ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಪತ್ನಿಯ ಕೊಲೆ ಕೇಸ್‌ನಲ್ಲಿ ಎಸ್‌ಐಗೆ ಇಲ್ಲ ಜಾಮೀನು

KannadaprabhaNewsNetwork | Updated : Dec 23 2023, 11:33 AM IST

ಬೆಂಗಳೂರಿನ ಬೇಗೂರು ಪೊಲೀಸ್ ಠಾಣೆ ಎಸ್‌ಐ ಮನೆಯಲ್ಲಿ ಅನುಮಾನಸ್ಪದವಾಗಿ ಪತ್ನಿ ಮೃತಪಟ್ಟಿದ್ದು, ಆರೋಪಿಗೆ ಜಾಮೀನು ನೀಡಲು ಕರ್ನಾಟಕ ಹೈ ಕೋರ್ಟ್ ನಿರಾಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪತ್ನಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಗರದ ಬೇಗೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಆಗಿ ಕೆಲಸ ಮಾಡುತ್ತಿದ್ದ ಎಸ್.ವಿ.ರಮೇಶ್ ಅವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ರಮೇಶ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಪೀಠ ಆದೇಶಿಸಿದೆ.

ಅರ್ಜಿದಾರ ಆರೋಪಿ ಮನೆಯಲ್ಲಿ ಅನುಮಾನಾಸ್ಪದವಾಗಿ ಪತ್ನಿಯ ಸಾವು ಸಂಭವಿಸಿದೆ. ದೊಷಾರೋಪ ಪಟ್ಟಿಯಲ್ಲಿನ ಸಾಕ್ಷ್ಯಧಾರಗಳಿಂದ ಮೃತಳಿಗೆ ಆರೋಪಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಆರೋಪಿಯು, ಆ ಕುರಿತ ಮಾಹಿತಿಯನ್ನು ದೂರುದಾರರಿಗೆ (ಮೃತಳ ತಂದೆಗೆ) ಮಾಹಿತಿ ನೀಡಿಲ್ಲ. ಮೃತ ದೇಹದ ಮೇಲೆ ಕೆಲವು ಬಾಹ್ಯ ಗಾಯ ಇರುವುದು ಹಾಗೂ ಆಂತರಿಕ ರಕ್ತಸ್ರಾವವಾಗಿರುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿರುತ್ತದೆ ಎಂದು ಆದೇಶದಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.

ಅಲ್ಲದೆ, ಮೃತಳ ಮರಣ ಪತ್ರದಲ್ಲಿನ ನೈಜತೆಯ ಬಗ್ಗೆ ಜಾಮೀನು ಅರ್ಜಿಯ ವಿಚಾರಣೆ ಹಂತದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ಜಾಮೀನು ನೀಡಿದಲ್ಲಿ ಆರೋಪಿಯು ಸಾಕ್ಷ್ಯವನ್ನು ತಿರುಚುವ ಎಲ್ಲಾ ಸಾಧ್ಯತೆಗಳಿವೆ. ಪ್ರಕರಣದ ಗಂಭೀರತೆ ಅರಿತೇ ವಿಚಾರಣಾ ನ್ಯಾಯಾಲಯ ಆರೋಪಿಗೆ ಜಾಮೀನು ನಿರಾಕರಿಸಿದ್ದು, ಅದರಲ್ಲಿ ಹೈಕೋರ್ಟ್‌ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತೀರ್ಪಿನಲ್ಲಿ ನ್ಯಾಯಪೀಠ ವಿವರಿಸಿದೆ.ಪ್ರಕರಣದ ವಿವರ:

ಚಿಕ್ಕಬಳ್ಳಾಪುರದ ರಮೇಶ್‌, ಮೃತ ವಿ.ಶಿಲ್ಪಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆಕೆ ಪರಿಶಿಷ್ಟ ಜಾತಿಗೆ ಸೇರಿದ ಕಾರಣ ಮದುವೆಗೆ ರಮೇಶ್‌ ಕುಂಟುಬದವರು ವಿರೋಧಿಸಿದ್ದರು. ಮದುವೆ ಬಳಿಕ ಪತ್ನಿಗೆ ಆರೋಪಿ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದ್ದರು. 2023ರ ಜೂ.2ರಂದು ಶಿಲ್ಪಾಗೆ ಅವರ ತಂದೆ ವೆಂಕಟರಾಯಪ್ಪ ಕರೆ ಮಾಡಿದಾಗ ಆಕೆ ಕರೆ ಸ್ವಿಕರಿಸಿರಲಿಲ್ಲ. ಮರುದಿನ ಬೆಳಿಗ್ಗೆ ಆಕೆಯನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬುದಾಗಿ ವೆಂಕಟರಾಯಪ್ಪಗೆ ಶಿಲ್ಪಾ ಅವರ ಮನೆ ಮಾಲೀಕ ಮಾಹಿತಿ ನೀಡಿದ್ದರು. ತಕ್ಷಣವೇ, ದೂರುದಾರರು ಆಸ್ಪತ್ರೆಗೆ ತೆರಳಿ ನೋಡಿದಾಗ ಶಿಲ್ಪಾ ಮೃತಪಟ್ಟಿದ್ದರು ಎಂಬುದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಘಟನೆ ನಂತರ ಶಿಲ್ಪಾರ ತಂದೆ, ರಮೇಶ್ ಮತ್ತವರ ಸಹೋದರ ಹಾಗೂ ಮನೆಯ ಮಾಲೀಕರ ವಿರುದ್ಧ ದೂರು ಸಲ್ಲಿಸಿದ್ದರು. ಕೊಲೆ, ಕೌಟುಂಬಿಕ ದೌರ್ಜನ್ಯ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ, ಜೀವ ಬೆದರಿಕೆ, ಸಾಕ್ಷ್ಯ ನಾಶ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಎಫ್‌ಐಆರ್‌ ದಾಲಿಸಿದ್ದ ಪೊಲೀಸರು, ಆರೋಪಿ ರಮೇಶ್‌ ಅವರನ್ನು ಬಂಧಿಸಿದ್ದರು. ಜಾಮೀನು ಕೋರಿ ಕೋರ್ಟ್‌ ಮೊರೆ ಹೋಗಿದ್ದ ರಮೇಶ್‌, ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ, ಮೃತ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ನನ್ನನ್ನು ಹೊಣೆ ಮಾಡಿಲ್ಲ. ಮೃತಳಿಗೆ ವರದಕ್ಷಿಣೆಗೆ ಕಿರುಕುಳ ನೀಡಿಲ್ಲ ಎಂದು ವಾದಿಸಿದ್ದರು. ಈ ವಾದವನ್ನು ಕೋರ್ಟ್‌ ತಿರಸ್ಕರಿಸಿದೆ.