ಹಾಸನ: ನಗರದ ಖಾಸಗಿ ಹೋಟೆಲೊಂದರಲ್ಲಿ ಹೊಸ ವರ್ಷದ ಹಿಂದಿನ ರಾತ್ರಿ ಮನು ಕುಮಾರ್ ಎಂಬಾತನಿಗೆ ಚಾಕು ಚುಚ್ಚಿದ ಆತನ ಪ್ರೇಯಸಿ ಭವಾನಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಹಿತಿ ನೀಡಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಮನುಕುಮಾರ್ ಮತ್ತು ಭವಾನಿ ಇಬ್ಬರೂ ಎ.ಗುಡುಗನಹಳ್ಳಿ ಗ್ರಾಮ ಎಂಬ ಒಂದೇ ಊರಿನವರಾಗಿದ್ದು, ಅಕ್ಕಪಕ್ಕದ ಮನೆಯವರು. ಕಳೆದ ೮ ವರ್ಷಗಳಿಂದಲೂ ಇಬ್ಬರಲ್ಲೂ ಪ್ರೀತಿ ಬೆಳೆದಿತ್ತು. ೮ ವರ್ಷದಿಂದ ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಪ್ರೀತಿ ನಿರಾಕರಿಸಿರುವುದು ಈ ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮನುಕುಮಾರ್ ಶಸ್ತ್ರಚಿಕಿತ್ಸೆ ಪಡೆದಿದ್ದಾರೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದರು.