ರಾಜ ಕಾಲುವೆಯ ಮೇಲಿನ ಕಟ್ಟಡಗಳ ತೆರವು ಯಾವಾಗ?

KannadaprabhaNewsNetwork | Published : May 28, 2025 12:19 AM
ಹುಬ್ಬಳ್ಳಿಯಲ್ಲಿ ರಾಜಕಾಲುವೆಯ ಮೇಲೆ ಕಮರಿಪೇಟೆ ಠಾಣೆಯೊಂದೇ ಅಲ್ಲ. ಹತ್ತಾರು ದೊಡ್ಡ ದೊಡ್ಡ ಕಟ್ಟಡಗಳು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ. ಇದರಲ್ಲಿ ಕೆಲವೊಂದಿಷ್ಟು ಬ್ಯಾಂಕ್‌ ಕೂಡ ಇವೆ. ಕೆಲ ಬಾರ್‌, ಹೋಟೆಲ್‌, ಲಾಡ್ಜ್‌ಗಳುಂಟು. ಹಾಗಂತ ಇವೆಲ್ಲ ಅನಧಿಕೃತ ಅಂತೇನೂ ಇಲ್ಲ. ಇವುಗಳನ್ನೆಲ್ಲ ಪಾಲಿಕೆಯೇ 4-5 ದಶಕಗಳ ಹಿಂದೆಯೇ ಲೀಸ್‌ ಮೇಲೆ ಕೊಟ್ಟಿತ್ತು.
Follow Us

ಶಿವಾನಂದ ಗೊಂಬಿ

ಹುಬ್ಬಳ್ಳಿ: ರಾಜಕಾಲುವೆ ಮೇಲೆ ಇದೆ ಎಂಬ ಕಾರಣಕ್ಕೆ ಇಲ್ಲಿನ ಕಮರಿಪೇಟೆ ಠಾಣೆಯನ್ನು ಸ್ಥಳಾಂತರ ಮಾಡಲಾಗಿದೆ. ಇದೀಗ ರಾಜಕಾಲುವೆ ಮೇಲೆ ನಿರ್ಮಿಸಲಾಗಿರುವ ಹತ್ತಾರು ಖಾಸಗಿ ಕಟ್ಟಡಗಳನ್ನು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಏನು ಮಾಡುತ್ತದೆ? ಅವುಗಳ ಸ್ಥಳಾಂತರ ಯಾವಾಗ?

ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆ ಇದು.

ಕಮರಿಪೇಟೆ ಠಾಣೆಯನ್ನು 20 ವರ್ಷಗಳ ಹಿಂದೆಯಷ್ಟೇ ನಿರ್ಮಿಸಲಾಗಿತ್ತು. ಈ ಕಟ್ಟಡ ಶಿಥಿಲಗೊಂಡಿದೆ. ಇದರಿಂದಾಗಿ ಮಳೆಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗುತ್ತಿದೆ. ಹೂಳು ತೆಗೆಯಲು ಆಗಲ್ಲ. ಇದರಿಂದಾಗಿ ರಾಜಕಾಲುವೆ ತುಂಬಿ ಹರಿದು ಸಾರ್ವಜನಿಕರಿಗೆಲ್ಲ ತೊಂದರೆಯನ್ನು ಉಂಟು ಮಾಡುತ್ತಿತ್ತು.

ಹೀಗಾಗಿ ಕಮರಿಪೇಟೆ ಠಾಣೆ ಕಟ್ಟಡವನ್ನು ನೆಲಸಮ ಮಾಡಬೇಕು. ಠಾಣೆಯನ್ನು ಬೇರೆಡೆ ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆ ಬಹುವರ್ಷಗಳಿಂದ ಇತ್ತು. ಅದರಂತೆ ಇದೀಗ ಬೇರೆಡೆ ಸ್ಥಳಾಂತರ ಕೂಡ ಮಾಡಲಾಗಿದೆ. ಇನ್ನೆನು ಕೆಲವೇ ದಿನಗಳಲ್ಲಿ ನೆಲಸಮಗೊಳಿಸುವ ಕಾರ್ಯ ಪ್ರಾರಂಭವಾಗಲಿದೆ.

