ಕನ್ನಡ ಮನಗಳು ಎಲ್ಲಿರಲಿ, ಭಾಷೆ ಮರೆಯದಿರಿ: ಶಿವಾನಂದ ಪಾಣಿ

KannadaprabhaNewsNetwork |  
Published : Jul 26, 2024, 01:32 AM IST
ಫೋಟೊ:೨೫ಕೆಪಿಸೊರಬ-೦೩ : ಸೊರಬದ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕöÈತಿಕ ವೇದಿಕೆ ಹಮ್ಮಿಕೊಂಡಿದ್ದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮವನ್ನು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ ಉದ್ಘಾಟಿಸಿದರು. | Kannada Prabha

ಸಾರಾಂಶ

ಸೊರಬದ ಪಟ್ಟಣದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಸೊರಬ

ಇತರೆ ಭಾಷೆಗಳಿಗಿಂತ ಕನ್ನಡ ಭಾಷೆ ಉತ್ಕೃಷ್ಟತೆಯನ್ನು ಹೊಂದಿ ಎಲ್ಲರನ್ನೂ ಆಕರ್ಷಿಸಿ ತನ್ನೆಡೆಗೆ ಸೆಳೆಯುವ ಶಕ್ತಿ ಹೊಂದಿದೆ. ಹಾಗಾಗಿ ಕನ್ನಡ ಮನಗಳು ಎಲ್ಲೆ ಇರಲಿ ತನ್ನತನದ ಭಾಷೆಯನ್ನು ಮರೆಯಬಾರದು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ ನುಡಿದರು.

ಗುರುವಾರ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಮುಂಗಾರು ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಭಾಷೆಗೆ ಹಲವು ಸವಾಲುಗಳು ಎದುರಾಗಿದ್ದು, ಕನ್ನಡಿಗರಾದ ನಾವುಗಳು ಭಾಷೆಯನ್ನು ಹೆಚ್ಚು ಬಳಸುವುದರಿಂದ ಹಾಗೂ ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಭಾಷೆಯನ್ನು ಉಳಿಸಿ ವಿಕಾಸಗೊಳಿಸಬೇಕು ಎಂದು ಕರೆ ನೀಡಿದ ಅವರು, ಯುವ ಕವಿಗಳು ಮುಂಗಾರು ಮಳೆ ಹಾಗೂ ಭೂಮಿಯ ಜೀವಂತಿಕೆಯನ್ನು ಕಾವ್ಯಗಳಲ್ಲಿ ಅನಾವರಣ ಮಾಡಿ ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರ ಮನಸೂರೆಗೊಂಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಸಾಹಿತ್ಯ ಹಾಸು ಹೊಕ್ಕಾಗಿದೆ. ಸಮಾಜ ಹಾಗೂ ಮನಸ್ಸನ್ನು ಗೆಲ್ಲುವ ಶಕ್ತಿ ಸಾಹಿತ್ಯಕ್ಕಿದೆ. ಮನುಷ್ಯನ ವ್ಯಕ್ತಿತ್ವ ಬದಲಾಗುವುದು ಸಾಹಿತ್ಯ ರಚನೆ ಹಾಗೂ ಓದಿನಿಂದ ಮಾತ್ರ ವಾಗಿದ್ದು, ವಿದ್ಯಾರ್ಥಿಗಳು ಹಾಗೂ ಯುವ ಜನತೆ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.

ಮುಂಗಾರು ಕಾವ್ಯ ಸಂಭ್ರಮವನ್ನು ತಹಶೀಲ್ದಾರ್ ಮಂಜುಳಾ ಹೆಗಡಾಳ್ ಉದ್ಘಾಟಿಸಿ, ಕವಿಗಳಿಗೆ ಶುಭ ಕೋರಿದರು. ಹಿರೇಕೇರೂರು ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಡಾ.ಎಸ್.ಎಂ.ನೀಲೇಶ್ ಕಾವ್ಯ ವಿಶ್ಲೇಷಣೆ ಮಾಡಿದರು.

ನಂತರ ನಡೆದ ಕಾವ್ಯ ಸಂಭ್ರಮದಲ್ಲಿ ಸುನಿತಾ ವಿಜಯಪ್ರಸಾದ್ ಆನವಟ್ಟಿ, ರೇಣುಕಮ್ಮ ಗೌಳಿ, ವಿನೋದ್ ವಾಲ್ಮೀಕಿ, ಸಂಜಯ್ ಡೋಂಗ್ರೆ ಆನವಟ್ಟಿ, ಶ್ರೀಮತಿ ಸುಬ್ರಮಣ್ಯ, ಮೋಹನ್ ಸುರಭಿ, ಎಂ. ಸವಿತಾ, ನೇತ್ರಾ ಉಮೇಶ್, ಮಹೇಶ್ ಖಾರ್ವಿ, ಎಸ್. ರಾಘವೇಂದ್ರ, ಸೌಮ್ಯ ಸ್ವರಚಿತ ಕಾವ್ಯ ವಾಚಿಸಿದರು.

ನಿಲಯ ಮೇಲ್ವಿಚಾರಕಿ ಕೆ.ಎಸ್.ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕುಡೋ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದ ಎಂ.ದಿಗಂತ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಉಮೇಶ್ ಭದ್ರಾಪುರ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5000 ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ : ಲಕ್ಷ್ಮೀ
ನಾಯಿಗಳ ಮೇಲೂ ತೆರಿಗೆ ಹೇರಿಕೆಗೆ ಮುಂದಾದ ಸರ್ಕಾರ!