ವಸಂತಕುಮಾರ್ ಎನ್ .ಎಸ್.
ಕುಣಿಗಲ್ ಎಂದ ತಕ್ಷಣ ಮೂಡಲ್ ಕುಣಿಗಲ್ ಕೆರೆ, ಕುಣಿಗಲ್ ಕುದುರೆ ಹೀಗೆ ಹಲವಾರು ಹೆಸರುಗಳಿಂದ ರಾಜ್ಯ ಮತ್ತು ಅಂತರಾಜ್ಯ ಹಾಗೂ ವಿದೇಶ ಮತ್ತು ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕುಣಿಗಲ್ಲಿನಲ್ಲಿ ಅದೇ ಹೆಸರಿನಲ್ಲಿ ಇರುವ ಈ ತಾಯಿಯ ದೇವಾಲಯ ನಿರ್ವಹಣೆ ಇಲ್ಲದೇ ಬೀಳುವ ಹಂತ ತಲುಪಿದೆ.ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಈ ದೇವಾಲಯ ಬೀಳುವ ಸ್ಥಿತಿಯಲ್ಲಿದ್ದರೂ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂಬುದು ಭಕ್ತರ ನೋವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ತನ್ನದೇ ಆದ ಭಕ್ತರನ್ನು ಹೊಂದಿರುವ ಕುಣಿಗಲ್ ಅಮ್ಮನ ದೇವಾಲಯ ಇಷ್ಟೊಂದು ಶಿಥಿಲಾವಸ್ಥೆ ತಲುಪಿರುವುದು ಸಹ ಭಕ್ತರಲ್ಲಿ ಬೇಸರ ಮೂಡಿಸಿದೆ.
ಎಲ್ಲಿದೇ ಈ ದೇವಾಲಯ?ತುಮಕೂರಿಂದ ಕುಣಿಗಲ್ ಗೆ ಹೋಗುವ ಮಾರ್ಗ ಮಧ್ಯೆ ಚಿಕ್ಕಮಳಲವಾಡಿ ಗ್ರಾಮದ ರೇಷ್ಮೆ ಇಲಾಖೆಯ ಹಿಂಭಾಗದಲ್ಲಿ ಈ ದೇವಾಲಯ ಇದ್ದು, ಪಾಳು ದೇವಾಲಯದಂತೆ ಗೋಚರಿಸುತ್ತಿದೆ. ದೇವಾಲಯದ ಸುತ್ತಲೂ ಬೃಹದಾಕಾರದ ಹುತ್ತಗಳು ಬೆಳೆದಿವೆ. ಕುಣಿಗಲ್ ಅಮ್ಮ ಎಂಬ ದೇವಿಯು ಇಲ್ಲಿ ನೆಲೆಸಿದ್ದು . ಈ ದೇವರಿಗೆ ವಿಶೇಷವಾದ ಆಚರಣೆಗಳಿದ್ದು ಶಿಥಿಲವಾದ ದೇವಾಲಯವನ್ನು ಸರ್ಕಾರ ಮತ್ತು ಸಂಘ ಸಂಸ್ಥೆಗಳು ದಾನಿಗಳ ಸಹಕಾರದಿಂದ ಜೀರ್ಣೋದ್ಧಾರ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮರಾಠ ಸಾಮ್ರಾಜ್ಯದಲ್ಲಿನ ಹಲವಾರು ದಾಖಲೆಗಳಲ್ಲಿ ಕುಣಿಗಲ್ ಅಮ್ಮ ಎಂದು ಬರೆಯಲಾಗಿದೆ. ನಂತರ ಮೈಸೂರು ಅರಸರು, ಹಾಗೂ ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ದೇವಾಲಯ ಶಿಥಿಲ ಆಗಿರುವುದು ಮಾತ್ರ ಶೋಚನೀಯ. ಜಾನಪದ ಹಿನ್ನೆಲೆಯಲ್ಲಿ ಒಬ್ಬ ಮರಾಠ ದೊರೆ ಋತುಮತಿ ಆಗದ ಈ ಹೆಣ್ಣು ಮಗಳನ್ನು ಮೋಹಿಸಿದ್ದ ಎಂಬ ಕಾರಣಕ್ಕೆ ಆಕೆ ಮನನೊಂದು ಬೆಂಕಿಗೆ ಸ್ವಯಂ ಆಹುತಿಯಾಗಿ ನಂತರ ದೇವರಾಗಿ ಕಾಣಿಸಿಕೊಂಡಳು ಎಂಬ ಕಥೆ ಇದೆ. ಈ ಘಟನೆಯಿಂದ ವಿಚಲಿತರಾದ ಆ ಕುಟುಂಬದ ಹಲವಾರು ಸದಸ್ಯರು ಆ ಸ್ಥಳದಲ್ಲಿದ್ದ ಒಂದು ಬಾವಿಗೆ ತಮ್ಮಲ್ಲಿದ್ದ ಚಿನ್ನ, ಬೆಳ್ಳಿ ,ವಜ್ರ ,ವೈಢೂರ್ಯ ಇವುಗಳನ್ನು ತುಂಬಿ ಬಾವಿಗೆ ಮಣ್ಣು ಮುಚ್ಚಿ ನಂತರ ಅದರ ಮೇಲೆ ಒಂದು ಕಂಬವನ್ನು ನೆಟ್ಟು ಊರು ಬಿಟ್ಟು ಮರೆಯಾದರೂ ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಇತಿಹಾಸದ ಪುಟದಲ್ಲಿ ದಾಖಲಾಗಿರುವ ದೇವಾಲಯವೊಂದು ನಿರ್ವಹಣೆ ಕೊರತೆಯಿಂದ ಕಾಲಗರ್ಭ ಸೇರುತ್ತಿರುವುದು ವಿಪರ್ಯಾಸ