ಮಹಿಳೆಯರು ಇಂದು ನಿತ್ಯದ ಕೆಲಸದ ನಡುವೆ ತಮ್ಮ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನ ಹಾಗೂ ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಕಡೆಗೆ ಗಮನ ನೀಡಬೇಕು.
ಹುಬ್ಬಳ್ಳಿ:
ಮಹಿಳೆಯರು ಸಾಧನೆ ತೋರುವ ವೇಳೆ ಅನುಮಾನ. ಅವಮಾನಕ್ಕೆ ಎದೆಗುಂದದೇ ಸಾಧನೆಯ ಕಡೆ ಸಾಗಿದರೆ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂಬುದನ್ನು ಅರಿತುಕೊಳ್ಳಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ. ಶಾಂತಿ ಹೇಳಿದರು.ಅವರು ಸೋಮವಾರ ಇಲ್ಲಿನ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಮಹಿಳಾ ಉದ್ದಿಮೆದಾರರ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಇಂದು ನಿತ್ಯದ ಕೆಲಸದ ನಡುವೆ ತಮ್ಮ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಪ್ರತಿಯೊಬ್ಬ ಮಹಿಳೆಯೂ ತನ್ನ ಹಾಗೂ ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಕಡೆಗೆ ಗಮನ ನೀಡಲು ಸಲಹೆ ನೀಡಿದರು.ಮಹಿಳೆ ಸಾಧನೆ ಮಾಡಬೇಕಾದಲ್ಲಿ ಅವಳ ಹಿಂದೆ ಪುರುಷನ ಪರಿಶ್ರಮ ಇದ್ದೇ ಇರುತ್ತದೆ. ಮಹಿಳೆ ಸಾಧನೆ ತೋರುವುದರೊಂದಿಗೆ ಕುಟುಂಬ ಸದಸ್ಯರ ಪ್ರೀತಿ ಪಾತ್ರರಾಗುವುದು ಅಷ್ಟೇ ಅವಶ್ಯಕ. ಮೊದಲು ನಿಮ್ಮ ಮನೆಯ ವಾತಾವರಣ ಉತ್ತಮವಾಗಿಟ್ಟುಕೊಳ್ಳಿ. ನಿಮ್ಮ ಸಾಧನೆಗೆ ಕುಟುಂಬವೂ ಕೈಜೋಡಿಸಿದರೆ ಬೇಗನೆ ಸಾಧನೆ ತೋರಲು ಸಾಧ್ಯವಾಗಲಿದೆ. ಅದರೊಂದಿಗೆ ಮಹಿಳೆಯರು ದೇಶದ ಸಂಸ್ಕೃತಿ ಎತ್ತಿಹಿಡಿಯುವ ಕಾರ್ಯ ಮಾಡಿ ಎಂದು ಸಲಹೆ ನೀಡಿದರು.ಹೆಸ್ಕಾಂ ಹಿರಿಯ ಅಧೀಕ್ಷಕಿ ಶರಣಮ್ಮ ಜಂಗಿನ್ ಮಾತನಾಡಿ, ಎಲ್ಲಿ ನಾರಿಯರಿಗೆ ಗೌರವ ಸಿಗುತ್ತದೆಯೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಪ್ರತಿಯೊಬ್ಬರೂ ಮಹಿಳೆಯರಿಗೆ ಗೌರವ ನೀಡುವ ಕಾರ್ಯವಾಗಲಿ. ಆದರೆ, ಇಂದು ಕೆಲವಡೆ ಮಹಿಳೆಯರಿಗೆ ಗೌರವ, ಪ್ರೋತ್ಸಾಹ ದೊರೆಯುತ್ತಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದರು.ಆಹಾರ ವರ್ಗದಲ್ಲಿ ಅತ್ಯುತ್ತಮ ಸೃಷ್ಟಿಕರ್ತೆ ಎಂಬ ಪ್ರಶಸ್ತಿ ಪಡೆದ ಕಬಿತಾಸ್ ಕಿಚನ್ನ ಕಬಿತಾ ಸಿಂಗ್ ಮಾತನಾಡಿ, ಮಹಿಳೆಯರಿಗೆ ಸಹಕಾರ ಅವಶ್ಯಕ. ಸಹಕಾರವಿಲ್ಲದೇ ಸಾಧನೆ ಮಾಡಲು ಸಾಧ್ಯವಿಲ್ಲ. ಇದನ್ನು ಮಹಿಳೆಯರು ಅರಿತುಕೊಳ್ಳಿ ಎಂದರು. 18.5 ಸೆಕೆಂಡ್ಗಳಲ್ಲಿ ವೇಗವಾಗಿ ಸೀರೆ ಉಡಿಸುವುದಕ್ಕಾಗಿ ಗಿನ್ನಿಸ್ ಪುಸ್ತಕದಲ್ಲಿ ದಾಖಲೆ ರಚಿಸಿದ ಡಾಲಿ ಜೈನ್ ಮಾತನಾಡಿದರು. ಈ ವೇಳೆ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಮಹಿಳಾ ಉದ್ದಿಮೆದಾರರ ಸಮಿತಿ ಅಧ್ಯಕ್ಷೆ ನೀಪಾ ಮಹತಾ, ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಪ್ರವೀಣ ಅಂಗಡಿ, ಕಾರ್ಯದರ್ಶಿ ಮಹೇಂದ್ರ ಸಿಂಘಿ, ರವೀಂದ್ರ ಬಳಿಗೇರ, ಅರ್ಚನಾ ಬಾಗಲಕೋಟಿ, ಸವಿತಾ ತಿರ್ಲಾಪುರ, ಭಕ್ತಿ ಠಕ್ಕರ್, ವೀರೇಶ ಮೊಟಗಿ, ನೀಮಾ ಠಕ್ಕರ್ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.