ರಾಷ್ಟ್ರದ ಪ್ರತಿ ಸಾಧನೆಯಲ್ಲಿ ಮಹಿಳೆಯರ ಪಾತ್ರ ಇದ್ದೇ ಇದೆ : ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ

KannadaprabhaNewsNetwork | Updated : Mar 29 2025, 01:26 PM IST

ಕೊಟ್ಟೂರು ಚಾನುಕೋಟಿ ಮಠದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜನೆಗೊಂಡಿದ್ದ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀಗಳ ಷಷ್ಟಿ ಸಂಭ್ರಮದ 8ನೇ ದಿನದ ಕಾರ್ಯಕ್ರಮದ ಮಹಿಳಾ ಸಮಾವೇಶದಲ್ಲಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಭಾಗವಹಿಸಿದ್ದರು.

ಕೊಟ್ಟೂರು: ರಾಷ್ಟ್ರದ ಯಾವುದೇ ರಂಗದ ಸಾಧನೆಯಲ್ಲಿ ಮಹಿಳೆಯ ಪಾತ್ರ ಇದ್ದೇಇದೆ. ಮಹಿಳೆಗೆ ಇರುವ ಛಲ, ಕರ್ತವ್ಯದ ಬದ್ಧತೆ ಮಹಿಳೆಯನ್ನು ಮಾತೆಯನ್ನಾಗಿಸಿದೆ ಎಂದು ಖ್ಯಾತ ಮಕ್ಕಳ ತಜ್ಞ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.

ಇಲ್ಲಿನ ಚಾನುಕೋಟಿ ಮಠದ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜನೆಗೊಂಡಿದ್ದ ಯುಗಮಾನೋತ್ಸವ ಮತ್ತು ಚಾನುಕೋಟಿ ಶ್ರೀಗಳ ಷಷ್ಟಿ ಸಂಭ್ರಮದ 8ನೇ ದಿನದ ಕಾರ್ಯಕ್ರಮದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು. ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರು ಸಂಶೋಧನೆಗೆಂದೇ ನಿರ್ವಾತ ಪ್ರದೇಶದಲ್ಲಿ ತಿಂಗಳಾನುಗಟ್ಟಲೆ ವಾಸವಾಗಿದ್ದು, ಮಹತ್ಸಾದನೆ ಮಾಡಿದ್ದಾರೆ. ಇಡೀ ಮಾನವ ಕುಲದಲ್ಲಿಯೇ ಇದು ವಿಶಿಷ್ಟವಾದ ಸಾಧನೆ ಎಂದು ಅವರು ಹೇಳಿದರು.

ಮಹಿಳೆಯರು ಸದಾ ಸಾಧನೆ ಮಾಡುತ್ತಿದ್ದರೂ ಆಡಳಿತಗಾರರು ಪುಕ್ಕಟೆ ಕೊಡುಗೆಗಾಗಿ ಕೈವೊಡ್ಡುವಂತೆ ಮಾಡಿರುವುದು ಸರಿಯಾದ ಸಂಗತಿಯಾಗಲಾರದು. ಒಂದೆಡೆ ಕೊಡುಗೆಗಾಗಿ ಕಾಯುವ ಮಹಿಳೆಯರು ಇದ್ದರೆ ನಗರ ಪ್ರದೇಶಗಳಲ್ಲಿ ಇದೇ ಮಹಿಳೆ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸಲು ಹೋಗಿ ಮಹಿಳಾ ಸಾಧಕರಿಗೆ ಕಪ್ಪುಚುಕ್ಕೆ ತರುವ ರೀತಿ ನಡೆದುಕೊಳ್ಳುತ್ತಿರುವುದು ಸರಿ ಅಲ್ಲ ಎಂದು ಹೇಳಿದರು.ಉಜ್ಜಿಯನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವೀರಶೈವ ಸಂಸ್ಥಾಪಕರ ಮೂಲವನ್ನು ಕೆದಕುವ ಕೆಲವು ಸ್ವಘೋಷಿತ ಬುದ್ಧಿವಂತರು ಅವರಿಗೆ ಅರಿವು ಇರುವ ಅಸತ್ಯವನ್ನು ಕಿಂಚಿತ್ತೂ ಪ್ರಶ್ನಿಸದೇ ನಾವು ಹೇಳುವುದೇ ಸರಿ ಎಂದು ಭಾವಿಸಿದ್ದರೆ ಅದನ್ನು ಯಾರು ಒಪ್ಪಲಾರರು ಎಂದರು.

ರೈತರಿಗೆ ಬೆಳೆಯುವ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಬೇಕು. ರೈತರೇ ಬೆಲೆ ನಿಗದಿಗೊಳಿಸುವಂತಹ ಕಾನೂನು ಜಾರಿಗೊಳ್ಳಬೇಕು. ಹೀಗಾದಾಗ ಮಾತ್ರ ಜೈ ಕಿಸಾನ್ ಘೋಷಣೆಗೆ ಅರ್ಥ ಬರುತ್ತದೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ತಿಪ್ಪೇಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷ ಐ. ದಾರುಕೇಶ, ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಸಿ. ಮಹಾಬಲೇಶ್ವರ ಮಾತನಾಡಿದರು.

ಸ್ವಾಗತ ಸಮಿತಿ ಅಧ್ಯಕ್ಷ ಚಾಪೆ ಚಂದ್ರಪ್ಪ, ವರ್ತಕ ರಾಂಪುರ ವಿವೇಕಾನಂದ ಅವರು ಚಾನುಕೋಟಿ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಗೌರವ ಅರ್ಪಿಸಿದರು. ಬೆಣ್ಣೆಹಳ್ಳಿ ಶ್ರೀ ಸೇರಿದಂತೆ ಅನೇಕ ಮಠಾಧೀಶರು, ತಾಲೂಕು ಕಸಾಪ ಅಧ್ಯಕ್ಷ ದೇವರಮನಿ ಕೊಟ್ರೇಶ್, ಪಪಂ ಸದಸ್ಯರಾದ ವಿದ್ಯಾಶ್ರೀ ಮೇಘರಾಜ, ಶೈಲಜ ರಾಜೀವ್‌ ಇದ್ದರು.

ಮಹಿಳಾ ಸಮಾವೇಶದ ನಿಮಿತ್ತ 60 ಸ್ತ್ರೀ ಗುಂಪಿನ ಮಹಿಳೆಯರನ್ನು ಸನ್ಮಾನಿಸಲಾಯಿತು. ನಿಂಬಳಗೇರಿ, ಮಂಗಾಪುರ, ಗಾಣಘಟ್ಟ, ಎರಮ್ಮನಹಳ್ಳಿ ನಾಗನಹಳ್ಳಿ ಗ್ರಾಮದ ಮುಖಂಡರಿಗೆ ಗ್ರಾಮ ಗೌರವ ಸಲ್ಲಿಸಲಾಯಿತು.

ರೂಪಾ ಮಹಾಮನಿ ಸ್ವಾಗತಿಸಿದರು. ಸಿಂಧು ಗಿರೀಶ ವಂದಿಸಿದರು. ಪ್ರತಿಭಾ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.