ಬಸವರಾಜ ಹಿರೇಮಠ
ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಅಗಲಿಕೆ ಉತ್ತರ ಕರ್ನಾಟಕದ ರಂಗಭೂಮಿ ಜತೆ ಧಾರವಾಡ ರಂಗಾಯಣಕ್ಕೆ ತುಂಬ ನಷ್ಟವಾಗಿದೆ. ಸದ್ಯ ತಾಳಿಕೋಟಿ ನಿರ್ದೇಶನದಲ್ಲಿ ಚೇತರಿಕೆ ಕಾಣುತ್ತಿದ್ದ ಧಾರವಾಡ ರಂಗಾಯಣ ಅಕ್ಷರಶಃ ಅನಾಥವಾಗಿದೆ. ರಮೇಶ ಪರವಿನಾಯ್ಕರ ಅವರಿಂದ ತೆರವಾಗಿ ಒಂದೂವರೆ ವರ್ಷದ ನಂತರ 2024ರ ಆಗಸ್ಟ್ ತಿಂಗಳಲ್ಲಿ ಧಾರವಾಡ ರಂಗಾಯಣ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ರಾಜು ತಾಳಿಕೋಟಿ ಹಲವು ಪ್ರಯತ್ನಗಳ ಮೂಲಕ ರಂಗಾಯಣದಲ್ಲಿ ಹಲವು ರಂಗ ಚಟುವಟಿಕೆಗೆ ಚಾಲನೆ ನೀಡಿದ್ದರು.
ತಾಳಿಕೋಟಿ ಕಾರ್ಯ:ಕನ್ನಡ, ಹಿಂದಿ, ಮರಾಠಿ, ಮಲಯಾಳಂ ಹೀಗೆ ಹಲವು ಭಾಷಾ ನಾಟಕಗಳು ಒಳಗೊಂಡ ''''''''ಬಹುಭಾಷಾ ನಾಟಕೋತ್ಸವ'''''''' ಮಾಡಿ ಯಶಸ್ವಿಯಾಗಿಸಿದ್ದರು. ಚಿಣ್ಣರ ಮೇಳ, ಜೈಲು ನಾಟಕ ಶಿಬಿರಗಳಿಂದ ರಂಗಭೂಮಿ ಸಾಮಾನ್ಯರಿಗೆ ತಲುಪಿಸಿದ ಅವರ ಕಾರ್ಯ ಸ್ಮರಣೀಯ. ಆರ್ಥಿಕ ಮುಗ್ಗಟ್ಟು, ಅನುದಾನದ ಕೊರತೆ ಮತ್ತು ಕಾಯಂ ನಿರ್ದೇಶಕರ ಅನುಪಸ್ಥಿತಿಯಿಂದ ಧಾರವಾಡ ರಂಗಾಯಣ ಬಡವಾಗಿತ್ತು. ರಾಜು ತಾಳಿಕೋಟೆ ಅವರ ಆಗಮನದಿಂದ, ರಂಗಾಸಕ್ತರಲ್ಲಿ ಮೂಡಿದ್ದ ಭರವಸೆ ಮತ್ತೀಗ ಕಮರಿ ಹೋಗಿದೆ.
ತಾಳಿಕೋಟೆ ಅವರ ನಿಧನದ ಆನಂತರ ರಂಗಾಯಣದ ನಿರ್ದೇಶಕ ಹುದ್ದೆ ಮತ್ತೆ ಖಾಲಿಯಾಗಿದೆ. ಇದರಿಂದ ನವರಾತ್ರಿ ರಂಗೋತ್ಸವ, ರಾಷ್ಟ್ರೀಯ ನಾಟಕೋತ್ಸವ ಸೇರಿ ರಂಗಭೂಮಿ ಚಟುವಟಿಕೆಯನ್ನು ಸಂಪೂರ್ಣ ಸ್ತಬ್ಧಗೊಳಿಸುವ ಮುನ್ಸೂಚನೆ ನೀಡಿದೆ.
ರಾಜು ತಾಳಿಕೋಟೆ ಅಗಲಿಕೆಯಿಂದ ಶೋಕ ಮಡುಗಟ್ಟಿರುವಾಗಲೇ, ರಂಗಾಸಕ್ತರು ಮತ್ತು ಕಲಾವಿದರು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ತಕ್ಷಣವೇ ಧಾರವಾಡ ರಂಗಾಯಣಕ್ಕೆ ಓರ್ವ ಸಮರ್ಥ, ಕ್ರಿಯಾಶೀಲ ನಿರ್ದೇಶಕರ ನೇಮಕದ ಕೂಗು ಕೇಳಿಬಂದಿದೆ.
ಈ ಹಿಂದೆ ಅನುದಾನವಿಲ್ಲದೆ ಸಿಬ್ಬಂದಿಗೆ ಸಂಬಳ ನೀಡಲು ಸಾಧ್ಯವಾಗದ ಸ್ಥಿತಿ ರಂಗಾಯಣಕ್ಕೆ ಬಂದಿತ್ತು. ಹೊಸ ನಿರ್ದೇಶಕರ ನೇಮಕ, ಅನುದಾನ ಬಿಡುಗಡೆ ತಡವಾದರೆ, ರಂಗಾಯಣ ಕೇವಲ ''''''''ಸಭಾಭವನ ಬಾಡಿಗೆ ನೀಡುವ ಸಂಸ್ಥೆ''''''''ಯಾಗಿ ಉಳಿಯುವ ಸ್ಥಿತಿಗೆ ತಲುಪಬಹುದು. ರೆಪರ್ಟರಿ ಕಲಾವಿದರು, ಸಿಬ್ಬಂದಿ ವರ್ಗಕ್ಕೆ ಸಂಬಳ ಹಾಗೂ ಚಟುವಟಿಕೆ ಇಲ್ಲದೆ ಅತಂತ್ರ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ರಂಗಭೂಮಿ ಆಶೋತ್ತರಗಳನ್ನು ಮುಂದುವರಿಸುವವರ ಕೊರತೆ ಎದ್ದು ಕಾಣುತ್ತಿದೆ. ಕೂಡಲೇ ಇದೇ ಭಾಗದ ರಂಗಕರ್ಮಿಗಳನ್ನು ನೇಮಿಸಬೇಕು ಎಂದು ರಂಗಕರ್ಮಿಗಳು ಆಗ್ರಹಿಸುತ್ತಾರೆ. ಕೂಡಲೇ ನೇಮಿಸಿ