ಬಸವರಾಜ ಹಿರೇಮಠ
ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ತೆರವಾಗಿ ತಿಂಗಳು ಸಮೀಪಿಸುತ್ತಿದ್ದು, ಈ ವರೆಗೂ ಕಾಯಂ ಕುಲಪತಿ ವಿಷಯವಾಗಿ ಸರ್ಕಾರದ ಮಟ್ಟದಲ್ಲಿ ಯಾವ ಬೆಳವಣಿಗೆಗಳು ಆಗದೇ ಇರುವುದು ಸೋಜಿಗದ ಸಂಗತಿ.
ಪೂರ್ಣಾವಧಿ ಕುಲಪತಿಗಳಿಲ್ಲದೆ ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕೆಲಸಗಳು ವಿಳಂಬವಾಗುತ್ತಿದ್ದು, ತೀವ್ರ ಆರ್ಥಿಕ ಸಮಸ್ಯೆಯಲ್ಲಿರುವ ವಿಶ್ವವಿದ್ಯಾಲಯಕ್ಕೆ ಓರ್ವ ಸಮರ್ಥ ಆಡಳಿತಗಾರ, ಶೈಕ್ಷಣಿಕ ಮುತ್ಸದ್ಧಿಗಾಗಿ ವಿಶ್ವವಿದ್ಯಾಲಯ ಕಾತುರದಿಂದ ಕಾಯುತ್ತಿದೆ. ಆದರೆ, ಉನ್ನತ ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಯಾವುದೇ ಪ್ರಕ್ರಿಯೆ ನಡೆಸದೇ ಇರುವುದು ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಹಾಗೂ ಶಿಕ್ಷಣ ತಜ್ಞರ ಕಂಗೆಡಿಸಿದೆ.ಪ್ರೊ. ಕೆ.ಬಿ. ಗುಡಸಿ ಅವರು ಸೆಪ್ಟಂಬರ್ ತಿಂಗಳಲ್ಲಿ ನಿವೃತ್ತಿಯಾದ ನಂತರ ಕುಲಪತಿ ಸ್ಥಾನವನ್ನು ತೆರವು ಮಾಡಿದರು. ಅಂದಿನಿಂದ ಹಾಲಿ ಉಪಕುಲಪತಿಯೊಂದಿಗೆ ಕಾರ್ಯಕ್ರಮ ನಡೆಸುತ್ತಿದೆ. ನೂತನ ಉಪಕುಲಪತಿ ಆಯ್ಕೆಗೆ ಮುತುವರ್ಜಿ ವಹಿಸಬೇಕಿದ್ದ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಇಲಾಖೆಯು ವಿವಿ ಅಭಿವೃದ್ಧಿ ವಿಚಾರದಲ್ಲಿ ಉದಾಸೀನ ಧೋರಣೆ ಮುಂದುವರಿಸಿದೆ ಎಂಬ ಆರೋಪಗಳ ಕೇಳಿ ಬರುತ್ತಿವೆ.
ನಿಯಮಗಳ ಪ್ರಕಾರ, ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಲು ರಾಜ್ಯ ಸರ್ಕಾರ ಹುದ್ದೆ ತೆರವಾದ ತಕ್ಷಣವೇ ಅನುಮೋದನೆ ನೀಡಬೇಕು. ಈ ಅನುಮೋದನೆ ನಂತರ ಅಧಿಸೂಚನೆ ಹೊರಡಿಸಲಾಗುತ್ತದೆ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಕಳುಹಿಸಲು ಒಂದು ತಿಂಗಳ ಸಮಯ ನೀಡಲಾಗುತ್ತದೆ. ನಂತರ ಸರ್ಕಾರವು ಅರ್ಜಿಗಳ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ನೇಮಿಸುತ್ತದೆ. ಸಮಿತಿಯು ಸರ್ಕಾರದಿಂದ ನೇಮಕಗೊಂಡ ಇಬ್ಬರು ಸದಸ್ಯರನ್ನು ಮತ್ತು ರಾಜ್ಯಪಾಲರಿಂದ ನೇಮಕಗೊಂಡ ಒಬ್ಬ ಸದಸ್ಯರನ್ನು ಹೊಂದಿರುತ್ತದೆ. ಸಮಿತಿಯು ಎಲ್ಲ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ನಾಮಿನಿ ಪಟ್ಟಿ ಮಾಡಬೇಕು. ವಿವಿ ಸಿಂಡಿಕೇಟ್ ಕೂಡ ಒಬ್ಬ ನಾಮಿನಿಯನ್ನು ಹುದ್ದೆಗೆ ಶಿಫಾರಸು ಮಾಡಲು ಅವಕಾಶವಿದೆ. ಸಮಿತಿಯು ವಿವರವಾದ ಪರಿಶೀಲನೆಯ ನಂತರ, ಮೂರು ಸದಸ್ಯರನ್ನು ಆಯ್ಕೆ ಮಾಡುತ್ತದೆ ಮತ್ತು ಹೊಸ ಕುಲಪತಿ ಆಯ್ಕೆ ಮಾಡಲು ರಾಜ್ಯಪಾಲರಿಗೆ ಮುಚ್ಚಿದ ಲಕೋಟೆಯಲ್ಲಿ ಪಟ್ಟಿ ಸಲ್ಲಿಸುತ್ತದೆ. ಸಂಪೂರ್ಣ ಪ್ರಕ್ರಿಯೆಯನ್ನು ವೇಗವಾಗಿ ನಡೆದರೆ ಸಂಪೂರ್ಣ ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಕನಿಷ್ಠ ಎರಡರಿಂದ ಮೂರು ತಿಂಗಳ ಅಗತ್ಯವಿದೆ.
ನೂತನ ಕುಲಪತಿ ನೇಮಕದಲ್ಲಿ ವಿಳಂಬವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನೂತನ ಕುಲಪತಿ ನೇಮಕಕ್ಕೆ ಸರ್ಕಾರ ನಾಲ್ಕು ತಿಂಗಳ ಕಾಲಾವಕಾಶ ತೆಗೆದುಕೊಂಡಿತ್ತು. ಆದರೆ, ಇತರೆ ವಿವಿಗಳಲ್ಲಿ ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಈ ರೀತಿ ಇಲ್ಲ, ಶೀಘ್ರವೇ ನೇಮಕ ಮಾಡಲಾಗುತ್ತದೆ ಎಂದು ಪ್ರಾಧ್ಯಾಪಕರೊಬ್ಬರು ಹೇಳುತ್ತಾರೆ.
ಹೀಗಾಗಿ ವಿಶ್ವವಿದ್ಯಾಲಯ ಕಷ್ಟದ ಸ್ಥಿತಿಯಲ್ಲಿ ಸಾಗುತ್ತಿದ್ದು, ನೂತನ ಕುಲಪತಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ದಸರಾ ಮುಗಿದಿದ್ದು ದೀಪಾವಳಿ ಸಮೀಪಿಸುತ್ತಿದೆ. ಹಬ್ಬ ಹರಿದಿನಗಳ ನಂತರ ನೂತನ ಕುಲಪತಿಗಳ ನೇಮಕ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡುವ ನಿರೀಕ್ಷೆ ಹೊಂದಿದ್ದು ಕಾದು ನೋಡಬೇಕಿದೆ.