ಡಿಕೆಶಿ ಹೇಳಿದ್ದು ಕಾಂಗ್ರೆಸ್ಸಿನ ಹೃದಯದ ಮಾತು: ಆರೋಪ

KannadaprabhaNewsNetwork | Published : Mar 26, 2025 1:35 AM

ಕೊಪ್ಪ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಕಿಸೆಯಲ್ಲಿ ಸದಾ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾವೇ ಸಂವಿಧಾನ ರಕ್ಷಕರು ನಾವು ಇರುವುದರಿಂದಲೇ ದಲಿತರು ಮತ್ತು ಹಿಂದುಳಿದ ವರ್ಗದವರ ಮನೆಯಲ್ಲಿ ಬೆಳಕಾಗುತ್ತಿದೆ ಎನ್ನುತ್ತಿದ್ದಾರೆ. ಅದೇ ಪಕ್ಷದದ ಉಪಮುಖ್ಯಮಂತ್ರಿ ಡಿಕೆಶಿ ಸಂವಿಧಾನ ಬದಲಾಯಿಸಿಯಾದರೂ ಮುಸಲ್ಮಾನರಿಗೆ ಗುತ್ತಿಗೆ ಕೊಡುತ್ತೇವೆ ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆ ಎಂದು ಬಿಜೆಪಿ ಮುಖಂಡ ಪುಣ್ಯಪಾಲ್ ಹೇಳಿದರು.

ಕೊಪ್ಪ ಬಿಜೆಪಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಕೊಪ್ಪ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರು ಕಿಸೆಯಲ್ಲಿ ಸದಾ ಸಂವಿಧಾನದ ಪುಸ್ತಕ ಹಿಡಿದು ಓಡಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾವೇ ಸಂವಿಧಾನ ರಕ್ಷಕರು ನಾವು ಇರುವುದರಿಂದಲೇ ದಲಿತರು ಮತ್ತು ಹಿಂದುಳಿದ ವರ್ಗದವರ ಮನೆಯಲ್ಲಿ ಬೆಳಕಾಗುತ್ತಿದೆ ಎನ್ನುತ್ತಿದ್ದಾರೆ. ಅದೇ ಪಕ್ಷದದ ಉಪಮುಖ್ಯಮಂತ್ರಿ ಡಿಕೆಶಿ ಸಂವಿಧಾನ ಬದಲಾಯಿಸಿಯಾದರೂ ಮುಸಲ್ಮಾನರಿಗೆ ಗುತ್ತಿಗೆ ಕೊಡುತ್ತೇವೆ ಎಂದು ಹೇಳಿರುವುದು ಸಂವಿಧಾನ ವಿರೋಧಿ ನಡೆ ಎಂದು ಬಿಜೆಪಿ ಮುಖಂಡ ಪುಣ್ಯಪಾಲ್ ಹೇಳಿದರು. ಡಿಕೆಶಿಯವರ ಸಂವಿಧಾನ ಬದಲಾವಣೆ ಹೇಳಿಕೆ ವಿರೋಧಿಸಿ ಮಂಗಳವಾರ ಕೊಪ್ಪ ಬಿಜೆಪಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ೧೯೫೨ರ ಚುನಾವಣೆಯಲ್ಲಿ ಅಂಬೇಡ್ಕರ್‌ರನ್ನು ಅವಿರೋಧ ವಾಗಿ ಆಯ್ಕೆ ಮಾಡದೆ ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಪ್ರಯತ್ನಿಸಿದೆ. ಅಂಬೇಡ್ಕರ್‌ ಮರಣ ಹೊಂದಿದಾಗ ಅವರ ಅಂತ್ಯಸಂಸ್ಕಾರಕ್ಕಾಗಿ ದೆಹಲಿಯಲ್ಲಿ ೬*೩ ಅಡಿ ಜಾಗ ಕೊಡದೆ ಅವರಿಗೆ ಅವಮಾನ ಮಾಡಿದೆ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ಹಾಗೂ ಅವರ ಅನುಯಾಯಿಗಳು ಸಂವಿಧಾನವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಸುವ ಮೂಲಕ ಘನಘೋರ ಅಪಚಾರ ಮಾಡಿದ್ದಾರೆ. ಜನರೆದುರು ನಾವು ಸಂವಿಧಾನ ರಕ್ಷಕರು ಎಂದು ಬಿಂಬಿಸಿಕೊಳ್ಳುತ್ತಾರೆ ಎಂದರು. ಹನಿಟ್ರಾಫ್ ವಿಚಾರವಾಗಿ ಕಾಂಗ್ರೆಸ್ಸಿನ ಮುಖಂಡರ ಹೆಸರು ಕೇಳಿಬಂದಾಗ ಚರ್ಚೆಗೂ ಅವಕಾಶ ಕೊಡದೆ ಬಿಜೆಪಿಯ ೧೮ ಮಂದಿ ಶಾಸಕರನ್ನು ಅಸಂವಿಧಾನಿಕವಾಗಿ ಅಮಾನತುಪಡಿಸಲಾಗಿದೆ. ಸಂವಿಧಾನ ಬದಲಾವಣೆ ಮಾತು ಕಾಂಗ್ರೆಸ್ಸಿನ ಹೃದಯದ ಮಾತಾಗಿದೆ. ಇಂತಹ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಹೊಸೂರು ದಿನೇಶ್, ಡಾ. ಜಿ.ಎಸ್. ಮಹಾಬಲ ಮುಂತಾದವರು ಮಾತನಾಡಿದರು. ಪ.ಪಂ. ಅಧ್ಯಕ್ಷೆ ಗಾಯತ್ರಿ ಭಟ್, ಉಪಾಧ್ಯಕ್ಷೆ ಗಾಯತ್ರಿ ಅಣ್ಣಪ್ಪ ಶೆಟ್ಟಿ, ಸದಸ್ಯರಾದ ಸುಜಾತ, ರೇಖಾ ಪ್ರಕಾಶ್, ಅನುಸೂಯ ಕೃಷ್ಣಮೂರ್ತಿ, ಅರುಣ್ ಶಿವಪುರ ಮುಂತಾದವರಿದ್ದರು.