ಕೂಡ್ಲಿಗಿ: ಎರಡು ದಿನಗಳ ಒನಕೆ ಓಬವ್ವ ಉತ್ಸವದಲ್ಲಿ ಕೊನೆಯ ದಿನದಲ್ಲಿ ಭೀಮಣ್ಣ ಗಜಾಪುರ ರಚಿಸಿದ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ಕೃತಿ ಆಧಾರಿತ ಗಟ್ಟಿಗಿತ್ತಿ ಓಬವ್ವ ನಾಟಕ ಎಲ್ಲರ ಗಮನ ಸೆಳೆಯಿತು. ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕಿನ ಗಡಿಗ್ರಾಮ ಟಿ.ಕಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಮೋಘ ಅಭಿನಯದ ಮೂಲಕ ತವರು ಮನೆ ಗುಡೇಕೋಟೆಯಲ್ಲಿ ಒನಕೆ ಓಬವ್ವಳ ಬಾಲ್ಯ, ಚಿತ್ರದುರ್ಗದ ಕೋಟೆಯಲ್ಲಿ ಗಂಡನ ಜೊತೆ ಜೀವನ ಜೊತೆಗೆ ಚಿತ್ರದುರ್ಗವನ್ನು ಹೈದರಾಲಿಯಿಂದ ರಕ್ಷಿಸಿದ ಬಗೆಯನ್ನು ಅಲ್ಲದೇ ಹೈದರಾಲಿ ಕಡೆಯ ಸೈನಿಕರ ತಲೆ ರುಂಡಾಡಿದ ವೀರಮಹಿಳೆಯ ಅಭಿನಯ ಸೇರಿದಂತೆ ಎಲ್ಲ ಮಕ್ಕಳು ತಮ್ಮ ಮನೋಜ್ಞ ಅಭಿನಯದ ಮೂಲಕ ನೆರೆದಿದ್ದ 30 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಮನಗೆದ್ದರು. ಟಿ.ಕಲ್ಲಹಳ್ಳಿಯ ಯುವಕ ಹರೀಶ್ ಜಿಂಕೆ ಪ್ರೇಕ್ಷಕರ ಮನಕಲಕುವಂತೆ ಮಕ್ಕಳಿಗೆ ಅಭಿನಯದ ನಿರ್ದೇಶನ ಮಾಡಿದರು.
ಕೋಟ್:
ಭೀಮಣ್ಣ ಗಜಾಪುರ ರಚನೆಯ ಗುಡೇಕೋಟೆಯ ಗಟ್ಟಿಗಿತ್ತಿ ಒನಕೆ ಓಬವ್ವ ನಾಟಕ ಇಡೀ ಉತ್ಸವಕ್ಕೆ ಕಳೆಕಟ್ಟಿದಂತಿತ್ತು. ಈ ನಾಟಕ ಹರೀಶ್ ಜಿಂಕೆ ಎನ್ನುವ ಯುವಕ ನಿರೀಕ್ಷೆಗೂ ಮೀರಿ ನಿರ್ದೇಶನ ಮಾಡಿದ್ದಾನೆ. ನಿರ್ದೇಶನದಲ್ಲಿ ನಾಗರಹಾವು ಚಲನಚಿತ್ರದ ಕನ್ನಡ ನಾಡಿನ ವೀರರಮಣಿಯ ಹಾಡಿನ ಕೆಲವು ಸಾಲುಗಳನ್ನು ನಾಟಕದಲ್ಲಿ ಸಂದರ್ಭಕ್ಕೆ ತಕ್ಕಂತೆ ಬಳಿಸಿಕೊಳ್ಳಬೇಕಿತ್ತು. ರಾಜ್ಯ, ರಾಷ್ಟ್ರಮಟ್ಟಕ್ಕೆ ಈ ನಾಟಕ ಸ್ಪರ್ಧೆಗೆ ಹೋಗುವ ಅರ್ಹತೆ ಈ ನಾಟಕಕ್ಕೆ ಇದೆ.-ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆಮಾತಾ ಮಂಜಮ್ಮ ಜೋಗತಿ.
ಒನಕೆ ಓಬವ್ವಳ ಉತ್ಸವದಲ್ಲಿ ಒನಕೆ ಓಬವ್ವಳ ಕಿರು ನಾಟಕಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆ ಅಭಿನಯಿಸಲು ಅನುಮತಿ ನೀಡಿರಲಿಲ್ಲ ಆದರೆ ಶಾಸಕರ ಇತಿಹಾಸ ಪ್ರಜ್ಞೆಯಿಂದ ಅವರ ಅನುಮತಿ ಮೇರೆಗೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು.