ಶೃಂಗೇರಿ ಸುತ್ತಮುತ್ತ ಕಾಡಾನೆಗಳ ಸಂಚಾರ: ಗ್ರಾಮಸ್ಥರಲ್ಲಿ ಭೀತಿ

KannadaprabhaNewsNetwork |  
Published : Aug 15, 2025, 01:00 AM IST
್ುಪ | Kannada Prabha

ಸಾರಾಂಶ

ಶೃಂಗೇರಿ, ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಕಾಡಾನೆಗಳೆರೆಡು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಉಂಟಾಗಿದೆ. ಬಾಳೆಹೊನ್ನೂರು ಸುತ್ತಮುತ್ತ ಸಂಚರಿಸಿ ಜೀವಬಲಿಗಳನ್ನು ಪಡೆದ ಕಾಡಾನೆಗಳು ಜಯಪುರ, ಕುಂಚೇಬೈಲು ಅರಣ್ಯಗಳ ಮೂಲಕ ತಾಲೂಕು ಪ್ರವೇಶಿಸಿದೆ.

ಕೆಲವೆಡೆ ಶಾಲೆಗಳಿಗೆ ರಜೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಲ್ಲಿ ಕಳೆದೆರೆಡು ದಿನಗಳಿಂದ ಕಾಡಾನೆಗಳೆರೆಡು ಓಡಾಡುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿ ಉಂಟಾಗಿದೆ. ಬಾಳೆಹೊನ್ನೂರು ಸುತ್ತಮುತ್ತ ಸಂಚರಿಸಿ ಜೀವಬಲಿಗಳನ್ನು ಪಡೆದ ಕಾಡಾನೆಗಳು ಜಯಪುರ, ಕುಂಚೇಬೈಲು ಅರಣ್ಯಗಳ ಮೂಲಕ ತಾಲೂಕು ಪ್ರವೇಶಿಸಿದೆ.

ಶೃಂಗೇರಿ ಪಟ್ಟಣದ ಸಮೀಪದಲ್ಲಿಯೇ ಇರುವ ವಿದ್ಯಾರಣ್ಯಪುರ, ನರಸಿಂಹ ವನದ ಸುತ್ತಮುತ್ತಲ ರಸ್ತೆಗಳಲ್ಲಿ ಓಡಾಡಿಕೊಂಡು, ಅರಣ್ಯಪ್ರದೇಶಕ್ಕೆ ಹೋಗುತ್ತಿವೆ. ಮರಿ ಆನೆಯೂ ಇರುವುದರಿಂದ ವಾಹನ ಸವಾರರಲ್ಲಿ ಇನ್ನಷ್ಟು ಆತಂಕ ಎದುರಾಗಿದೆ.

ಬುಧವಾರ ರಾತ್ರಿ ಶೃಂಗೇರಿ ತೆಕ್ಕೂರು, ವೈಕುಂಠಪುರ, ಅಗ್ನಿಶಾಮಕ ಠಾಣೆ ಸುತ್ತಮುತ್ತ ಸಂಚರಿಸಿ, ಅಲ್ಲಿನ ಅರಣ್ಯದಲ್ಲಿ ಬೀಡುಬಿಟ್ಟಿದೆ. ನರಸಿಂಹವನದಲ್ಲಿ ಶ್ರೀಮಠದ ಗಜಶಾಲೆ ಇದ್ದು ಎರಡು ಆನೆಗಳಿವೆ. ಆನೆಗಳಿರುವ ವಾಸನೆ ಜಾಡು ಹಿಡಿದು ಅಲ್ಲಿಯೇ ಸುತ್ತಮುತ್ತ ಓಡಾಡುತ್ತಿರುವುದರಿಂದ ಆ ಭಾಗದಲ್ಲಿ ಜನರು ಓಡಾಡಲು ಭಯಭೀತರಾಗಿದ್ದಾರೆ.

