ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರಸಭೆ ಅಧಿಕಾರಿಗಳು ಮತ್ತು ನೌಕರರು ಸರಿಯಾಗಿ ಮತ್ತು ಜನಪ್ರತಿನಿಧಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂದು ಇಳಕಲ್ ನಗರಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಸದೇ ನಾಗರಿಕರು ಪರದಾಡುವಂತಾಗಿದೆ ಎಂದು ಮುಖಂಡ ವೆಂಕಟೇಶ ಪೋತ ಆಕ್ರೋಶ ವ್ಯಕ್ತಪಡಿಸಿದರು.
ಮನೆಯಲ್ಲಿ ಕುಡಿಯಲು ಹಾಗೂ ಅಡುಗೆ ಮಾಡಲು ಸಹ ನೀರಿಲ್ಲ. ಜಳಕ ಮಾಡಿ 4 ದಿನಗಳೇ ಕಳೆದಿವೆ. ನಮ್ಮ ಸಂಕಟವನ್ನು ಯಾರ ಬಳಿ ಹೇಳಿಕೊಳ್ಳೋಣ ಎಂದು ಮಹಿಳೆಯರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ನಮ್ಮ ಚುನಾವಣೆಗಳಲ್ಲಿ ಮನೆಗೆ ಬಂದು ಮತ ಕೇಳುತ್ತೀರಿ. ನಮಗೆ ಸಮಸ್ಯೆ ಆದಾಗ ಇಲ್ಲಿ ಯಾರು ಇರುವುದಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಿಂಗಳಿಂದ ಒಂದಿಲ್ಲೊಂದು ಸಬೂಬು ಹೇಳುತ್ತಲೇ ಇದ್ದಾರೆ. ಕೇವಲ ನೀರಿನ ಕರ ವಸೂಲಿಗೆ ಮಾತ್ರ ಬರುತ್ತಾರೆ. ಆದರೆ, ನೀರು ಬಿಡುತ್ತಿಲ್ಲ ಎಂದು ಆಕ್ರೋಶ ಮಹಿಳೆಯರು ವ್ಯಕ್ತಪಡಿಸಿದರು. ಇನ್ನೆರಡು ದಿನಗಳಲ್ಲಿ ಸರಿಯಾಗಿ ನೀರು ಪೂರೈಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.