ಕೂಡ್ಲಿಗಿ: ಜವಾಹರ ಲಾಲ್ ನೆಹರು, ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ದೇಶದ ನಾನಾ ಭಾಗದಲ್ಲಿ ಡ್ಯಾಂಗಳ ನಿರ್ಮಾಣ, ಆಹಾರ ಭದ್ರತೆ, ಕೃಷಿ, ಆರೋಗ್ಯ ಮಿಷನ್ ಸೇರಿ ನಾನಾ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿದೆ. ಆದರೆ, ೧೦ ವರ್ಷಗಳಲ್ಲಿ ಮೋದಿ ಸರ್ಕಾರ ಯಾವ ಯೋಜನೆ ಮಾಡಿದೆ, ತೋರಿಸಲಿ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಸವಾಲು ಹಾಕಿದರು.
ಅವರು ಬಾನುವಾರ ಸಂಜೆ ಪಟ್ಟಣದಲ್ಲಿರುವ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಜನಸಂಪರ್ಕ ಕಚೇರಿ ಬಳಿ ಭಾನುವಾರ ಆಯೋಜಿಸಿದ್ದ ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಅಚ್ಛೇ ದಿನ ಎಲ್ಲಿದೆ ಎಂದು ಮೋದಿ ಅವರನ್ನು ಕೇಳಬೇಕಿದೆ. ಡಾ.ಮನಮೋಹನ್ ಸಿಂಗ್ ಅಧಿಕಾರಾವಧಿಯಲ್ಲಿ ಆರ್ಥಿಕ, ಸಾಮಾಜಿಕವಾಗಿ ಪ್ರಪಂಚದಲ್ಲೇ ದೇಶವು ೪೩ನೇ ಸಾಲಿನಲ್ಲಿತ್ತು. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಆಸಕ್ತಿಯಿಂದ ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗಾಗಿ ಕಲಂ ೩೭೧ ಜೆ ಜಾರಿಯಾಗಿದೆ. ಸುಳ್ಳು ಭರವಸೆ ನೀಡುವ ಬಿಜೆಪಿಯನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ತಿಳಿಸಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೌಲ್ಯಾಧರಿತ ಕಾಂಗ್ರೆಸ್ ನಾಯಕರನ್ನೇ ಗೆಲ್ಲಿಸಿದ ಕೀರ್ತಿ ಇದೆ. ಅಂಥವರ ಸಾಲಿನಲ್ಲಿ ಈ ಬಾರಿ ಕಾಂಗ್ರೆಸ್ ಸಮರ್ಥ ಹಾಗೂ ಅಖಂಡ ಜಿಲ್ಲೆಯ ಸರ್ವಸಮ್ಮತ ಅಭ್ಯರ್ಥಿಯಾಗಿ ಈ.ತುಕಾರಾಮ್ ಸ್ಪರ್ಧಿಸಿದ್ದು, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕಿದೆ. ಅದಕ್ಕಾಗಿ, ಎಲ್ಲಾ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ತಿಳಿಸಿದರು.ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ಮಾತನಾಡಿ, ವೈರತ್ವದ ರಾಜಕೀಯ ಮಾಡುತ್ತಿರುವ ಕೇಂದ್ರ ಸರ್ಕಾರದಿಂದ ಸಂವಿಧಾನ ಉಳಿಸುವ ಕೆಲಸ ಮಾಡುವುದು ಬಹು ಮುಖ್ಯವಾಗಿದೆ. ಇಡಿ, ಐಟಿ, ಸಿಬಿಐಗಳ ಮೂಲಕ ವಿಪಕ್ಷದವರನ್ನು ಹೆದರಿಸಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ನೀವು ರಾಷ್ಟ್ರಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಎರಡ್ಮೂರು ಅವಧಿಯಲ್ಲಿ ದೇಶದ ಮತದಾರರನ್ನು ಮೂರ್ಖರನ್ನಾಗಿ ಮಾಡಿ ಅಧಿಕಾರ ಹಿಡಿದಿದ್ದ ನಿಮ್ಮ ಆಟ ಈ ಬಾರಿ ನಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಶೇ.೮೦ ಜನರಿಗೆ ಅನುಕೂಲವಾಗಿದೆ. ರೈತರಿಗೆ ಬೆಂಬಲ ಬೆಲೆ, ಕುಟುಂಬದ ಮಹಿಳೆಗೆ ₹1ಲಕ್ಷ ನೀಡುವಂಥ ಗ್ಯಾರಂಟಿಗಳನ್ನು ಘೋಷಿಸಿದೆ. ಇಂಥ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಮ್ ಅವರಿಗೆ ಮತ ಹಾಕಿ ಬೆಂಬಲಿಸಬೇಕು ಎಂದು ತಿಳಿಸಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರ, ಮುಖಂಡ ಕೋಡಿಹಳ್ಳಿ ಭೀಮಣ್ಣ ಮಾತನಾಡಿದರು.
ಮುಖಂಡರಾದ ಎನ್.ಟಿ.ತಮ್ಮಣ್ಣ, ನಾಗಮಣಿ ಜಿಂಕಾಲ್, ಕಾನಮಡುಗು ಕೆ.ಎಂ.ಶಶಿಧರ, ನರಸಿಂಹನಗಿರಿ ವೆಂಕಟೇಶ್, ನಾಗರಕಟ್ಟೆ ರಾಜೇಂದ್ರ ಪ್ರಸಾದ್, ಕೋಗಳಿ ಮಂಜುನಾಥ, ಹಿರೇಕುಂಬಳಗುಂಟೆ ಉಮೇಶ್, ಉದಯಜನ್ನು, ಕಾವಲಿ ಶಿವಪ್ಪನಾಯಕ, ಮಾದಿಹಳ್ಳಿ ನಜೀರ್, ತಾಪಂ ನಿವೃತ್ತ ಇಒ ಜಿ.ಎಂ.ಬಸಣ್ಣ, ಎಂ.ಬಿ.ಅಯ್ಯನಹಳ್ಳಿ ಅಜ್ಜನಗೌಡ, ಬಣವಿಕಲ್ಲು ಎರಿಸ್ವಾಮಿ, ಗುಡೇಕೋಟೆ ರಾಘವೇಂದ್ರ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಜಿ.ಓಬಣ್ಣ, ಹಾಲಪ್ಪ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಸವೇಶ್ವರ, ಸಂಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಚಟ್ರಕಿ ಸೇರಿ ಇದ್ದರು.