ಗಂಡನನ್ನು ಕೊಲೆ ಮಾಡಿಸಿದ ಪತ್ನಿ, 4 ಆರೋಪಿಗಳ ಬಂಧನ

KannadaprabhaNewsNetwork | Published : May 25, 2025 11:56 PM
ನರಸಿಂಹರಾಜಪುರ, ಅನುಮಾನಾಸ್ಪದ ಸಾವಿನ ಪ್ರಕರಣವನ್ನು 24 ಗಂಟೆಯಲ್ಲೇ ಪೊಲೀಸರು ಬೇಧಿಸಿ ನಾಲ್ವರು ಕೊಲೆ ಆರೋಪಿಗಳನ್ನು ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Follow Us

- ಕೊಲೆ ನಡೆದ 24 ಗಂಟೆಯಲ್ಲೇ ಪ್ರಕರಣ ಬೇಧಿಸಿದ ಪೊಲೀಸರು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಅನುಮಾನಾಸ್ಪದ ಸಾವಿನ ಪ್ರಕರಣವನ್ನು 24 ಗಂಟೆಯಲ್ಲೇ ಪೊಲೀಸರು ಬೇಧಿಸಿ ನಾಲ್ವರು ಕೊಲೆ ಆರೋಪಿಗಳನ್ನು ಭಾನುವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಟ್ಟಣದ ಕಣಗಲ್ ಬೀದಿ ನಿವಾಸಿ ಸುದರ್ಶನ್ ಕೊಲೆ ಮಾಡಿದ ಆತನ ಪತ್ನಿ ಕಮಲ ಸೇರಿದಂತೆ ಎಸ್.ಶಿವರಾಜ್‌, ಬಿ.ಆರ್.ಹರೀಶ್, ಬಿ.ಎಸ್‌.ಚೆನ್ನಕೇಶವ ಎಂಬುವರನ್ನು ಬಂಧಿಸಿ ಕೊಲೆ ಸಂದರ್ಭದಲ್ಲಿ ಬಳಸಿದ್ದ ಕೆಂಪು ಬಣ್ಣದ ವ್ಯಾಗನಾರ್ ಕಾರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಹಿನ್ನೆಲೆ: ನರಸಿಂಹರಾಜಪುರ- ಶಿವಮೊಗ್ಗ ರಸ್ತೆಯಲ್ಲಿ ಬರುವ ಕರುಗುಂದ ಬಸ್ಸು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಪುರುಷನ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ಪಟ್ಟಣದ ಕಣಗಲ್ ಬೀದಿ ಸುದರ್ಶನ್ ಎಂದು ಗುರುತಿಸಲಾಗಿತ್ತು. ಮೃತನ ಪತ್ನಿ ಕಮಲ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಸಾವಿನ ಬಗ್ಗೆ ತನಿಖೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ವಿಕ್ರಂ ಆಮಟೆ ಎರಡು ತನಿಖಾ ತಂಡ ರಚಿಸಿದ್ದರು. ಎಲ್ಲಾ ಆಯಾಮ ಗಳಲ್ಲೂ ತಂಡಗಳು ತನಿಖೆ ನಡೆಸಿದಾಗ ಕೊಲೆಯಾದ ಸುದರ್ಶನನ್ನು ಆತನ ಪತ್ನಿ ಕಮಲ ಕೊಲೆ ಮಾಡಿಸಿ ದ್ದಾಳೆ ಎಂಬುದು ಸಾಬೀತಾಗಿದೆ.

ಸುದರ್ಶನ ಕಳೆದ 10 ವರ್ಷದ ಹಿಂದೆ ಕಮಲಳೊಂದಿಗೆ ಮದುವೆಯಾಗಿದ್ದು ಮಕ್ಕಳಿದ್ದರೂ ಸಂಸಾರದಲ್ಲಿ ಹೊಂದಾಣಿಕೆ ಬಂದಿರಲಿಲ್ಲ. ಆಕೆ ಪರಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧದಿಂದಲೇ ಸ್ನೇಹಿತ ಶಿವರಾಜ್ ನೊಂದಿಗೆ ಸೇರಿ ಕೊಲೆ ಸಂಚು ರೂಪಿಸಿದ್ದಾಳೆ ಎಂಬ ಮಾಹಿತಿ ತಿಳಿದಿದೆ.

ಈ ಇಬ್ಬರ ಜೊತೆಗೆ ಮತ್ತೆ ಇಬ್ಬರೂ ಆರೋಪಿಗಳಾದ ಬಿ.ಆರ್‌.ಹರೀಶ್, ಬಿ.ಎಸ್‌.ಚೆನ್ನಕೇಶವ ಸೇರಿಕೊಂಡಿದ್ದಾರೆ. ಈ 4 ಜನ ಆರೋಪಿಗಳು ಸೇರಿ ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಕರುಗುಂದ ಬಸ್ಸು ನಿಲ್ದಾಣದ ಸಮೀಪ ಮದ್ಯದಲ್ಲಿ ನಿದ್ರೆ ಬರುವ ಮಾತ್ರೆ ಸೇರಿಸಿ ಕುಡಿಸಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾರೆ. ನಂತರ ಕುತ್ತಿಗೆ ಹಿಚುಕಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಕೊಲೆಯಾದ 24 ಗಂಟೆಯಲ್ಲೇ ಪ್ರಕರಣ ಬೇದಿಸಿದ ತಂಡದಲ್ಲಿ ನರಸಿಂಹರಾಜಪುರ ಪೊಲೀಸ್‌ ಠಾಣಾಧಿಕಾರಿ ನಿರಂಜನಗೌಡ, ಕ್ರೈ ಸಬ್ ಇನ್ಸಪೆಕ್ಟರ್ ಜ್ಯೋತಿ, ಸಿಬ್ಬಂದಿಗಳಾದ ನಾಗರಾಜ್‌, ಬಿನು, ಅಮಿತ್‌ ಚೌಗಲೆ, ಕೆ. ಸೋಮೇಶ್, ಎಸ್‌.ಜಿ.ಮಧು, ಈಶ್ವರಪ್ಪ, ಯುಗಾಂದರ್, ಶಿವರುದ್ರಪ್ಪ, ಬಿಂದು, ಎಸ್.ಸಿ.ಕೌಸಿಕ್, ಬಾಳೆಹೊನ್ನೂರು ಪೊಲೀಸ್‌ ಠಾಣೆ ಅಪರಾಧ ವಿಭಾಗದ ಕೆ.ಜಿ.ಶಂಕರ್, ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಜ್‌ ಅಂಜುಂ, ಕಬ್ಬಾನಿ ಅವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.