ಗದಗ: ಮಹಿಳೆ ಪ್ರಕೃತಿಯ ಅದ್ಭುತ ಸೃಷ್ಟಿ. ಜೀವನದ ವಿವಿಧ ಪಾತ್ರ ನಿಭಾಯಿಸುವ ಸ್ತ್ರೀಗೆ ತಾಳ್ಮೆ, ಸಹನೆ, ಸಹಕಾರ ಇಂತಹ ಮೌಲ್ಯಯುತವಾದ ಗುಣಗಳು ಅವಶ್ಯಕವಾಗಿಬೇಕು. ಒಂದು ಕುಟುಂಬ ನಿರ್ವಹಿಸುವಲ್ಲಿ, ಸಮಾಜದ ಜವಾಬ್ದಾರಿ ನಿರ್ವಹಿಸುವಲ್ಲಿ ಮಹಿಳೆಯು ದಿಟ್ಟತನದಿಂದ ಸಾಗಬೇಕು ಎಂದು ಪ್ರೇಮಾ ಮೇಟಿ ಹೇಳಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಮಾತನಾಡಿ, ಮಹಿಳೆ ಇಂದು ಆಧುನಿಕ ಸೌಲಭ್ಯ ಪಡೆದು ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ತನ್ನಲ್ಲಿರುವ ಶಕ್ತಿ ಸಾಮರ್ಥ್ಯಗಳನ್ನು ಸಮಾಜದ ಉನ್ನತಿಗೆ ಬಳಸುವಂತಿರಬೇಕು. ಮಹಿಳೆ ಮತ್ತು ಪುರುಷ ಎನ್ನುವುದು ವಿರೋಧಾಭ್ಯಾಸದ ಸಂಗತಿಗಳಲ್ಲ. ಬದಲಾಗಿ ಜೀವನದ ಪಯಣದಲ್ಲಿ ಇಬ್ಬರು ತಮ್ಮದೆ ಆದ ಜವಾಬ್ದಾರಿ ಹೊಂದಿದ್ದು, ಪರಸ್ಪರ ಸಹಕಾರ ಪ್ರೀತಿ ತಾಳ್ಮೆ ಹೊಂದಾಣಿಕೆಯಿಂದ ಬದುಕನ್ನು ಸುಂದರಗೊಳಿಸಿಕೊಳ್ಳುವ ಜಾಣ್ಮೆ ಇರಬೇಕು ಎಂದರು.
ಇಂದಿನ ಆಧುನಿಕ ಸಮಾಜದಲ್ಲಿಯೂ ಸಹ ಇಷ್ಟೆಲ್ಲ ಪ್ರಜ್ಞಾವಂತಿಕೆಯ ಮಧ್ಯೆ ಮಹಿಳೆ ಅದೆಷ್ಟೋ ನಿಂದನೆಗೆ ಅವಮಾನಕ್ಕೆ ವೃತ್ತಿಪರ ಅಸೂಯೆಗೆ ಗುರಿಯಾಗುತ್ತಿದ್ದಾಳೆ. ಮಹಿಳೆಯನ್ನು ಗೌರವಯುತವಾಗಿ ನೋಡುವ ಸಂಸ್ಕೃತಿ ಇಂದಿನ ಸಮಾಜ ಮರಿಯಬಾರದು ಎಂದರು.ಈ ವೇಳೆ ಸುಮಂಗಲಾ ಗಿರೆಡ್ಡಿ, ಟ್ರಸ್ಟಿನ ಉಪಾಧ್ಯಕ್ಷೆ ಕಸ್ತೂರಿ ಹಿರೇಗೌಡರ ಮಾತನಾಡಿದರು. ವಿಜಯಲಕ್ಷ್ಮಿ ಮೆಕಳೆ ವಚನ ಗಾಯನ ಮಾಡಿದರು. ಡಾ. ಸೌಮ್ಯ ಅಬ್ಬಿಗೇರಿ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಆ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಟ್ರಸ್ಟಿನ ಕಾರ್ಯದರ್ಶಿ ಭಾಗ್ಯ ಶಿರೋಳ, ಅಕ್ಕಮ್ಮ ರಡ್ಡೆರ ಸೇರಿದಂತೆ ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕವಿತಾ ಕೊಣ್ಣೂರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವೀಣಾ ತಿರ್ಲಾಪುರ ನಿರೂಪಿಸಿದರು.