ ರಾಸುಗಳ ಕಲರವ: ಇನ್ನು ಜಾತ್ರೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಳ್ಳಿಕಾರ್ ತಳಿಯ ರಾಸುಗಳು ಆಗಮಿಸಿದ್ದು, ವಿವಿಧೆಡೆಯಿಂದ ಆಗಮಿಸಿರುವ ರೈತರು, ಹಳ್ಳಿಕಾರ್ ತಳಿಯ ರಾಸುಗಳ ಖರೀದಿ ಹಾಗೂ ಮಾರಾಟದಲ್ಲಿ ತೊಡಗಿದ್ದಾರೆ. ಜಾತ್ರೆಯಲ್ಲಿ ೫೦ ಸಾವಿರದಿಂದ ೫ಲಕ್ಷದವರೆಗೆ ರಾಸುಗಳು ಇದ್ದು, ರೈತರು ಹಸುಗಳ ಸುಳಿ, ಕೊಂಬು ಸೇರಿದಂತೆ ವಿವಿಧ ಗುಣಲಕ್ಷಣಗಳನ್ನು ಪರಿಶೀಲಿಸಿ ಬೆಲೆ ನಿಗದಿ ಪಡಿಸುವ ಚಟುವಟಿಕೆ ನಡೆಸಿದರು. ಜಾತ್ರೆಯಲ್ಲಿ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ನೀಡಲು ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆದಿದು ಮಾಹಿತಿ ನೀಡಿದರು. ಬಾಕ್ಸ್..................

ಏಕಲವ್ಯನದೇ ಸದ್ದು!

ಅಯ್ಯನಗುಡಿ ದನಗಳ ಜಾತ್ರೆ ಹಾಗೂ ರಾಸುಗಳ ಪ್ರದರ್ಶನದಲ್ಲಿ ಸುಮಾರು ಅರ್ಧಕೋಟಿಗೂ ಹೆಚ್ಚು ಬೆಲೆ ಬಾಳುವ ಏಕಲವ್ಯ ಹೋರಿಯ ಸದ್ದೇ ಜೋರಾಗಿದ್ದು, ಜಾತ್ರೆಯ ಆಕರ್ಷಕ ಕೇಂದ್ರಬಿಂದುವಾಗಿದೆ.

ತುಮಕೂರು ಜಿಲ್ಲೆಯ ತುರುವೇಕೆರೆಯ ಮಾಜಿ ಶಾಸಕ ಮಸಾಲೆ ಜಯರಾಮ್ ಅವರ ಹೋರಿ ಏಕಲವ್ಯನನ್ನು ಈ ಬಾರಿಯ ಕೆಂಗಲ್ ದನಗಳ ಜಾತ್ರೆಯಲ್ಲಿ ಪ್ರದರ್ಶನಕ್ಕಿಡಲಾಗಿದ್ದು, ಇದರೊಂದಿಗೆ ಏಕಲವ್ಯನಿಂದ ಜನ್ಮ ಪಡೆದ ಹೆಣ್ಣು ಕರು ಪುಣ್ಯ ಕೋಟಿ ಮತ್ತು ಅದರ ಎರಡನೇ ಕರುವನ್ನು ಕಟ್ಟಿದ್ದು, ಇದನ್ನು ಕಣ್ತುಂಬಿಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.

ನಶಿಸುತ್ತಿರುವ ಹಳ್ಳಿಕಾರ್ ಸಂತತಿಯ ನಾಟಿ ಹಸುವಿನ ಬಿತ್ತನೆ ತಳಿಯಾಗಿರುವ ಏಕಲವ್ಯ ಹೋರಿಗೆ ೪ ವರ್ಷ. ಮಂಡ್ಯ ಜಿಲ್ಲೆ ಬನ್ನೂರಿನ ಕೃಷ್ಣೇಗೌಡರಿಂದ ಮಸಾಲೆ ಜಯರಾಮ್ ಇದನ್ನು 26 ಲಕ್ಷಕ್ಕೆ ಖರೀದಿಸಿದ್ದು, ಬೇರೆಯವರು 67 ಲಕ್ಷಕ್ಕೆ ಕೇಳಿದರು ಇದನ್ನು ಮಾರಾಟ ಮಾಡದೇ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ಈ ಹೋರಿ ಇದುವರೆಗೆ ಸುಮಾರು ೭೦೦ಕ್ಕೂ ಹೆಚ್ಚು ಕರುಗಳು ಈ ಹೋರಿಯಿಂದ ಜನಿಸಿವೆ ಎನ್ನಲಾಗಿದೆ.

ಬಾಕ್ಸ್.....................

ಸೀಮೆ ಹೋರಿ ಸುಲ್ತಾನ

ಜಾತ್ರೆಯಲ್ಲಿ ಬೆಂಗಳೂರಿನ ಕಂಬಿಪೂರದ ಎಚ್‌ಎಫ್ ಜಾತಿಯ ಹೋರಿ ಸುಲ್ತಾನ ಸಹ ಸಾಕಷ್ಟು ಗಮನ ಸೆಳೆಯುತ್ತಿದೆ. ಸುಮಾರು ೧೫೦೦ ಕೆಜಿಗೂ ಹೆಚ್ಚು ತೂಕವಿರುವ ಈ ಹೋರಿಗೆ ೪ ವರ್ಷ ವಯಸ್ಸಾಗಿದ್ದು ಮಜಭೂತಾಗಿರುವ ಈ ಹೋರಿಯನ್ನು ಬ್ರೀಡಿಂಗ್‌ಗಾಗಿಯೇ ಸಾಕಲಾಗಿದೆ. ಇದರ ವೀರ್ಯಾಣು ಹೆಚ್ಚು ಫಲವತ್ತೆ ಹೋಂದಿದ್ದು, ಇದರ ತಾಯಿ ವರ್ಷಕ್ಕೆ ೧೧,೮೬೨ ಲೀಟರ್ ಹಾಲನ್ನು ನೀಡಿತ್ತು ಎನ್ನಲಾಗಿದೆ.

ಪೋಟೋ೧೮ಸಿಪಿಟಿ೧:

ಕೆಂಗಲ್ ದನಗಳ ಜಾತ್ರೆಯಲ್ಲಿ ಗಮನಸೆಳೆಯುತ್ತಿರುವ ಏಕಲವ್ಯ ಹೋರಿ. ಪೊಟೋ೧೮ಸಿಪಿಟಿ೨:

ಕೆಂಗಲ್ ದನಗಳ ಜಾತ್ರೆಯಲ್ಲಿ ಗಮನ ಸೆಳೆಯುತ್ತಿರುವ ಹೋರಿ ಸುಲ್ತಾನ.ಪೊಟೊ೧೮ಸಿಪಿಟಿ೩:

ಜಾತ್ರೆಯಲ್ಲಿ ಭಾಗಿಯಾಗಿರುವ ರಾಸುಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಐಕ್ಯತೆಯಿಂದಲೇ ಸಶಕ್ತ ಸಮಾಜ ನಿರ್ಮಾಣ: ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯರು
ಶಿರಾ ನಂದಿನಿ ಕ್ಷೀರ ಭವನದಲ್ಲಿ ಯಶಸ್ವಿನಿ ನೋಂದಣಿ ಕಾರ್ಯಗಾರ