ಕನ್ನಡಪ್ರಭ ವಾರ್ತೆ ಸೊರಬ
ಗುರುವಾರ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಭಾಷೆಗೆ ಹಲವು ಸವಾಲುಗಳು ಎದುರಾಗಿದ್ದು, ಕನ್ನಡಿಗರಾದ ನಾವುಗಳು ಭಾಷೆಯನ್ನು ಹೆಚ್ಚು ಬಳಸುವುದರಿಂದ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಭಾಷೆಯನ್ನು ಉಳಿಸಿ ವಿಕಾಸಗೊಳಿಸಬೇಕು ಎಂದು ಕರೆ ನೀಡಿದ ಅವರು, ಯುವ ಕವಿಗಳು ಮುಂಗಾರು ಮಳೆ ಹಾಗೂ ಭೂಮಿಯ ಜೀವಂತಿಕೆಯನ್ನು ಕಾವ್ಯಗಳಲ್ಲಿ ಅನಾವರಣ ಮಾಡಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರ ಮನಸೂರೆಗೊಂಡಿದ್ದಾರೆ ಎಂದರು.ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಸಾಹಿತ್ಯ ಹಾಸು ಹೊಕ್ಕಾಗಿದೆ. ಸಮಾಜ ಹಾಗೂ ಮನಸ್ಸನ್ನು ಗೆಲ್ಲುವ ಶಕ್ತಿ ಸಾಹಿತ್ಯಕ್ಕಿದೆ. ಮನುಷ್ಯನ ವ್ಯಕ್ತಿತ್ವ ಬದಲಾಗುವುದು ಸಾಹಿತ್ಯ ರಚನೆ ಹಾಗೂ ಓದಿನಿಂದ ಮಾತ್ರ ವಾಗಿದ್ದು, ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ನಂತರ ನಡೆದ ಕಾವ್ಯ ಸಂಭ್ರಮದಲ್ಲಿ ಸುನಿತಾ ವಿಜಯಪ್ರಸಾದ್ ಆನವಟ್ಟಿ, ರೇಣುಕಮ್ಮ ಗೌಳಿ, ವಿನೋದ್ ವಾಲ್ಮೀಕಿ, ಸಂಜಯ್ ಡೋಂಗ್ರೆ ಆನವಟ್ಟಿ, ಶ್ರೀಮತಿ ಸುಬ್ರಮಣ್ಯ, ಮೋಹನ್ ಸುರಭಿ, ಎಂ. ಸವಿತಾ, ನೇತ್ರಾ ಉಮೇಶ್, ಮಹೇಶ್ ಖಾರ್ವಿ, ಎಸ್. ರಾಘವೇಂದ್ರ, ಸೌಮ್ಯ ಸ್ವರಚಿತ ಕಾವ್ಯ ವಾಚಿಸಿದರು.
ನಿಲಯ ಮೇಲ್ವಿಚಾರಕಿ ಕೆ.ಎಸ್.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕುಡೋ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಎಂ.ದಿಗಂತ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಉಮೇಶ್ ಭದ್ರಾಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳಿದ್ದರು.