ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರ: ಜಲಜಾ ಶೇಖರ್

KannadaprabhaNewsNetwork |  
Published : Feb 10, 2026, 03:00 AM IST
ವಿಜೃಂಭಣೆಯಿಂದ ಜರುಗಿದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನ: ಗಮನ ಸೆಳೆದ ಎತ್ತಿನಗಾಡಿ ಮೆರವಣಿಗೆ: ಗ್ರಾಮದಲ್ಲಿ ಹಬ್ಬದ ವಾತಾವರಣ | Kannada Prabha

ಸಾರಾಂಶ

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ, ನಮ್ಮ ಭಾಗದ ಪ್ರಕೃತಿ ಮಡಿಲಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದರು. ಕವನ, ಕವಿತೆಗೆ, ಕೃತಿ, ಸಾಹಿತ್ಯ ಕ್ಕೆ ಕೊಡುಗೆ ನೀಡಿದ ಕವಿಗಳ ಬಗ್ಗೆ ನೆನಪಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ತಾಲೂಕಿನಾಧ್ಯತ ಸಾಹಿತ್ಯ, ಕೃಷಿಯಲ್ಲಿ ತೊಡಗಿಕೊಂಡಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಗುರುತಿಸುತ್ತಿರುವುದು ಸ್ಫೂರ್ತಿ ತಂದಿಗೆ. ಕನ್ನಡ ಉಳಿವಿಗಾಗಿ ಪತ್ರಕರ್ತರು, ಪತ್ರಿಕೆಗಳು ಮುಂದಾಗುತ್ತಿವೆ. ಅದೇ ರೀತಿಯ ಚಲನಚಿತ್ರ, ಗಣಕ ಯಂತ್ರ, ಸಂಚಾರಿ ಮಾಧ್ಯಮದಲ್ಲಿ ಕನ್ನಡವನ್ನು ಕಡ್ಡಾಯ ಗೊಳಿಸಬೇಕು. ಬೆಂಗಳೂರಿನಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಕನ್ನಡ ಭಾಷೆ ನಾವು ಮಾತನಾಡಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯ, ಇಂದಿನ ಮಕ್ಕಳಿಗೆ ಕನ್ನಡದ ಬಗ್ಗೆ ಅರಿವು, ಭಾಷ ಜ್ಞಾನ ಮೂಡಿಸಬೇಕಾಗಿದೆ. ಮಕ್ಕಳಲ್ಲಿ ಕನ್ನಡ ಪುಸ್ತಕದ ಪ್ರೀತಿ ಹೆಚ್ಚಾಗುವಂತೆ ಮಾಡಬೇಕು, ಮಕ್ಕಳು ಆನ್‌ ಲೈನ್‌ ಗೇಮ್ ನಂತಹ ಚಟಗಳನ್ನು ಬಿಟ್ಟು ಪುಸ್ತದ ಕಾವ್ಯ ಕಾದಂಬರಿಯತ್ತ ಜ್ಞಾನ ಬೆಳೆಸಿಕೊಳ್ಳಬೇಕು ಎಂದು 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಲಜಾ ಶೇಖರ್ ಹೇಳಿದರು.

ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಗೂರು ಗ್ರಾಮದಲ್ಲಿ ಸೋಮವಾರ ನಡೆದ ೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ, ನಮ್ಮ ಭಾಗದ ಪ್ರಕೃತಿ ಮಡಿಲಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದರು. ಕವನ, ಕವಿತೆಗೆ, ಕೃತಿ, ಸಾಹಿತ್ಯ ಕ್ಕೆ ಕೊಡುಗೆ ನೀಡಿದ ಕವಿಗಳ ಬಗ್ಗೆ ನೆನಪಿಸಿದರು.ಐಗೂರಿನ ಐಸಿರಿ ಎಂಬ ಸ್ಮರಣ ಸಂಚಿಕೆಯನ್ನು ಶಾಸಕ ಡಾ. ಮಂತರ್ ಗೌಡ ಹಾಗೂ ಪ್ರದಾನ ಸಂಪಾದಕ ಎಸ್.ಎಂ. ಚoಗಪ್ಪ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಮಂತರ್ ಗೌಡ, ಕನ್ನಡವನ್ನು ನಮ್ಮ ದೇಶದ ಜೊತೆ ಹೊರ ದೇಶದಲ್ಲೂ ಇನ್ನಷ್ಟು ಬೆಳೆಸುವ ಕೆಲಸ ಮಾಡಬೇಕು, ಇನ್ನು ಹೆಚ್ಚು ಹೆಚ್ಚು ಕೃತಿ, ಸಾಹಿತ್ಯಗಳನ್ನು ಬಿಡುಗಡೆ ಮಾಡುವಲ್ಲಿ ನಾವುಗಳು ತೊಡಗಿಸಿಕೊಳ್ಳಬೇಕು.