ಖಾಸಗಿ ಕಟ್ಟಡಗಳ ಕಥೆಯೇನು?: ಇನ್ನು ಹುಬ್ಬಳ್ಳಿಯಲ್ಲಿ ರಾಜಕಾಲುವೆಯ ಮೇಲೆ ಕಮರಿಪೇಟೆ ಠಾಣೆಯೊಂದೇ ಅಲ್ಲ. ಹತ್ತಾರು ದೊಡ್ಡ ದೊಡ್ಡ ಕಟ್ಟಡಗಳು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ. ಇದರಲ್ಲಿ ಕೆಲವೊಂದಿಷ್ಟು ಬ್ಯಾಂಕ್‌ ಕೂಡ ಇವೆ. ಕೆಲ ಬಾರ್‌, ಹೋಟೆಲ್‌, ಲಾಡ್ಜ್‌ಗಳುಂಟು. ಹಾಗಂತ ಇವೆಲ್ಲ ಅನಧಿಕೃತ ಅಂತೇನೂ ಇಲ್ಲ. ಇವುಗಳನ್ನೆಲ್ಲ ಪಾಲಿಕೆಯೇ 4-5 ದಶಕಗಳ ಹಿಂದೆಯೇ ಲೀಸ್‌ ಮೇಲೆ ಕೊಟ್ಟಿತ್ತು. ಆಗ ರಾಜಕಾಲುವೆ ಲೀಸ್‌ ಮೇಲೆ ಕೊಡಲು ಕಾನೂನಿನಲ್ಲಿ ಅವಕಾಶವೂ ಇತ್ತು. 20-30 ವರ್ಷಗಳಿಗಂತೆ ಲೀಸ್‌ ಮೇಲೆ ಕೊಟ್ಟಿರುವುದುಂಟು. ಆದರೆ, ಲೀಸ್‌ ಅವಧಿ ಮುಕ್ತಾಯವಾದರೂ ಈವರೆಗೂ ಅವುಗಳನ್ನು ಮರಳಿ ಪಡೆಯುವ ಗೋಜಿಗೆ ಮಾತ್ರ ಪಾಲಿಕೆ ಹೋಗಿಲ್ಲ; ಹೋಗುತ್ತಿಲ್ಲ.

ಇದು ಬರೀ ದೊಡ್ಡ ಕಟ್ಟಡಗಳ ಪರಿಸ್ಥಿತಿಯಾದರೆ ನೂರಾರು ಸಣ್ಣ ಪುಟ್ಟ ಕಟ್ಟಡಗಳು ಸಹ ರಾಜಕಾಲುವೆ ಮೇಲೆ ಇವೆ. ಈ ಸಣ್ಣ ಪುಟ್ಟ ಮನೆ, ಪಾಲಿಕೆ ಸೇರಿದಂತೆ ಸರ್ಕಾರಿ ಇಲಾಖೆಗಳ ಕೆಲ ಕಟ್ಟಡಗಳು ಸಹ ರಾಜಕಾಲುವೆ ಮೇಲೆ ಇವೆ. ಅವುಗಳನ್ನು ತೆರವುಗೊಳಿಸುವುದು ಯಾವಾಗ?.

