ಗದಗ: ಆರ್ಎಸ್ಎಸ್ ಸಂಘಟನೆ ಇನ್ನೂ ನೋಂದಣಿ ಆಗಿಲ್ಲ. ಈ ಸಂಘಟನೆ ದೇಶದ ಸಹಕಾರ ಸಂಘ ಹಾಗೂ ಕಾನೂನಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ದೇಶಕ್ಕಿಂತ ದೊಡ್ಡವರು ಎನ್ನುವ ಮನೋಭಾವ ಆರ್ಎಸ್ಎಸ್ನವರಲ್ಲಿದೆ ಎಂದು ಬಂಡಾಯ ಸಾಹಿತಿ ಬಸವರಾಜ ಸೂಳಿಭಾವಿ ಟೀಕಿಸಿದರು.
ಕಳೆದ 50 ವರ್ಷದಿಂದ ತನ್ನ ಕಾರ್ಯಾಲಯದ ಮೇಲೆ ಭಾರತದ ಧ್ವಜ ಹಾರಿಸಿಲ್ಲ. 100 ವರ್ಷದ ಅವಧಿಯ ಪಥಸಂಚಲನ ಮಾಡುವ ಸಂದರ್ಭದಲ್ಲಿಯೂ ಒಂದೇ ಒಂದು ತ್ರಿವರ್ಣ ಧ್ವಜ ಪ್ರದರ್ಶನ ಮಾಡಲಿಲ್ಲ. ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕೆಲಸವನ್ನು ಈ ಸಂಘ ಮಾಡುತ್ತಿಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಪತ್ರದಲ್ಲಿ ಆರ್ಎಸ್ಎಸ್ ನಿಷೇಧ ಮಾಡಬೇಕೆಂದು ಹೇಳಲಿಲ್ಲ. ಸರ್ಕಾರಿ ಜಾಗದಲ್ಲಿ ಚಟುವಟಿಕೆ ಮಾಡಬಾರದೆಂದು ಹೇಳಿದ್ದಾರೆ. ಆದರೆ, ಅವರ ಮೇಲೆ ವೈಯಕ್ತಿಕ ದಾಳಿ ಹಾಗೂ ನಿಂದನೆ ಮಾಡಲಾಗುತ್ತಿದೆ. ಇದು ಸಂವಿಧಾನವಿರೋಧಿ ನಡೆಯಾಗಿದೆ ಎಂದರು.ತಮಿಳುನಾಡಿನಲ್ಲಿ ಎಲ್ಲ ಧಾರ್ಮಿಕ ಸಂಘಟನೆಗಳು ಸರ್ಕಾರದ ಜಾಗವನ್ನು ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಅಶೋಕ ಬರಗುಂಡಿ ಮಾತನಾಡಿ, ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮತೀಯ ಭಾವನೆ ಬೆಳೆಸುವ ಸಂಸ್ಥೆಗೆ ರಾಜ್ಯ ಸರ್ಕಾರ ನಿಬಂಧನೆ ಹೇರಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಬಿ.ಕೆ. ಪೂಜಾರ, ಬಾಲರಾಜ ಅರಬರ, ಯಲ್ಲಪ್ಪ ರಾಮಗೇರಿ, ಪರಶು ಕಾಳೆ, ಅನಿಲ ಕಾಳೆ, ಬಸವರಾಜ ಬಿಳೆಯಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.