ಜಾತಿಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ನಿಲುವೇನು?: ಸಚಿವ ಪ್ರಿಯಾಂಕ್ ಖರ್ಗೆ

KannadaprabhaNewsNetwork | Updated : Apr 22 2025, 10:33 AM IST

ಸಾರಾಂಶ

ಜಾತಿ ಗಣತಿ ವರದಿ ಬಗ್ಗೆ ವಿರೋಧ ಪಕ್ಷದವರು, ಬಿಜೆಪಿಯವರು ಅಪಪ್ರಚಾರ ನಿಲ್ಲಿಸಬೇಕು. ಇದರ ಜತೆಗೆ, ಜಾತಿ ಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರ ನಿಲುವೇನು ಎಂದು ತಿಳಿಸಬೇಕು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

 ಬೆಂಗಳೂರು : ಜಾತಿ ಗಣತಿ ವರದಿ ಬಗ್ಗೆ ವಿರೋಧ ಪಕ್ಷದವರು, ಬಿಜೆಪಿಯವರು ಅಪಪ್ರಚಾರ ನಿಲ್ಲಿಸಬೇಕು. ಇದರ ಜತೆಗೆ, ಜಾತಿ ಗಣತಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರ ನಿಲುವೇನು ಎಂದು ತಿಳಿಸಬೇಕು ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಸುಳ್ಳು ವರದಿ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ, ಅವರು ವರದಿಯನ್ನು ತರಿಸಿಕೊಳ್ಳಬೇಕು. ಅದರಲ್ಲಿ ಯಾರ ಸಹಿಗಳು ಇವೆ ಎಂದು ನೋಡಲಿ. ಆಯೋಗದ ಸಮಿತಿಗೆ ಜಯಪ್ರಕಾಶ್ ಹೆಗ್ಡೆ, ಎಚ್.ಎಸ್.ಕಲ್ಯಾಣ ಕುಮಾರ್, ಬಿ.ಎಸ್.ರಾಜಶೇಖರ್, ಅರುಣ್ ಕುಮಾರ್, ಕೆ.ಟಿ.ಸುವರ್ಣ, ಶಾರದಾ ನಾಯ್ಕ್, ದಯಾನಂದ ಅವರು ಸದಸ್ಯರಾಗಿದ್ದರು. ಅವರೇ ವರದಿಗೆ ಸಹಿ ಮಾಡಿದ್ದಾರೆ. ಇವರೆಲ್ಲ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಮಕಗೊಂಡವರು. ಇವರು ಕೂಡ ವರದಿ ಸಿದ್ಧಪಡಿಸುವಲ್ಲಿ ಪಾತ್ರ ಹೊಂದಿದ್ದಾರೆ. ಅದೇ ವರದಿಯನ್ನು ಸಂಪುಟದಲ್ಲಿ ಮಂಡಿಸಲಾಗಿದೆ ಎಂದರು.

ಇದೊಂದು ಸರ್ವೇ ವರದಿ. ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಮುಖ್ಯಮಂತ್ರಿಯವರು ಸಚಿವರಿಂದ ಅಭಿಪ್ರಾಯ ಕೇಳಿದ್ದಾರೆ. ನಿಮ್ಮ ಸಮಾಜದ ಮುಖ್ಯಸ್ಥರೊಂದಿಗೆ ಮಾತನಾಡಿ, ಅಭಿಪ್ರಾಯ ಸಂಗ್ರಹಿಸಿ ಲಿಖಿತ ರೂಪದಲ್ಲಿ ಅಭಿಪ್ರಾಯ ನೀಡಲು ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಆದರೂ, ಬಿಜೆಪಿಯವರಿಗೇಕೆ ಅಷ್ಟೊಂದು ಆತುರ ಎಂದು ಖರ್ಗೆ ಪ್ರಶ್ನಿಸಿದರು.

ವರದಿ ಮೂಲ ಪ್ರತಿ ಕಳೆದುಹೋಗಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ವರದಿಯ ಎಲ್ಲಾ ಡೇಟಾ ಜಿಲ್ಲಾಧಿಕಾರಿಗಳ ಬಳಿ ಇದೆ. ಅಗತ್ಯವಿದ್ದರೆ ಆರ್.ಅಶೋಕ್ ಮನೆಗೆ ತಲುಪಿಸಲಾಗುತ್ತದೆ. ವರದಿಯಲ್ಲಿ ಲೋಪ ಇದ್ದರೆ ಪರಿಶೀಲಿಸಬಹುದು. ಬರೀ ಸುಳ್ಳು ಹೇಳಿಕೊಂಡು ಓಡಾಡುವುದೇ ಅವರ ಕೆಲಸನಾ? ಅನುಮಾನ ಇದ್ದರೆ ವರದಿ ಸಿದ್ಧಪಡಿಸಿದವರನ್ನು ಕರೆಸಿಕೊಂಡು ಮಾತನಾಡಲಿ. ದತ್ತಾಂಶ ಸರಿ ಇದೆಯಾ? ತಿದ್ದಿದ್ದಾರಾ ಎಂದು ಅವರನ್ನೇ ಕೇಳಲಿ ಎಂದು ಹೇಳಿದರು.

Share this article