ಪ್ರಭಾವಿಗಳ ಅಡ್ಡಿ: ಹಾಗೆ ನೋಡಿದರೆ ರಾಜಕಾಲುವೆಗಳನ್ನು ಲೀಸ್‌ ಪಡೆದು ಕಟ್ಟಡ ಕಟ್ಟಿಸಿಕೊಂಡಿರುವವರು ಸಾಕಷ್ಟು ಪ್ರಭಾವಿಗಳು ಎಂಬುದಕ್ಕೆ ಅವಧಿ ಮುಕ್ತಾಯವಾದರೂ ಅವುಗಳನ್ನು ವಶಪಡಿಸಿಕೊಳ್ಳದೇ ಇರುವುದೇ ಸಾಕ್ಷಿಯಾಗಿದೆ. ಆ ಪ್ರಭಾವಿಗಳ ವ್ಯಾಪಾರ ವಹಿವಾಟು ಇದೀಗ ಸಾಕಷ್ಟು ಅಭಿವೃದ್ಧಿಯಾಗಿದೆ. ಈಗ ಏನಾದರೂ ಅವುಗಳನ್ನು ವಶಪಡಿಸಿಕೊಂಡರೆ ಅವರ ವ್ಯಾಪಾರ ವಹಿವಾಟಿಗೆ ಧಕ್ಕೆಯುಂಟಾಗುತ್ತದೆ. ಹೀಗಾಗಿ ಪಾಲಿಕೆ ವಶಪಡಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಮಾತೂ ಕೇಳಿ ಬರುತ್ತದೆ. ಆದರೆ, ಈ ರಾಜಕಾಲುವೆಗಳ ಮೇಲೆ ಕಟ್ಟಡಗಳಿರುವುದರಿಂದ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸಲು ಪಾಲಿಕೆಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಒಂದೆರಡು ಗಂಟೆ ಮಳೆಯಾದರೂ ಸಾಕು ರಾಜಕಾಲುವೆ ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಪ್ರವಾಹ ಪರಿಸ್ಥಿತಿ ಎದುರಾಗುತ್ತದೆ. ಈ ಕಾರಣಕ್ಕಾಗಿಯಾದರೂ ರಾಜಕಾಲುವೆಗಳನ್ನು ವಶಪಡಿಸಿಕೊಳ್ಳಬೇಕು. ಹೇಗಾದರೂ ಸಾಕಷ್ಟು ಕಟ್ಟಡಗಳ ಲೀಸ್‌ ಅವಧಿ ಮುಕ್ತಾಯಗೊಂಡಿದೆ. ಇದರಿಂದ ಉಂಟಾಗುತ್ತಿರುವ ಪ್ರವಾಹವನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂಬ ಕೂಗು ಪ್ರಜ್ಞಾವಂತರದ್ದು. ಈ ನಿಟ್ಟಿನಲ್ಲಿ ಪಾಲಿಕೆ ಏನು ಮಾಡುತ್ತದೆ. ಇದಕ್ಕೆ ರಾಜಕಾರಣಿಗಳು ಎಷ್ಟು ಮಟ್ಟಿಗೆ ಸಹಕಾರ ನೀಡುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಕಮರಿಪೇಟೆ ಠಾಣೆಯನ್ನು ಸ್ಥಳಾಂತರಿಸಿರುವುದು ಉತ್ತಮ ಕೆಲಸ. ಇದೀಗ ರಾಜಕಾಲುವೆಯನ್ನು ಮತ್ತೆ ಸಮೀಕ್ಷೆ ನಡೆಸಬೇಕು. ರಾಜಕಾಲುವೆ ಮೇಲೆ ಎಷ್ಟು ಕಟ್ಟಡಗಳಿವೆ ಎಂಬುದನ್ನು ನಿಖರವಾಗಿ ಲೆಕ್ಕಹಾಕಿ ಎಲ್ಲವುಗಳ ಲೀಸ್‌ ಅವಧಿ ಮುಕ್ತಾಯಗೊಂಡಿದ್ದರೆ ಅವುಗಳನ್ನು ವಶಕ್ಕೆ ಪಡೆದು ನೆಲಸಮಗೊಳಿಸಬೇಕು ಎಂದು ನಾಗರಿಕ ರಮೇಶ ಕುಲಕರ್ಣಿ ಹೇಳಿದರು.ರಾಜಕಾಲುವೆಗಳ ಮೇಲೆ ಕಟ್ಟಡಗಳು ಇರುವುದು ಸತ್ಯ. ಅವುಗಳ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಈ ಬಗ್ಗೆ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಏನು ಮಾಡಬೇಕು ಎಂಬುದರ ಕುರಿತು ಅಂತೀಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದರು.