ಉಗಮ ಶ್ರೀನಿವಾಸ್
ಬಹು ನಿರೀಕ್ಷಿತ ರಾಜ್ಯ ಬಜೆಟ್ಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಭವಿಷ್ಯದ ಉಪನಗರಿ ತುಮಕೂರಿನ ಜನತೆ ಭರ್ಜರಿ ಕೊಡುಗೆಯನ್ನು ನಿರೀಕ್ಷಿಸಿದ್ದಾರೆ.
11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಜಯಗಳಿಸಿರುವ ಕಾಂಗ್ರೆಸ್ ಸಹಜವಾಗಿ ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬಹುದು ಎಂಬ ದೊಡ್ಡ ನಿರೀಕ್ಷೆಯಲ್ಲಿ ಕಲ್ಪತರು ಜಿಲ್ಲೆಯ ಜನತೆ ಇದ್ದಾರೆ. ಈಗಾಗಲೇ ಮೆಟ್ರೋ ರೈಲನ್ನು ತುಮಕೂರಿನವರೆಗೂ ವಿಸ್ತರಿಸುವುದಾಗಿ ಗೃಹ ಸಚಿವರೇ ಹೇಳುತ್ತಾ ಬಂದಿದ್ದರು. ತುಮಕೂರಿನ ಸಮೀಪದಲ್ಲೇ ವಸಂತನರಸಾಪುರ ಕೈಗಾರಿಕಾ ಹಬ್ ಇದ್ದು ಮೆಟ್ರೋವನ್ನು ತುಮಕೂರಿಗೆ ನೀಡಿದರೆ ಸಾಕಷ್ಟು ಅನುಕೂಲವಾಗುತ್ತದೆ ಎಂಬುದು ಜನರು ಹಾಗೂ ಕೈಗಾರಿಕೋದ್ಯಮಿಗಳ ಒಲವಾಗಿದೆ.ಮೊದಲ ಹಂತದಲ್ಲಿ ತುಮಕೂರಿನವರೆಗೂ ವಿಸ್ತರಣೆ ಮಾಡಿ ಬಳಿಕ ವಸಂತನರಸಾಪುರದವರೆಗೂ ಮೆಟ್ರೋ ತೆಗೆದುಕೊಂಡು ಹೋಗಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ತುಮಕೂರು-ದಾವಣಗೆರೆ ರೈಲು ಮಾರ್ಗಕ್ಕೆ ಸುಮಾರು 4 ದಶಕಗಳ ಹೋರಾಟವಿದೆ. ಉತ್ತರ ಕರ್ನಾಟಕವನ್ನು ಸುಲಭವಾಗಿ ಸಂಪರ್ಕಿಸುವ ಈ ರೈಲು ಮಾರ್ಗಕ್ಕೆ ರೈಲ್ವೆ ನಿಲ್ದಾಣಗಳನ್ನು ಗುರುತಿಸಲಾಗಿದೆ. ಆದರೆ ಅದ್ಯಾಕೋ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ರೈಲು ಮಾರ್ಗದ ಬಗ್ಗೆ ಉತ್ಸಾಹ ತೋರುತ್ತಿಲ್ಲ. ಹಾಗೆಯೇ ತುಮಕೂರು-ರಾಯದುರ್ಗ ರೈಲು ಮಾರ್ಗಕ್ಕೂ ಎರಡೂ ಸರ್ಕಾರಗಳು ಬಜೆಟ್ನಲ್ಲಿ ಮಲತಾಯಿ ಧೋರಣೆ ತೋರುತ್ತಿದ್ದು, ಈ ಬಾರಿ ಬಜೆಟ್ನಲ್ಲಿ ಹಣ ಮೀಸಲಿಡಬಹುದೇ ಎಂಬುದು ಪ್ರಶ್ನೆಯಾಗಿದೆ.
ಇನ್ನು ತುಮಕೂರು ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆ ಇಂದು ಮೊನ್ನೆಯದಲ್ಲ. ಆದರೆ ಅದ್ಯಾಕೋ ಎಲ್ಲಾ ಸರ್ಕಾರಗಳು ಈ ಬಗ್ಗೆ ನಿರುತ್ಸಾಹ ತೋರುತ್ತಿದೆ. ಬೆಂಗಳೂರಿಗೆ 18 ಜಿಲ್ಲೆಗಳನ್ನು ಸಂಪರ್ಕಿಸುವ ಹೆಬ್ಬಾಗಿಲು ಎಂದೇ ಖ್ಯಾತಿ ಗಳಿಸಿರುವ ತುಮಕೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಾದರೆ ಅಕ್ಕಪಕ್ಕದ ಜಿಲ್ಲೆಗಳಿಗೂ ಅನುಕೂಲವಾಗುತ್ತದೆ. ಹೀಗಾಗಿ ಈ ಬಾರಿಯಾದರೂ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಗುತ್ತದೆಯೇ ಎಂಬ ನಿರೀಕ್ಷೆ ಜಿಲ್ಲೆಯ ಜನತೆಯಲ್ಲಿ ದೊಡ್ಡ ಮಟ್ಟದಲ್ಲಿದೆ.
ಒಟ್ಟಾರೆಯಾಗಿ ಕಲ್ಪತರು ಜಿಲ್ಲೆ ತುಮಕೂರು ಬೆಳಗಾವಿ ನಂತರ ವ್ಯಾಪ್ತಿಯಲ್ಲಿ ಅತಿ ದೊಡ್ಡ ಜಿಲ್ಲೆಯಾಗಿದ್ದು 10 ತಾಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗೆ ಈ ಬಾರಿ ಭರ್ಜರಿ ಪ್ಯಾಕೇಜ್ ಅನ್ನು ರಾಜ್ಯ ಸರ್ಕಾರ ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.