ಹೇಮೆ ನೀರು ಬಿಡಲ್ಲವೆನ್ನಲು ತುಮಕೂರವರು ಯಾರು?

KannadaprabhaNewsNetwork |  
Published : May 31, 2025, 12:00 AM IST
ಮಾಗಡಿ ಪಟ್ಟಣದ ಪುರಸಭೆ ಮುಂಭಾಗದಲ್ಲಿ ನಡೆದ ಪೌರ ಕಾರ್ಮಿಕರ ಸಮಸ್ಯೆಯನ್ನು ಮಾಜಿ ಎ.ಮಂಜುನಾಥ್ ಮನವಿ ಸ್ವೀಕರಿಸಿದರು. | Kannada Prabha

ಸಾರಾಂಶ

ಮಾಗಡಿ: ನಾವು ಕಾವೇರಿ ಕೊಳದವರು ನಮಗೆ ಹೇಮಾವತಿ, ಕಾವೇರಿ ಮೇಲೂ ಹಕ್ಕಿದೆ. ಅದನ್ನು ಬೇಡವೆಂದು ವಿರೋಧಿಸಲು ತುಮಕೂರಿನವರು ಯಾರು ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಪ್ರತಿಭಟಿಸುತ್ತಿರುವ ಹೋರಾಟಗಾರಿಗೆ ತಿರುಗೇಟು ನೀಡಿದರು.

ಮಾಗಡಿ: ನಾವು ಕಾವೇರಿ ಕೊಳದವರು ನಮಗೆ ಹೇಮಾವತಿ, ಕಾವೇರಿ ಮೇಲೂ ಹಕ್ಕಿದೆ. ಅದನ್ನು ಬೇಡವೆಂದು ವಿರೋಧಿಸಲು ತುಮಕೂರಿನವರು ಯಾರು ಎಂದು ಮಾಜಿ ಶಾಸಕ ಎ.ಮಂಜುನಾಥ್ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಪ್ರತಿಭಟಿಸುತ್ತಿರುವ ಹೋರಾಟಗಾರಿಗೆ ತಿರುಗೇಟು ನೀಡಿದರು.

ಪೌರ ಕಾರ್ಮಿಕರ ಅನಿರ್ದಿಷ್ಠಾವಧಿ ಮುಷ್ಕರದ ಬಳಿ ಆಗಮಿಸಿದ ಮಾಜಿ ಶಾಸಕ ಎ.ಮಂಜುನಾಥ್‌ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಾತನಾಡಿ, ಕುಡಿಯುವ ನೀರಿಗಾಗಿ ಮಾತ್ರ ಹೇಮಾವತಿ ಶ್ರೀರಂಗ ಏತ ನೀರಾವರಿ ಮಾಡಿದ್ದು ಹೇಮಾವತಿ ನೀರನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಇಲ್ಲ. ಈಗಾಗಲೇ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕಾವೇರಿ ನೀರನ್ನು ರಾಮನಗರ ಜಿಲ್ಲೆಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಯೋಜನೆ ಹಾಕಿ ಕೊಟ್ಟಿದ್ದಾರೆ. ಕುಣಿಗಲ್ ಶಾಸಕ ಡಾ.ರಂಗನಾಥ್ ತುಮಕೂರು ಜನಗಳಿಗೆ ಸರಿಯಾದ ಮಾಹಿತಿ ಕೊಡಬೇಕು.

ಮಾಗಡಿ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ಈ ಹಿಂದೆಯೇ ಮುಕ್ಕಾಲು ಟಿಎಂಸಿ ನೀರನ್ನು ಮಂಜೂರು ಮಾಡಿಸಿಯೆ ಕಾಮಗಾರಿ ಆರಂಭಿಸಿದ್ದೇವೆ. ಹೇಮಾವತಿ ನೀರು ಹಾಸನ, ತುಮಕೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಮನಗರ ಜಿಲ್ಲೆಗೂ ಹೇಮಾವತಿ ಮೇಲೆ ಹಕ್ಕಿದೆ. ಯಾವುದೇ ಕಾರಣಕ್ಕೂ ಇದನ್ನು ವಿರೋಧಿಸಲಾಗದು. ಅಲ್ಲಿನ ಜನಗಳನ್ನು ಓಲೈಸುವ ನಿಟ್ಟಿನಲ್ಲಿ ಅಲ್ಲಿನ ಜನಪ್ರತಿನಿಧಿಗಳು ಹೇಮಾವತಿ ಯೋಜನೆ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಎಕ್ಸ್‌ಪ್ರೆಸ್ ಕೆನಾಲ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಹೋರಾಟ ಮಾಡಲಿ. ಅದನ್ನು ಬಿಟ್ಟು ಮಾಗಡಿಗೆ ನೀರು ಬಿಡುವುದಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ನಾವು ವ್ಯವಸಾಯಕ್ಕೆ ಹೇಮಾವತಿ ನೀರನ್ನು ಬಳಸಿಕೊಳ್ಳುತ್ತಿಲ್ಲ. ಮಾಗಡಿಗೆ ಮಾತ್ರ ಈ ಯೋಜನೆ ಸೀಮಿತವಾಗಿದೆ ಎಂದು ಎ.ಮಂಜುನಾಥ್ ಸ್ಪಷ್ಟನೆ ನಿಡಿದರು.

