ಕೂಡ್ಲಿಗಿಯಲ್ಲಿ ವಿಂಡ್ ಫ್ಯಾನ್ ಅವಾಂತರಕ್ಕೆ ಕಡಿವಾಣ?

KannadaprabhaNewsNetwork |  
Published : Oct 05, 2025, 01:01 AM IST
 ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಹೊಸಹಳ್ಳಿ ಹೋಬಳಿಗನ ನೂರಾರು ಹಳ್ಳಿಗಳಲ್ಲಿ ರಕ್ಕಸ ವಿಂಡ್ ಪ್ಯಾನ್ ಗಳು ಫಲವತ್ತಾದ ಜಮೀನುಗಳು ಹಾಗೂ ಊರನ್ನು ಆಕ್ರಮಿಸಿದ್ದು ಹಳ್ಳಿಗಳ ಬಂಗಾರದ ಬದುಕು ಹಾಳಾಗುತ್ತಿರುವುದಕ್ಕೆ ವಿಂಡ್ ಪ್ಯಾನ್ ಗಳು ಮುನ್ನುಡಿ ಬರೆದಿವೆ. | Kannada Prabha

ಸಾರಾಂಶ

ಏಷ್ಯಾದ 2ನೇ ಕರಡಿಧಾಮ ಗುಡೇಕೋಟೆಯ ಸುತ್ತ ಕರ್ಕಶ ಶಬ್ದದ ಅಲೆ ಎಬ್ಬಿಸುವ ವಿಂಡ್ ಫ್ಯಾನ್‌ಗಳು ತಲೆ ಎತ್ತಿದ್ದರೂ ಅರಣ್ಯ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ.

ಭೀಮಣ್ಣ ಗಜಾಪುರ

ಕೂಡ್ಲಿಗಿ: ವಿಂಡ್ ಫ್ಯಾನ್‌ಗಳ ಅವಾಂತರಕ್ಕೆ ಕಡಿವಾಣ ಹಾಕಲು ಸ್ಥಳೀಯ ಶಾಸಕರು ಆಸಕ್ತಿ ತೋರಿದ್ದು, ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರ ಸಭೆ ಕರೆಯಲು ಮುಂದಾಗಿದ್ದಾರೆ.

ಕನ್ನಡಪ್ರಭ ದಿನಪತ್ರಿಕೆಯು ಕಳೆದ 15 ದಿನಗಳಿಂದ ವಿಂಡ್ ಫ್ಯಾನ್ ಅವಾಂತರಗಳ ಬಗ್ಗೆ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಶಾಸಕ ಡಾ.ಎನ್.ಟಿ. ಶ್ರೀನಿವಾಸ್, ಇದೇ ಅ.12ರೊಳಗೆ ಅಧಿಕಾರಿಗಳ ಸಭೆ ಕರೆಯಲು ಸೂಚನೆ ನೀಡಿದ್ದಾರೆ.

ಜೀವ ವೈವಿಧ್ಯಕ್ಕೆ ಕುತ್ತು:

ಏಷ್ಯಾದ 2ನೇ ಕರಡಿಧಾಮ ಗುಡೇಕೋಟೆಯ ಸುತ್ತ ಕರ್ಕಶ ಶಬ್ದದ ಅಲೆ ಎಬ್ಬಿಸುವ ವಿಂಡ್ ಫ್ಯಾನ್‌ಗಳು ತಲೆ ಎತ್ತಿದ್ದರೂ ಅರಣ್ಯ ಅಧಿಕಾರಿಗಳು ತುಟಿ ಬಿಚ್ಚುತ್ತಿಲ್ಲ. ವನ್ಯಜೀವಿ ತಜ್ಞರು, ರೈತ, ಪ್ರಗತಿಪರ ಸಂಘಟನೆಗಳು ಈ ಬಗ್ಗೆ ಕೊಂಚವೂ ತಲೆಕೆಡಿಸಿಕೊಂಡಿಲ್ಲ.

ಹಳ್ಳಿಗಳ ಪಕ್ಕದಲ್ಲಿ, ರಸ್ತೆಯ ಪಕ್ಕದಲ್ಲಿ ಹೀಗೆ ಎಲ್ಲೆಂದರಲ್ಲಿ ವಿಂಡ್ ಫ್ಯಾನ್‌ಗಳು ಸ್ಥಾಪನೆಗೊಂಡಿವೆ. ಇದರಿಂದ ಜನಜೀವನ, ಪ್ರಾಣಿ-ಪಕ್ಷಿಗಳು, ಜೀವ ವೈವಿಧ್ಯದ ನೆಮ್ಮದಿ ಹಾಳು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಕೂಡ್ಲಿಗಿ ಶಾಸಕರು ಧ್ವನಿ ಎತ್ತಿದಾಗ, ಇಲ್ಲಿನ ಜನತೆ ಸಂತಸಪಟ್ಟಿದ್ದರು. ನಂತರ ತಿಂಗಳಾದರೂ ಈ ಬಗ್ಗೆ ಯಾವುದೇ ಕ್ರಮವಾಗಿರಲಿಲ್ಲ. ಇದರಿಂದ ಶಾಸಕರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಶಾಸಕರು ಕೊನೆಗೂ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಕೂಡ್ಲಿಗಿಯಲ್ಲಿ ನಡೆಸಲು ತೀರ್ಮಾಸಿದ್ದಾರೆ.

ವಿಂಡ್ ಫ್ಯಾನ್ ಅಬ್ಬರ ನೋಡಿದರೆ ಇನ್ನು ಹತ್ತಾರು ವರ್ಷ ಹೋದರೆ ರೈತರಿಗೆ ಜೋಳ, ರಾಗಿ, ಸಜ್ಜೆ, ಶೇಂಗಾ ಬೆಳೆಯಲು ಭೂಮಿ ಸಿಗುವುದಿಲ್ಲ. ಇದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು, ಎಲ್ಲದಕ್ಕಿಂತ ಮುಖ್ಯವಾಗಿ ರೈತರು ಅರ್ಥಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ಕಮ್ಯುನಿಷ್ಠ್ ಪಕ್ಷದ ಮುಖಂಡ ಬಯಲು ತುಂಬರಗುದ್ದಿ ಚಂದ್ರು.

ವಿಂಡ್ ಫ್ಯಾನ್‌ ಅವಾಂತರದ ಬಗ್ಗೆ ಕನ್ನಡಪ್ರಭದ ಸರಣಿ ವರದಿಗಳನ್ನು ಗಮನಿಸಿದ್ದೇನೆ. ಅಕ್ಟೋಬರ್ 12ರೊಳಗೆ ಕೂಡ್ಲಿಗಿಯಲ್ಲಿ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ಎಸ್ಪಿ ಸೇರಿದಂತೆ ವಿಂಡ್ ಫ್ಯಾನ್‌ಗೆ ಸಂಬಂಧಿಸಿದ ಕಂಪನಿಗಳ ಅಧಿಕಾರಿಗಳನ್ನು ಸಭೆಗೆ ಕರೆದು ವಿಂಡ್ ಫ್ಯಾನ್‌ಗಳಿಂದ ಜನತೆಗೆ, ವನ್ಯಜೀವಿಗಳಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳುವೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