ದ್ವೇಷ ಭಾಷಣ ಮಾಡುವ ಎಸ್‌ಡಿಪಿಐವಿರುದ್ಧ ಕ್ರಮ ಏಕಿಲ್ಲ?: ಹಿಂದೂ ಸಂಘ

KannadaprabhaNewsNetwork | Updated : Jun 03 2025, 11:20 AM IST

ದ್ವೇಷ ಭಾಷಣ ಮಾಡುವ ಎಸ್‌ಡಿಪಿಐ ಮುಖಂಡರ ಮೇಲೆ ಕ್ರಮ ವಹಿಸುತ್ತಿಲ್ಲ. ಇಂಥದ್ದನ್ನು ನಿಯಂತ್ರಿಸುವಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರಿಗೆ ಮನವಿ

  ಬೆಂಗಳೂರು : ಮಂಗಳೂರಿನಲ್ಲಿ ಕೋಮು ಹಿಂಸಾಚಾರ ತಡೆ ದಳ ಕೇವಲ ಹಿಂದೂ ಸಂಘಟನೆಗಳು, ಮುಖಂಡರ ವಿರುದ್ಧ ಮಾತ್ರ ಕಾರ್ಯಾಚರಣೆ ಮಾಡುತ್ತಿದ್ದು, ದ್ವೇಷ ಭಾಷಣ ಮಾಡುವ ಎಸ್‌ಡಿಪಿಐ ಮುಖಂಡರ ಮೇಲೆ ಕ್ರಮ ವಹಿಸುತ್ತಿಲ್ಲ. ಇಂಥದ್ದನ್ನು ನಿಯಂತ್ರಿಸುವಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಪೊಲೀಸ್ ಮಹಾ ನಿರ್ದೇಶಕ ಎಂ.ಎ.ಸಲೀಂ ಅವರಿಗೆ ಮನವಿ ಸಲ್ಲಿಸಿದರು.

ಮೇ 27ರಂದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಹತ್ಯೆ ಬಳಿಕ, ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ನಾಯಕರನ್ನು ಗುರಿಯಾಗಿಸಿ ಷಡ್ಯಂತ್ರ ನಡೆಯುತ್ತಿದೆ. ಪೊಲೀಸರು ಕಾನೂನು ಮೀರಿ ಹಿಂದೂ ಕಾರ್ಯಕರ್ತರಲ್ಲಿ ಭೀತಿ ಸೃಷ್ಟಿಸುತ್ತಿದ್ದಾರೆ. ಹಿಂದೂ ನಾಯಕರ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ. ಆದರೆ, ಮುಸ್ಲಿಮರ ಕುರಿತು ಮೃದು ಧೋರಣೆ ಅನುಸರಿಸಲಾಗುತ್ತಿದೆ ಎಂದು ದೂರಿದರು.ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ, ಪುನೀತ್‌ ಕೆರೆಹಳ್ಳಿ, ಸಂತೋಷ ಕೆಂಚಾಂಬ, ಬಜರಂಗದಳದ ಪ್ರಾಂತ ಸಹ ಸಂಯೋಜಕ ಗೋವರ್ಧನ್ ಸಿಂಗ್, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಿ., ಹಿಂದೂ ಜಾಗರಣ ವೇದಿಕೆಯ ರಾಜಣ್ಣ, ವಕೀಲ ಎನ್.ಪಿ.ಅಮೃತೇಶ ಇದ್ದರು.

ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಹಿಂದೂ ನಾಯಕರಿಗೆ ಜೈಷ್‌ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ಹೆಸರಿನಲ್ಲಿ ಅನ್ಯ ದೇಶಗಳಿಂದ ವಾಟ್ಸ್ಆಪ್ ಆಡಿಯೋ ಸಂದೇಶ ಬರುತ್ತಿದೆ. ಇಂತಹ ಬೆದರಿಕೆ ಸುಹಾಸ್ ಶೆಟ್ಟಿಗೂ ಬಂದಿತ್ತು. ಬಳಿಕ ಅವರ ಹತ್ಯೆಯಾಗಿತ್ತು. ಪಿಎಫ್‌ಐ ಸದಸ್ಯರು ಸಕ್ರಿಯವಾಗಿದ್ದು, ಎಸ್‌ಡಿಪಿಐ ಮೂಲಕ ಕಾರ್ಯ ಮಾಡುತ್ತಿದ್ದಾರೆ. ಸರ್ಕಾರ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಮಾತನಾಡಿ, ರಾತ್ರಿ ವೇಳೆ ಹಿಂದೂ ಕಾರ್ಯಕರ್ತರ ಮನೆಗೆ ತೆರಳಿ, ಕಾರ್ಯಕರ್ತರ ಫೋಟೋ ಪಡೆಯುವುದು, ಮನೆಗೆ ಜಿಪಿಎಸ್ ಅಳವಡಿಸುವುದು, ನೋಟಿಸ್ ನೀಡದೇ ಠಾಣೆಗೆ ಕರೆಯುವುದನ್ನು ಮಾಡಲಾಗುತ್ತಿದೆ. ಭಯ ಮೂಡಿಸಲಾಗುತ್ತಿದೆ. ಏಕಮುಖವಾಗಿ ಪೊಲೀಸರು ವರ್ತಿಸುತ್ತಿದ್ದು ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು.

ಪುನೀತ್‌ ಕೆರೆಹಳ್ಳಿ, ಸಂತೋಷ ಕೆಂಚಾಂಬ, ಬಜರಂಗದಳದ ಪ್ರಾಂತ ಸಹ ಸಂಯೋಜಕ ಗೋವರ್ಧನ್ ಸಿಂಗ್, ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಿ., ಹಿಂದೂ ಜಾಗರಣ ವೇದಿಕೆಯ ರಾಜಣ್ಣ, ವಕೀಲ ಎನ್.ಪಿ.ಅಮೃತೇಶ ಇದ್ದರು.

Read more Articles on