ಸಿಎಂಗೆ ಪತ್ರ ಬರೆಯಲಿ ನಾವು ಪ್ರಧಾನಿಗೆ ಪತ್ರ ಬರೆಯುತ್ತೇವೆ:

ಕೇಂದ್ರ ಸಚಿವ ವಿ.ಸೋಮಣ್ಣನವರು ಎಕ್ಸ್‌ಪ್ರೆಸ್‌ ಕೆನಾಲ್ ನಿಲ್ಲಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ವಿಚಾರವಾಗಿ ಮತನಾಡಿ, ಸೋಮಣ್ಣನವರು ತುಮಕೂರು ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿರುವುದರಿಂದ ಆ ಭಾಗದ ಜನಗಳ ದೃಷ್ಟಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ನಮ್ಮ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಮಂಜುನಾಥ್ ಹೇಳಿದರು.

ಕೃಷ್ಣ ಕೊಳದವರಿಗೆ ಏಕೆ ಹೇಮಾವತಿ ನೀರು: ತುಮಕೂರು ಜನ ಈಗ ಹೇಮಾವತಿ ಯೋಜನೆಗೆ ವಿರೋಧ ಮಾಡುತ್ತಿದ್ದಾರೆ. ಹೇಮಾವತಿ ನೀರನ್ನು ಕೃಷ್ಣ ಕೊಳದವರು ತೆಗೆದುಕೊಂಡು ಹೋದಾಗ ಏಕೆ ವಿರೋಧ ಮಾಡಲಿಲ್ಲ. ಪಾವಗಡ, ಶಿರಾ, ಮಡಗಶಿರಾ, ಚಿಕ್ಕನಾಯಕನಹಳ್ಳಿಗೆ ಏಕೆ ನೀರನ್ನು ಬಿಟ್ಟುಕೊಟ್ಟಿದೆ. ಅವರು ಕೃಷ್ಣ ಕೊಳದವರಾಗಿದ್ದು ಈಗ ಕಾವೇರಿ ಕೊಳದವರಿಗೆ ನೀರು ಕೊಡುವುದಿಲ್ಲ ಎಂದು ವಿರೋಧ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೇಮಾವತಿ ಯೋಜನೆ ನಮಗೆ ಬಿಡುವುದಿಲ್ಲ ಎಂದು ವಿರೋಧಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಒಂದು ವರ್ಷದಲ್ಲಿ ವಿಧಾನಸಭೆ ಚುನಾವಣೆ ಬರುತ್ತೇ?:

ಒಂದು ವರ್ಷದಲ್ಲಿ ಎಂಎಲ್ಎ ಚುನಾವಣೆ ನಡೆಯುತ್ತೆ ಎಂದು ವಿಧಾನಸೌಧದಲ್ಲೇ ಕಾಂಗ್ರೆಸ್ ಶಾಸಕರೇ ಮಾತನಾಡುತ್ತಿದ್ದಾರೆ. ಈ ಸಮಯದಲ್ಲಿ ನಮ್ಮ ಪಕ್ಷದವರು ಆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಾರೆ. ಕಾಂಗ್ರೆಸ್ ಪಕ್ಷದವರು ನಮ್ಮ ಪಕ್ಷಕ್ಕೆ ಬರುತ್ತಾರೆ ಎಂಬ ಚರ್ಚೆ ನಡೆಯುತ್ತಲೇ ಇದೆ. ನನ್ನ ಜೊತೆ ಇರುವ ಕಾರ್ಯಕರ್ತರು ನನ್ನನ್ನು ಬಿಟ್ಟು ಹೋಗಲ್ಲ, ನಾನು ಯಾವುದೇ ರೀತಿ ಬಿಟ್ಟು ಹೋಗುವ ಕೆಲಸ ಮಾಡಿಲ್ಲ. ನಮ್ಮ ಪಕ್ಷದ ಮುಖಂಡರನ್ನು ಒಡಹುಟ್ಟಿದವರಂತೆ ನೋಡಿಕೊಳ್ಳುತ್ತಿದ್ದೇನೆ. ಯಾರೂ ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಮಂಜುನಾಥ್ ಹೇಳಿದರು.

ಈ ವೇಳೆ ಪುರಸಭಾ ಸದಸ್ಯರಾದ ಎಂ ಎನ್ ಮಂಜು ಕೆ.ವಿ.ಬಾಲು, ರೇಖಾ ನವೀನ್, ಮುಖಂಡರಾದ ವಿಜಯಕುಮಾರ್, ದಂಡಿಪುರ ಕುಮಾರ್, ಹೊಸಹಳ್ಳಿ ರಂಗಣ್ಣಿ, ಗುಡ್ಡೆಗೌಡ, ನಯಾಜ್, ಶಬಾಸ್ ಖಾನ್ ಇತರರು ಹಾಜರಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಪೌರ ಕಾರ್ಮಿಕರ ಅನಿರ್ದಿಷ್ಠಾವಧಿ ಮುಷ್ಕರದ ಬಳಿ ಆಗಮಿಸಿದ ಮಾಜಿ ಶಾಸಕ ಎ.ಮಂಜುನಾಥ್‌ ಅವರ ಸಮಸ್ಯೆಗಳನ್ನು ಆಲಿಸಿ ಮನವಿ ಸ್ವೀಕರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