- ಬಡವರ ಜೇಬಿಗೆ ಕೆಎಸ್ಆರ್ಟಿಸಿ ನೀತಿ ಕತ್ತರಿ । ಬಸ್ ನಿಲ್ದಾಣವಿಲ್ಲದೇ ರಸ್ತೆ ಪಕ್ಕದಲ್ಲೇ ಬಸ್ಗೆ ಕಾಯುವ ದುಸ್ಥಿತಿ
ಕನ್ನಡಪ್ರಭ ವಾರ್ತೆ ಹರಿಹರ
ಇಲ್ಲಿಗೆ ಸಮೀಪದ ಎಕ್ಕೆಗೊಂದಿ ಕ್ರಾಸ್ಗೆ ಬಸ್ ನಿಲುಗಡೆ ಸೌಲಭ್ಯ ಬಗೆಹರಿಯದೇ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಮಲೇಬೆನ್ನೂರಿನಿಂದ ಬಸ್ ಹತ್ತಿದರೆ ಹರಿಹರಕ್ಕೆ ಟಿಕೆಟ್ ತಗಿಸಬೇಕು. ಹರಿಹರದಿಂದ ಬಸ್ ಹತ್ತಿದರೆ ಕುಂಬಳೂರಿಗೆ ಟಿಕೆಟ್ ತೆಗಿಸಬೇಕು. ಇದರಿಂದಾಗಿ ಎಕ್ಕೆಗೊಂದಿ ಕ್ರಾಸ್ನಲ್ಲಿ ಬಸ್ ಇಳಿಯುವವರು ವಿನಾಕಾರಣ ದುಪ್ಪಟ್ಟು ಹಣ ಖರ್ಚು ಮಾಡಿ ಸಂಚರಿಸುವಂತಾಗಿದೆ.ಎಕ್ಕೆಗೊಂದಿ ಕ್ರಾಸ್ಗೆ ಹರಿಹರ- ಶಿವಮೊಗ್ಗ ಮಾರ್ಗವಾಗಿ ಸಂಚರಿಸುವ ಬಸ್ ನಿಲುಗಡೆಗೆ ಆಸ್ಪದ ನೀಡಿ, ದಾವಣಗೆರೆ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಜುಲೈ 24ರಂದು ಆದೇಶ ಮಾಡಿದ್ದಾರೆ. ಆದರೆ ಬಸ್ಗಳ ಕಂಡಕ್ಟರ್ಗಳು ಮಾತ್ರ ಅಧಿಕಾರಿಗಳ ಆದೇಶ ಪಾಲಿಸಲು ಸಿದ್ಧರಿಲ್ಲ. ಇದು ಪ್ರಯಾಣಿಕರಿಗೆ ಆರ್ಥಿಕ ಹಾಗೂ ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತಿದೆ.
ಹೊಳೆ ಸಿರಿಗೆರೆ ಪ್ರಯಾಣಿಕ ಪ್ರಶಾಂತ ಮತ್ತು ಇತರರು ಬುಧವಾರ ರಾತ್ರಿ ಹರಿಹರದಿಂದ ಎಕ್ಕೆಗೊಂದಿಗೆ ಸರ್ಕಾರಿ ಬಸ್ ಟಿಕೆಟ್ ಕೇಳಿದ್ದಾರೆ. ಆಗ ಹರಿಹರ- ಶಿವಮೊಗ್ಗ ಮಾರ್ಗದ ಬಸ್ ಕಂಡಕ್ಟರ್ ಎಕ್ಕೆಗೊಂದಿಗೆ ಟಿಕೆಟ್ ನಿರಾಕರಿಸಿದ್ದಾರೆ. ಬಳಿಕ ವಿಭಾಗೀಯ ಸಾರಿಗೆ ಅಧಿಕಾರಿಯಾದ ಫಕೃದ್ದೀನ್ ಅವರಿಗೆ ಪ್ರಯಾಣಿಕರು ಕರೆ ಮಾಡಿ, ಸಮಸ್ಯೆ ಗಮನಕ್ಕೆ ತಂದಿದ್ದಾರೆ. ಡಿಟಿಒ ಅವರು ಟಿಕೆಟ್ ನೀಡುವಂತೆ ಹೇಳಿದರೂ ಬಸ್ ಕಂಡಕ್ಟರ್ ಮಾತ್ರ ಎಕ್ಕೆಗೊಂದಿಗೆ ಟಿಕೆಟ್ ಹರಿಯದೇ ಉದ್ದಟತನ ತೋರಿದ್ದಾರೆ. ಎಕ್ಕೆಗೊಂದಿ ಪ್ರಯಾಣಿಕರನ್ನು ಬಸ್ ಇಳಿಸಿದ್ದರಿಂದ ದುಪ್ಪಟ್ಟು ಹಣ ತೆತ್ತು ಆಟೋ ಮುಖಾಂತರ ಎಕ್ಕೆಗೊಂದಿಗೆ ಬಂದಿರುವುದಾಗಿ ಸಮಸ್ಯೆ ಹೇಳಿಕೊಂಡರು. ಇದೇ ಪರಿಸ್ಥಿತಿ ಮಲೇಬೆನ್ನೂರು ಬಸ್ ನಿಲ್ದಾಣದಲ್ಲೂ ಇದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
(ಬಾಕ್ಸ್) * ₹20 ಬದಲಿಗೆ ₹33 ಹಣ ತೆತ್ತಬೇಕಿದೆ: ಮಾಜಿ ಸೈನಿಕ
ಎಕ್ಕೆಗೊಂದಿ ಕ್ರಾಸ್ ಹರಿಹರ ಮತ್ತು ಮಲೇಬೆನ್ನೂರು ಮಧ್ಯದಲ್ಲಿ ಬರುತ್ತದೆ. ಕೆಎಸ್ಸಾರ್ಟಿಸಿ ಅಧಿಕಾರಿಗಳು ಬಸ್ ನಿಲುಗಡೆಗೆ ಆದೇಶ ಮಾಡಿದ್ದಕ್ಕಾಗಿ ಅಭಿನಂದನೆಗಳು. ಆದರೆ, ಹರಿಹರದಿಂದ ಬಸ್ ಹತ್ತಿದರೆ ಕುಂಬಳೂರಿಗೆ ಹಾಗೂ ಮಲೇಬೆನ್ನೂರಿನಿಂದ ಹರಿಹರಕ್ಕೆ ಟಿಕೆಟ್ ಮಾಡಿಸಿದರೆ ಮಾತ್ರ ಎಕ್ಕೆಗೊಂದಿ ಕ್ರಾಸ್ಗೆ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ₹20 ಬದಲಿಗೆ ₹33 ಹಣ ತೆತ್ತು ಪ್ರಯಾಣಿಕರು ಸಂಚರಿಸಬೇಕಾಗಿದೆ. ಇದು ಬಡ ಪ್ರಯಾಣಿಕರ ಜೇಬಿಗೆ ಹೊರೆಯಾಗುತ್ತಿದೆ ಎಂದ ಭಾನುವಳ್ಳಿಯ ಮಾಜಿ ಸೈನಿಕ ಕೆ.ಎಸ್.ಬೀರಪ್ಪ ಕಿಡಿಕಾರಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಸರಿಪಡಿಸಬೇಕು. ಎಕ್ಕೆಗೊಂದಿ ಕ್ರಾಸ್ನಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲುಗಡೆಯ ಬೋರ್ಡ್ ಹಾಕಬೇಕು. ಪ್ರಯಾಣಿಕರು ತಂಗುದಾಣವಿಲ್ಲದೇ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಬಸ್ಗಳಿಗೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಲೋಕೋಪಯೋಗಿ ಇಲಾಖೆ ಇತ್ತ ಶೀಘ್ರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.- - -
- ಫಕೃದ್ದೀನ್, ಡಿಟಿಒ, ಕೆಎಸ್ಆರ್ಟಿಸಿ, ದಾವಣಗೆರೆ.
- - --19HRR02: