ಹಾವೇರಿ: ಮುಂಬರುವ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನನ್ನ ಕೈ ಬಲಪಡಿಸಬೇಕು ಎಂದು ಶಾಸಕ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಶಿಬಾರ, ಹೊಸರಿತ್ತಿ, ನೆಗಳೂರು ಹಾಗೂ ಗುತ್ತಲ ಗ್ರಾಮಗಳಲ್ಲಿ ಜರುಗಿದ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ನಮ್ಮ ಪಕ್ಷ ಇದುವರೆಗೂ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷ ಸೂಚಿಸಿದ ಅಭ್ಯರ್ಥಿಗಳನ್ನು ಒಮ್ಮತದಿಂದ ಗೆಲ್ಲಿಸಬೇಕು. ಅದಕ್ಕಾಗಿ ಪೂರಕ ತಂತ್ರಗಾರಿಕೆ ರೂಪಿಸಬೇಕು. ಎಲ್ಲ ಅಭ್ಯರ್ಥಿಗಳು ಗೆದ್ದರೆ ನಮಗೆ ಹೆಮ್ಮೆ ಮೂಡುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಪಿಎಲ್ಡಿ ಬ್ಯಾಂಕ್ ಚುನಾವಣೆ ಅತಿ ಮಹತ್ವದ್ದು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮುಂಬರುವ ಚುನಾವಣೆಗೆ ಆತ್ಮವಿಶ್ವಾಸ ತುಂಬಿದಂತಾಗುತ್ತದೆ. ಅದಕ್ಕಾಗಿ ಪಕ್ಷದ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು ಎಂದು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಮೈದೂರ ಮಾತನಾಡಿ, ಪಿಎಲ್ಡಿ ಬ್ಯಾಂಕ್ ಚುನಾವಣೆ ಅತಿ ಪ್ರತಿಷ್ಠೆಯದ್ದು. ಪಕ್ಷ ಸೂಚಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಶೇ. 3ರ ಬಡ್ಡಿ ದರದಲ್ಲಿ ಸಾಲ, ಕೃಷಿಗೆ ಸಂಬಂಧಿಸಿದ ಪರಿಕರ ಹಾಗೂ ವಾಹನಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ ಸಾಲ ಪಡೆಯಬಹುದು. ಈ ಯೋಜನೆಗಳ ಸದ್ಬಳಕೆಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಮುಖಂಡರಾದ ಮಾದೇಗೌಡ ಗಾಜಿಗೌಡ್ರ, ಕೀರ್ತೆಪ್ಪ ತಿಮ್ಮೇನಹಳ್ಳಿ, ಅರವಿಂದ ಪಾಟೀಲ, ಬಸವೇಶಗೌಡ ಪಾಟೀಲ, ವೀರಪ್ಪ ಅಗಿಮನಿ, ದಯಾನಂದ ಕಲಕೋಟಿ, ಶಂಕ್ರಣ್ಣ ಅಂಬಿಗೇರ, ಸಿದ್ದಪ್ಪ ಬಾಲಣ್ಣವರ, ಕೆ.ಎಂ. ಮೈದೂರ, ಸಂಜೀವಗಾಂಧಿ ಸಂಜೀವಣ್ಣವರ, ಬಸನಗೌಡ ಸುಕಳಿ, ಬಸಪ್ಪ ಕಂಬಳಿ, ಹೇಮಣ್ಣ ಚೂರಿ, ಬಸವರೆಡ್ಡಿ ಗೌಡರ, ಬಸಪ್ಪ ನೆಗಳೂರ ಇತರರು ಇದ್ದರು. ಹಾವೇರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ₹50 ಕೋಟಿ ಅನುದಾನ ಒದಗಿಸಲಾಗಿದೆ. ಮತ್ತೆ ₹30 ಕೋಟಿ ಅನುದಾನ ಒದಗಿಸಲಾಗುವುದು. ಸುಸಜ್ಜಿತ ರಸ್ತೆ ನಿರ್ಮಾಣ ಆದ್ಯತೆ ನೀಡಲಾಗುವುದು ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.ಬಿಜೆಪಿ ಮತಗಳವು ಮಾಡುವುದರಲ್ಲಿ ತಲ್ಲೀನವಾಗಿದೆ. ರಾಜ್ಯದ ಮಹಾದೇವಪುರ ಹಾಗೂ ಆಳಂದ ವಿಧಾನಸಭೆ ಸೇರಿದಂತೆ ಉತ್ತರ ಭಾರತದ ಚುನಾವಣೆಯಲ್ಲಿ ಮತಗಳ್ಳತನ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಚುನಾವಣಾ ಆಯೋಗ ಕೂಡ ಕೇಂದ್ರ ಸರ್ಕಾರದ ಅಣತಿಯಂತೆ ನಡೆಯುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲು ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.