ಕಲಿಕೇರಿ ಉತ್ಖನನಕ್ಕೆ ಸಿಗುತ್ತಾ ಹಸಿರು ನಿಶಾನೆ?

KannadaprabhaNewsNetwork |  
Published : Feb 12, 2026, 02:45 AM IST
ಪೋಟೋ                                                                                       ಕನಕಗಿರಿ ತಾಲೂಕಿನ ಕಲಿಕೇರಿಯಲ್ಲಿನ ಪುರಾತನ ಕಾಲದ ಟಂಕಸಾಲೆಯ ಪ್ರತಿಷ್ಠಾನ.   | Kannada Prabha

ಸಾರಾಂಶ

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇಲ್ಲಿಯೇ ನಾಣ್ಯ ಮುದ್ರಿಸಲಾಗುತ್ತಿತ್ತು ಎನ್ನಲಾಗಿದ್ದು, ಈ ಪ್ರದೇಶವನ್ನು ಪ್ರಮುಖ ಟಂಕಸಾಲೆಯನ್ನಾಗಿ ಮಾಡಿಕೊಂಡಿರುವ ಇತಿಹಾಸದಲ್ಲಿದೆ

ಎಂ. ಪ್ರಹ್ಲಾದ್ ಕನಕಗಿರಿ

ಶಾತವಾಹನರು, ರಾಷ್ಟ್ರಕೂಟರು ಹಾಗೂ ಬಾದಾಮಿಯ ಚಾಲುಕ್ಯರ ಕಾಲದ ಕುರುಹುಗಳಿರುವ ತಾಲೂಕಿನ ಕಲಿಕೇರಿಯಲ್ಲಿ (ಕಲ್ಲಿನ ಕೆರೆ) ಉತ್ಖನನ ನಡೆಸುವ ಉದ್ದೇಶದಿಂದ ಕಂದಾಯ ಇಲಾಖೆಯು ಪ್ರಾಚ್ಯ ವಸ್ತು ಇಲಾಖೆಗೆ ಪತ್ರ ಬರೆದಿದ್ದು, ಲಕ್ಕುಂಡಿ, ತೆಕ್ಕಲಕೋಟೆಗೆ ಸಿಕ್ಕ ಅವಕಾಶ ಕಲಿಕೇರಿಗೂ ಸಿಗುತ್ತಾ? ಎನ್ನುವ ಪ್ರಶ್ನೆ ಮೂಡಿದೆ.

ಹೌದು, ಕನಕಗಿರಿಯಿಂದ ಆರೇಳು ಕಿಮೀ ದೂರದಲ್ಲಿರುವ ಕಲಿಕೇರಿ ಗ್ರಾಮದಲ್ಲಿ ರಾಷ್ಟ್ರಕೂಟರು ಹಾಗೂ ಬಾದಾಮಿ ಚಾಲುಕ್ಯರ ದೊರೆ ಒಂದನೆ ಜಯಸಿಂಹನಿಗೆ ಸಂಬಂಧಿಸಿದ ಕುರುಹು ಸಿಕ್ಕಿವೆ. ಗ್ರಾಮದ ಸರ್ಕಾರಿ ಶಾಲೆ ಬಳಿ ಇರುವ ಪ್ರದೇಶದಲ್ಲಿ ಮಣ್ಣಿನ ದಿಬ್ಬಗಳಿವೆ. ಅಲ್ಲಲ್ಲಿ ಅವಿತು ಹೋಗಿರುವ ಶಿಲಾಶಾಸನಗಳು, ವೀರಗಲ್ಲು, ರಾಮನ ಬಂಟ ಹನುಮಂತ, ಗ್ರಾಮದೇವತೆ ಸುಂಕ್ಲಮ್ಮ, ಶೇಷ, ಗಣೇಶ, ನಂದಿ, ಶಿವನ ವಿಗ್ರಹಗಳು ಇಲ್ಲಿ ಕಾಣ ಸಿಗುತ್ತವೆ.

ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಇಲ್ಲಿಯೇ ನಾಣ್ಯ ಮುದ್ರಿಸಲಾಗುತ್ತಿತ್ತು ಎನ್ನಲಾಗಿದ್ದು, ಈ ಪ್ರದೇಶವನ್ನು ಪ್ರಮುಖ ಟಂಕಸಾಲೆಯನ್ನಾಗಿ ಮಾಡಿಕೊಂಡಿರುವ ಇತಿಹಾಸದಲ್ಲಿದೆ. ಹಲವು ವರ್ಷಗಳ ಹಿಂದೆ ಹೆಚ್ಚು ಮಳೆ ಸುರಿದಾಗ ಭೂಮಿ ಉಳುಮೆ, ಮನೆ ನಿರ್ಮಾಣದ ವೇಳೆ ಚಿನ್ನದ ನಾಣ್ಯಗಳು ಸಿಕ್ಕಿರುವ ಮಾತುಗಳು ಜನರಲ್ಲಿವೆ. ಇಲ್ಲಿ ಕಲ್ಲಿನ ಕೆರೆ ಇರುವುದರಿಂದ ಈ ಗ್ರಾಮಕ್ಕೆ ಕಲಿಕೇರಿ ಎಂದು ಹೆಸರು ಬಂದಿದೆ.

ಇನ್ನೂ ಕೆರೆಯ ಅಕ್ಕಪಕ್ಕದ ಭೂಮಿ ಕಪ್ಪು ಮಣ್ಣಿನಿಂದ ಕೂಡಿದ್ದು, ಪುರಾತನ ಕಾಲ ಹೋಲುವ ಮಣ್ಣಿನ ದಿಬ್ಬಗಳೂ ಇವೆ. ಈ ಜಮೀನಿನ ೨ ಎಕರೆ ಪ್ರದೇಶದಲ್ಲಿ ಮ್ಯೂಸಿಯಂ ನಿರ್ಮಿಸಲು ಈ ಹಿಂದಿನ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಕಾಳಜಿ ವಹಿಸಿದ್ದರು. ಇವರ ವರ್ಗಾವಣೆ ಬಳಿಕ ಮ್ಯೂಸಿಯಂ ಕನಸು ಕನಸಾಗಿಯೇ ಉಳಿದುಕೊಂಡಿದೆ.

ಉತ್ಖನನಕ್ಕೆ ಮನವಿ: ಶಿಲಾಶಾಸನ, ಸ್ಮಾರಕಗಳ ಪ್ರಮುಖ ಕೇಂದ್ರಗಳಾಗಿರುವ ಲಕ್ಕುಂಡಿ, ತೆಕ್ಕಲಕೋಟೆಯಲ್ಲಿ ಸರ್ಕಾರ ಉತ್ಖನನ ನಡೆಸುತ್ತಿದ್ದು, ೫ ಸಾವಿರಕ್ಕೂ ಹಳೆಯದಾದ ಮಾನವನ ಕುರುಹು ಪತ್ತೆಯಾಗಿವೆ. ಕ್ರಿಪೂ ೨ನೇ ಶತಮಾನದ ಶಾತವಾಹನರ ಕಾಲದಲ್ಲಿಯೂ ಕಲಿಕೇರಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೋಗೋಳ ತಜ್ಞ ಟಾಲಮಿ ಅಭಿಪ್ರಾಯಪಟ್ಟಿದ್ದಾರೆ. ನೂರಾರು ವರ್ಷಗಳ ಇತಿಹಾಸವಿರುವ ಕಲಿಕೇರಿಯಲ್ಲಿ ಉತ್ಖನನ ನಡೆಸುವುದು ಅಗತ್ಯವಿದೆ. ಸರ್ಕಾರ ಮನಸ್ಸು ಮಾಡಿ ಉತ್ಖನನ ಕಾರ್ಯ ಕೈಗೆತ್ತಿಕೊಂಡರೆ ಇನ್ನಷ್ಟು ಇತಿಹಾಸ ಹೊರಬರಲಿದೆ ಎಂಬುದು ಸಂಶೋಧಕರ ಆಶಯವಾಗಿದೆ.

ಕಲಿಕೇರಿ ಉತ್ಖನನಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಪ್ರಾಚ್ಯವಸ್ತು ಇಲಾಖೆಗೆ ವಹಿಸಲಾಗಿದೆ. ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ಕಲಿಕೇರಿ ಐತಿಹ್ಯ ಕೇಂದ್ರವಾಗಿದೆ. ಇಲ್ಲಿ ಉತ್ಖನನ ನಡೆಯಬೇಕೆನ್ನುವ ವಿಚಾರ ಅನೇಕ ವರ್ಷಗಳಿಂದ ಇದೆ. ಲಕ್ಕುಂಡಿ, ತೆಕ್ಕಲಕೋಟೆಯ ಉತ್ಖನನ ಮಾಡಬೇಕೆನ್ನುವ ವಿಚಾರ ಸ್ವಗತಾರ್ಹ. ಮುಂದಿನವಾರ ಗ್ರಾಮಕ್ಕೆ ಭೇಟಿ ನೀಡುತ್ತೇನೆ ಎಂದು ಕಮಲಾಪುರ ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕ ಶೇಜೇಶ್ವರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬಲೀಕರಣ ಆಸೆ ಬಿಜೆಪಿಯಿಂದ ಸಾಕಾರ
ಶೈಕ್ಷಣಿಕ ಹಿತದೃಷ್ಟಿಯಿಂದ ೧೨ ವಸತಿ ನಿಲಯಗಳು ಮಂಜೂರು