ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸುತ್ತೂರು ಶಾಖಾ ಮಠದ ಆವರಣದಲ್ಲಿ ಗುರುವಾರ ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ವಿಶೇಷ ಉಪನ್ಯಾಸ - 15 ರಾಷ್ಟ್ರೀಯ ಅಭಿವೃದ್ಧಿಗೆ ಸಾಮಾಜಿಕ ಸೌಹಾರ್ದತೆ ಪ್ರೇರಕ ವಿಷಯ ಕುರಿತು ಅವರು ಮಾತನಾಡಿದರು.
ಸಹೋದರರನ್ನು ಅಸ್ಪೃಶ್ಯರಾಗಿ ಶತಮಾನಗಳ ಕಾಲ ದೂರವಿಡಲಾಗಿದೆ. ಮೇಲು- ಕೀಳು ಎಂಬ ಮನೋಭಾವ ಕಳೆದು ಸರ್ವರೂ ಒಂದೇ ಎಂಬ ಏಕ ಭಾವ ಭಾರತೀಯರಲ್ಲಿ ಮೂಡಬೇಕು. ದೇಶದ ಕೆಲವೇ ಕೆಲವು ಶ್ರೀಮಂತ ವ್ಯಕ್ತಿಗಳ ಏಳಿಗೆಯಿಂದ ದೇಶ ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು. ದೇಹದ ಒಂದು ಭಾಗ ಪಾರ್ಶ್ವವಾಯುವಿಗೆ ಒಳಗಾಗಿದ್ದರೆ, ಇಡೀ ದೇಹ ಆರೋಗ್ಯವಾಗಿದೆ ಎಂದು ಹೇಗೆ ಹೇಳಲು ಆಗುವುದಿಲ್ಲವೋ ಹಾಗೆಯೇ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಯೂ ಆಗದಿದ್ದರೆ ಅದು ನಿಜವಾದ ಅಭಿವೃದ್ಧಿಯಲ್ಲ. ಹೀಗಾಗಿ ಕಟ್ಟಕಡೆಯ ವ್ಯಕ್ತಿಯೂ ಸಾಮರಸ್ಯ, ಸೌಹಾರ್ದತೆಯಿಂದ, ನಾವೆಲ್ಲರೂ ಒಂದು ಎಂದು ಸಂತೋಷದಿಂದ ಇದ್ದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಆಗುತ್ತದೆ ಎಂದು ಅವರು ಪ್ರತಿಪಾದಿಸಿದರು.ಸಮಾಜದಲ್ಲಿ ಸಾಮರಸ್ಯ ಮೂಡಿಸಲು ವಿವಿಧ ಜಾತಿ, ಧರ್ಮ ಮತ್ತು ಭಾಷೆಯ ಜನರ ಮನೆಗಳಿಗೆ ಭೇಟಿ ನೀಡಿ ಸ್ನೇಹ ಬೆಳೆಸಬೇಕು. ದುರ್ಬಲ ವರ್ಗದವರ ಉದ್ಧಾರಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು. ಕಟುವಾದ ನುಡಿಗಳನ್ನು ಬಿಟ್ಟು, ಸತ್ಯ ಮತ್ತು ಪ್ರೀತಿಯಿಂದ ಸಂವಹನ ನಡೆಸುವ ಮೂಲಕ ಮನಸ್ಸಿನ ವಿಕಾರಗಳನ್ನು ದೂರ ಮಾಡಬೇಕು ಎಂದು ಅವರು ಹೇಳಿದರು.
ಸಂವಿಧಾನದಲ್ಲಿನ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಫ್ರೆಂಚ್ ಕ್ರಾಂತಿಯಿಂದ ಬಂದಿದ್ದಲ್ಲ. ಈ ಪರಿಕಲ್ಪನೆ ಭಾರತದ್ದು. ಇದು ತಥಾಗತ ಬುದ್ಧನೀಡಿದ್ದು. ಅಂಬೇಡ್ಕರ್ ಅವರ ಸಂವಿಧಾನ ಸಭೆಯ ಭಾಷಣವನ್ನು ಮತ್ತೊಮ್ಮೆ ಓದಿಕೊಳ್ಳಬೇಕು. ಸಾಮಾಜಿಕ ಸ್ವಾತಂತ್ರ್ಯ ನೆಲೆಗೊಳ್ಳದೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಗುವುದಿಲ್ಲ ಎಂದಿದ್ದಾರೆ ಎಂದರು.
ಸಂಘರ್ಷಗಳನ್ನು ಭಾರತೀಯ ಸಂಸ್ಕೃತಿ ಹೇಗೆ ನಿಭಾಯಿಸುತ್ತದೆ ಎಂಬುದಕ್ಕೆ ಶಿಬಿ ಚಕ್ರವರ್ತಿಯ ಕಥೆಯನ್ನು ಅವರು ಉದಾಹರಿಸಿದರು. ದಯೆಯಿದ್ದಲ್ಲಿ ಧರ್ಮವಿರುತ್ತದೆ. ಆಶ್ರಯ ಅರಸಿ ಬಂದ ಹಕ್ಕಿಯನ್ನು ರಕ್ಷಿಸಲು ತನ್ನನ್ನೇ ಅರ್ಪಿಸಿಕೊಂಡ ಶಿಬಿ ಚಕ್ರವರ್ತಿಯ ತ್ಯಾಗ, ದಯೆ ನಮಗೆ ಬರಬೇಕು. ಈ ತ್ಯಾಗ, ಕರುಣೆ, ದಯೆಯಲ್ಲಿಯೇ ಸೌಹಾರ್ದವಿದೆ ಎಂದು ಅವರು ವಿಶ್ಲೇಷಿಸಿದರು.
ಗಾಯಕಿಯರಾದ ಕೆ.ಜಿ. ವಿನುತಾ, ಅಮೂಲ್ಯ ಅವರು ಪುರುಷೋತ್ತಮ್, ಎಸ್. ನಾಗರಾಜ್ ಅವರ ಪಕ್ಕಾವಾದ್ಯದ ಸಾಂಗತ್ಯದಲ್ಲಿ ವಚನಗಳನ್ನು ಪ್ರಸ್ತುತಪಡಿಸಿದರು. ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಸಹ ಕುಲಾಧಿಪತಿ ಪ್ರೊ.ಬಿ. ಸುರೇಶ್ ಸ್ವಾಗತಿಸಿದರು. ಜೆಎಸ್ಎಸ್ ಕಾನೂನು ಕಾಲೇಜಿನ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್. ಸುರೇಶ್ ಉಪನ್ಯಾಸದ ನಂತರ ಸಂವಾದ ನಡೆಸಿಕೊಟ್ಟರು.