ಕಾಡುದಾರಿಗಳಿದ್ದು,ದೂರರದಲ್ಲಿ ಒಂದೆರೆಡು ಮನೆಗಳಿರುವುದರಿಂದ ವಾಹನ ಸಂಚಾರವಿಲ್ಲದೇ, ಕಾಲುದಾರಿಯಲ್ಲಿ ನಡೆದುಕೊಂಡು ಬರಬೇಕಾದ ಗ್ರಾಮಸ್ಥರು,ದ್ವಿಚಕ್ರ ವಾಹನ ಸವಾರರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಆನೆ ಓಡಾಟದಿಂದ ಭಯದಲ್ಲೇ ಓಡಾದುವಂತಾಗಿದೆ. ಕೂತಗೋಡು, ತೆಕ್ಕೂರು, ವೈಕುಂಠಪುರ ಸೇರಿದಂತೆ ಆ ಭಾಗದಲ್ಲಿರುವ ಶಾಲೆಗಳಿಗೆ ಆನೆ ಓಡಾಟದ ಭಯದಿಂದ ಮಕ್ಕಳಿಗೆ ರಜೆ ನೀಡಲಾಗಿತ್ತು. ಇನ್ನು ಶೃಂಗೇರಿ ಶಾಲೆ ಕಾಲೇಜುಗಳಲ್ಲಿ ತೆಕ್ಕೂರು, ಕೂತಗೋಡು ಸುತ್ತಮುತ್ತಲಿನ ವಿದ್ಯಾರ್ಥಿಗಳು ಬಾರದ ಕಾರಣ ಸಂಖ್ಯೆ ಕಡಿಮೆಯಿತ್ತು.

ಗುರುವಾರ ಬೆಳಿಗ್ಗೆ ಕಾಡಾನೆಗಳು ತುಂಗಾ ನದಿ ದಾಟಿ ವಿದ್ಯಾರಣ್ಯ. ಪುರ ಸುತ್ತಮುತ್ತಲ ಅರಣ್ಯಗಳಲ್ಲಿ ಓಡಾಡಿ ಮತ್ತೆ ಅದೇ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಸಾರ್ವಜನಿಕರು, ಅರಣ್ಯ ಇಲಾಖೆಯವರು ಆನೆ ಕಂಡೊಡನೆ ಓಡಿಸುವ ಪ್ರಯತ್ನ ಮಾಡಿದ್ದರೂ ಆನೆಗಳು ಪರಾರಿಯಾಗಿವೆ.

ಕುಂಚೇಬೈಲು, ಕುಂತೂರು, ಯಡೂರು, ಮೆಣಸೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬತ್ತದ ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿವೆ. ತೆಕ್ಕೂರು, ವಿದ್ಯಾರಣ್ಯಪುರ ಸುತ್ತಮುತ್ತಲ ಗ್ರಾಮಗಳಲ್ಲಿಯೂ ಹಾನಿ ಮಾಡಿವೆ. ಬಾಳೆಹೊನ್ನೂರು ಸುತ್ತಮುತ್ತಲು ಸುದ್ದಿ ಮಾಡಿ ಈಗ ಶೃಂಗೇರಿ ಸುತ್ತಮುತ್ತ ಓಡಾಡುತ್ತಾ ಜನರ ನೆಮ್ಮದಿ ಕೆಡಿಸುತ್ತಿದೆ. ಮಂಗಗಳು, ಕಾಡುಕೋಣ, ಕರಡಿ ಕಾಟವಿದ್ದ ಶೃಂಗೇರಿಗೆ ಕಾಡಾನೆಗಳ ಕಾಟ ಇರಲಿಲ್ಲ. ಆದರೀಗ ಉಂಟಾಗಿರುವ ಕಾಡಾನೆಗಳ ಕಾಟದಿಂದ ಜನರು ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಕಾಡಾನೆಗಳ ಓಡಾಟದ ಮೇಲೆ ನಿಗಾ ವಹಿಸದ ಕಾರಣ ಇತ್ತ ಬಂದಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

14 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರ ತುಂಗಾನದಿ ಸಮೀಪ ಕಾಡನೆಗಳು ಓಡಾಡುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುದ್ರಣ ಸಂಸ್ಥೆಗಳ ಕಡೆಗಣನೆ: ಸಿ.ಆರ್.ಜನಾರ್ದನ್‌ ಅಸಮಾಧಾನ
ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಗೆ ಚಿದಂಬರ ಬೈಕಂಪಾಡಿ ಆಯ್ಕೆ