ಮಹಿಳೆಯ ಸಾಧನೆ ಭೂಮಿಯಿಂದ ಆಕಾಶದವರೆಗೂ ಚಾಚಿದೆ

KannadaprabhaNewsNetwork | Published : Mar 20, 2025 1:19 AM

ಸಾರಾಂಶ

ಮಹಿಳೆ ಕೇವಲ ಕುಟುಂಬಕ್ಕೆ ಸೀಮಿತವಾಗಿಲ್ಲ. ನಾಡಿಗೆ ದೇಶಕ್ಕೆ ಜಗತ್ತಿಗೆ ಕೀರ್ತಿ ತರುವಂತಹ ಸಾಧನೆ ಮೆಟ್ಟಿಲನ್ನು ಏರುತ್ತಿದ್ದಾಳೆ. ಇಂದು ಮಹಿಳೆಯರು ದೇಶದ ಪ್ರಥಮ ಪ್ರಜೆಯಾಗಿ ರಾಷ್ಟ್ರಪತಿ ಎಂಬ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಮಹಿಳೆಯರ ಸಾಧನೆ ಅಪರಿಮಿತ, ಮಹಿಳೆ ದೇಶದ ಘನತೆ ಗೌರವನ್ನು ಹೆಚ್ಚಿಸುವಲ್ಲಿ ಹಿಂದೆ ಬಿದ್ದಿಲ್ಲ. ಮಹಿಳೆಯರು ಇಂದು ಭೂಮಿಯಿಂದ ಆಕಾಶದವರೆಗೂ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಅಸಾಮಾನ್ಯ ಸಾಧನೆಗೈಯ್ಯುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಹಿಳೆಯರು ಇಂದು ಭೂಮಿಯಿಂದ ಆಕಾಶದವರೆಗೂ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಅಸಾಮಾನ್ಯ ಸಾಧನೆಗೈಯ್ಯುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ತಿಳಿಸಿದರು.

ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಪುರಸಭೆ ಚನ್ನರಾಯಪಟ್ಟಣ ಹಾಗೂ ದೀನ್ ದಯಾಳ್ ಅಂತ್ಯೋದಯ ಯೋಜನೆಯ ಅಡಿಯಲ್ಲಿ ರಚಿಸಲ್ಪಟ್ಟಿರುವ ಮಹಿಳಾ ಸ್ವಸಹಾಯ ಸಂಘಗಳು ಮತ್ತು ಒಕ್ಕೂಟಗಳಿಂದ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮಹಿಳೆ ಸಹನಾ ಮೂರ್ತಿ, ಮಹಿಳೆ ಸಹನೆಯಲ್ಲಿ ಮೇರು ಶಿಖರದಂತೆ ಇರುವುದರಿಂದ ಕುಟುಂಬದ ಎಲ್ಲ ಜವಾಬ್ದಾರಿಗಳನ್ನು ತಪ್ಪುಗಳನ್ನು ಸಹಿಸಿಕೊಂಡು ಮುನ್ನಡೆಸಲು ಸಾಧ್ಯವಾಗಿದೆ. ಮಹಿಳೆ ಕೇವಲ ಕುಟುಂಬಕ್ಕೆ ಸೀಮಿತವಾಗಿಲ್ಲ. ನಾಡಿಗೆ ದೇಶಕ್ಕೆ ಜಗತ್ತಿಗೆ ಕೀರ್ತಿ ತರುವಂತಹ ಸಾಧನೆ ಮೆಟ್ಟಿಲನ್ನು ಏರುತ್ತಿದ್ದಾಳೆ. ಇಂದು ಮಹಿಳೆಯರು ದೇಶದ ಪ್ರಥಮ ಪ್ರಜೆಯಾಗಿ ರಾಷ್ಟ್ರಪತಿ ಎಂಬ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಮಹಿಳೆಯರ ಸಾಧನೆ ಅಪರಿಮಿತ, ಮಹಿಳೆ ದೇಶದ ಘನತೆ ಗೌರವನ್ನು ಹೆಚ್ಚಿಸುವಲ್ಲಿ ಹಿಂದೆ ಬಿದ್ದಿಲ್ಲ. ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಒನಕೆ ಓಬವ್ವರಂತ ಮಹಾನ್ ದೇಶಭಕ್ತ ನಾಯಕರು ನಮ್ಮ ದೇಶದಲ್ಲಿ ಜನಿಸಿ ದೇಶದ ಘನ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಅದೇ ರೀತಿ ನಮ್ಮ ಇಂದಿನ ಮಹಿಳೆ ಯರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದರ ಬದಲು ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಜಿಲ್ಲಾ ಕೌಶಲ್ಯ ಅಭಿವೃದ್ಧಿ ವ್ಯವಸ್ಥಾಪಕಿ ಕುಸುಮ ರಾಜಶೇಖರ್ ಮಾತನಾಡಿ, ಮಹಿಳೆ ತಂದೆತಾಯಿಯ ಮುದ್ದಿನ ಮಗಳಾಗಿ, ಗಂಡನ ಮುದ್ದಿನ ಮಡದಿ ಯಾಗಿ, ತನ್ನ ಮಕ್ಕಳ ಪ್ರೀತಿಯ ತಾಯಿಯಾಗಿ ಸಾಧನೆ ಅನನ್ಯ ಮಹಿಳೆಯರು ಸಣ್ಣ ಸಣ್ಣ ಸಮಸ್ಯೆಗೆ ಅಂಜದೆ ಅಳುಕದೆ ಮುನ್ನುಗ್ಗಿದ್ದಾಳೆ. ಉನ್ನತ ಕಾರ್ಯ ಸಾಧನೆಗೆ ಸಣ್ಣಪುಟ್ಟ ತ್ಯಾಗಗಳು ಅವಶ್ಯಕ. ತನ್ನ ಕರ್ತವ್ಯ ನಿಭಾಯಿಸುವಲ್ಲಿ ಆಕೆ ನಿರಂತರ ಗಮನ ಹರಿಸಿದಾಗ ಜೀವನದಲ್ಲಿ ಯಶಸ್ಸು ಸಾಧ್ಯ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹಿಳಾ ಯೋಜನೆಗಳ ನೆರವು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಹಾಸನ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಚನ್ನರಾಯಪಟ್ಟಣದಲ್ಲಿ ಪೂರ್ಣ ಮಹಿಳಾ ಸದಸ್ಯರಿಂದ ನಡೆಸಿಕೊಟ್ಟ ಕುರುಕ್ಷೇತ್ರ ನಾಟಕ ಪಾತ್ರಧಾರಿಗಳಾದ ಸೂತ್ರ ಧಾರಿಯಾಗಿ ಶಾರದಮ್ಮ, ಶಕುನಿಯಾಗಿ ಯಶೋಧಾ ಜೈನ್, ದುರ್ಯೋಧನ ಪಾತ್ರಧಾರಿ ನೇತ್ರ ನವೀನ್. ಕುಂತಿಪಾತ್ರಧಾರಿಯಾಗಿ ವನಜ, ಗಾಂಧಾರಿ ಪಾತ್ರ ದಾರಿ ಕುಸುಮ ಮತ್ತು ದುಶ್ಯಾಸನ ಪಾತ್ರಧಾರಿ ರುಕ್ಕಿಣಿ ಇವರನ್ನು ಇದೇ ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.

ಪುರಸಭಾ ಅಧ್ಯಕ್ಷ ಮೋಹನ್ ಮಾತನಾಡಿದರು. ಪುರಸಭಾ ಉಪಾಧ್ಯಕ್ಷೆ ರಾಣಿಕೃಷ್ಣ, ಪುರಸಭಾ ಸಿಇಒ ಶಾರದಮ್ಮ, ಪುರಸಭಾ ಅಭಿಯಂತರೆ ಕಾವ್ಯಶ್ರೀ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಮರಗೂರು ಅನಿಲ್, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಬನಶಂಕರಿ ರಘು, ರಾಧಾ ಮಂಜುನಾಥ್, ರೇಖಾ ಅನಿಲ್, ಪುರಸಭಾ ಸದಸ್ಯರಾದ ಕವಿತಾರಾಜು, ಸುಜಾತ ಲಕ್ಷಮ್ಮ, ಫರ್‌ಹಾನ, ಜಿಲ್ಲಾ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕಿ ಕೋಮಲ ರಾಜಶೇಖರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಭಿಯಾನ ವ್ಯವಸ್ಥಾಪಕ ಡಾ.ರಾಜಶೇಖರ್, ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳ ಹಾಜರಿದ್ದರು.

Share this article