ಯುವ ಪೀಳಿಗೆಗೆ ಕನ್ನಡದ ಬಗ್ಗೆ ಈ ರೀತಿಯ ಕಾರ‍್ಯಕ್ರಮ ಮಾಡುವ ಮೂಲಕ ಕನ್ನಡದ ಬಗ್ಗೆ ಇನ್ನಷ್ಟು ಅಭಿಮಾನ ಹಾಗೂ ಅರಿವು ಮೂಡುವಂತೆ ಮಾಡಬೇಕು. ಎಲ್ಲೆಲ್ಲೂ ಕನ್ನಡವನ್ನ ಬೆಳೆಸಿ ಕನ್ನಡವನ್ನೇ ಮಾತನಾಡಿ. ಕನ್ನಡ ಆಂಗ್ಲ ಭಾಷೆಗಿಂತ ಮುಂದಿದ್ದು, ಯಾರು ಕೂಡ ಮಾತೃ ಭಾಷೆಯನ್ನು ಮರೆಯಬಾರದು ಎಂದರು.

ಭವ್ಯವಾದ ಮೆರವಣಿಗೆ:

ಬೆಳಗ್ಗೆ ೯ ಗಂಟೆಗೆ ಐಗೂರು ಕಬ್ಬಿಣ ಸೇತುವೆಯಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಿತು. ತೆರೆದ ವಾಹನದಲ್ಲಿ ಸಮ್ಮೇಳನಾಧ್ಯಕ್ಷೆ ಸಾಹಿತಿ ಜಲಜಾ ಶೇಖರ್, ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.

ಸಾಂಪ್ರದಾಯಿಕ ವಾದ್ಯಗಳು, ಜನಪದ ಕಲಾವಿದರ ನೃತ್ಯ, ಕನ್ನಡ ಧ್ವಜಗಳು ಮತ್ತು ಘೋಷಣೆಗಳೊಂದಿಗೆ ನಡೆದ ಮೆರವಣಿಗೆಗೆ ಗ್ರಾಮಸ್ಥರು ಸಾಕ್ಷಿಯಾದರು. ತಾಪಂ ಕಾರ‍್ಯನಿರ್ವಾಹಕ ಅಧಿಕಾರಿ ಪರಮೇಶ ಕುಮಾರ್ ಮೆರವಣಿಗೆಯನ್ನು ಉದ್ಘಾಟಿಸಿದರು. ಕಬ್ಬಿಣ ಸೇತುವೆಯಿಂದ ಯಡವಾರೆ ಮಾರ್ಗವಾಗಿ ಸರ್ಕಾರಿ ಕಾಲೇಜು ಮೂಲಕ ಸಭಾಂಗಣದವರೆಗೆ ಮೆರವಣಿಗೆ ಸಾಗಿತು.ಬೆಳಗ್ಗೆ ೬.೩೦ ಗಂಟೆಗೆ ಶಾಲಾ ಮೈದಾನದಲ್ಲಿ ತಾಲೂಕು ತಹಸೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಧ್ವಜಾರೋಹಣ ನೆರವೇರಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು. ನಂತರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ದ್ವಾರಗಳ ಉದ್ಘಾಟನೆ:

ಸಮ್ಮೇಳನದ ವಿಶೇಷ ಆಕರ್ಷಣೆಯಾಗಿ ಗಣ್ಯರ ಹೆಸರಿನ ನೆನಪಿನ ದ್ವಾರಗಳ ಉದ್ಘಾಟನೆ ನಡೆಯಿತು. ದಿವಂಗತ ಕೆ.ಟಿ. ಪೂವಯ್ಯ ದಿ. ಗುಂಡಿಕುಟ್ಟಿ ಮಂಜುನಾಥಯ್ಯ, ದಿ. ಮಲ್ಲಚೀರ ಪಟೇಲ್ ಸೋಮಯ್ಯ, ಮಲ್ಲಪ್ಪ, ಲಿಂಗಪ್ಪ, ಬೆಳ್ಳಿಯಪ್ಪ, ಚಂಗಪ್ಪ, ಎಂ.ಬಿ. ಸುರೇಶ್, ಎಂ.ಬಿ. ದೇವರಾಜ್, ಎಂ.ಎಲ್. ಅಪ್ಪಚ್ಚು, ಎಂ.ಎಲ್. ಕೃಪಾಲ್, ಸಂಪಿಗೆಕೊಲ್ಲಿ ದಿ.ಡಿ.ಎಸ್. ದೇವಯ್ಯ ಮತ್ತು ದಿ. ಪೂವಮ್ಮ, ಮೂಲೆಮಜಲು ದಿ. ಸೋಮಣ್ಣ ತಂಗಮ್ಮ, ದಿ. ನಂಗಾರು ಬೋಪಯ್ಯ ಸೀತಮ್ಮ ದಂಪತಿ ಹಾಗೂ ನಂಗಾರು ಗೋಪಾಲ ಮಾಸ್ಟರ್, ಚಿಣ್ಣಪ್ಪ, ದಿ. ಮುಕ್ಕಾಟಿರ ಮಾದಪ್ಪ ಹಾಗೂ ದಿ. ಮಚ್ಚಂಡ ನಾಚಪ್ಪ ದಿ. ಕಾಳೇರಮ್ಮೆರ ಅಯ್ಯಣ್ಣ, ನಾಣಯ್ಯ, ಗೋಪಾಲ ಮತ್ತು ಪಾಲಾಕ್ಷ, ದಿ.ಸಿ.ಕೆ. ಕಾಳಪ್ಪ, ದಿ. ಮಣವಟ್ಟಿರ ಅಪ್ಪಯ್ಯ ಅಕ್ಕವ್ವ ದಂಪತಿ ಹಾಗು ಅಯ್ಯಣ್ಣ, ಮಂದಣ್ಣ, ಬೆಳ್ಳಿಯಪ್ಪ ದಿ. ಎ.ಎಂ. ಬೆಳ್ಳಿಯಪ್ಪ, ದಿ. ಎ.ಕೆ. ಸುಬ್ಬಯ್ಯ ಮತ್ತು ದಿ. ಈಶ್ವರಿ ಮೇದಪ್ಪ, ದಿ. ದಳವಾಯಿ ಹನುಮರಾಜೇ ಅರಸ್ ಅವರ ನೆನಪಿನ ದ್ವಾರಗಳನ್ನು ಅವರ ಕುಟುಂಬಸ್ಥರು ಉದ್ಘಾಟಿಸಿದರು.ಅರೋಗ್ಯ ಇಲಾಖೆಯಿಂದ ರಕ್ತದಾನ ಶಿಬಿರ ಹಾಗೂ ಅಂಗಾoಗ ದಾನದ ಬಗ್ಗೆ ಜಾಗೃತಿ ನಡೆಯಿತು. ಸಾಹಿತಿ ಕೋವರ್‌ಕೊಲ್ಲಿ ದಿ. ಕರುಣಾಕರ ಪುಸ್ತಕ ಮಳಿಗೆಯನ್ನು ಜಿ.ಕೆ. ವಿನೋದ್ ಉದ್ಘಾಟಿಸಿದರು. ವೇದಿಕೆಯಲ್ಲಿ ನಂಗಾರು ಕೀರ್ತಿ ಪ್ರಸಾದ್, ಸಮ್ಮೇಳನ ಮಹಾ ಪೋಷಕ ಟಿ.ಪಿ. ರಮೇಶ್, ನಿಕಟಪೂರ್ವ ಸಮ್ಮೇಳನ ಅಧ್ಯಕ್ಷೆ ಶ.ಗ. ನಯನತಾರ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ, ಕೆ.ಪಿ. ಚಂದ್ರಕಲಾ, ಕೆ.ಎಂ. ಲೋಕೇಶ್, ರೇವತಿ ರಮೇಶ್, ಜ್ಯೋತಿ ಅರುಣ್, ಎ.ಪಿ. ವೀರರಾಜು, ಕೆ.ಪಿ. ದಿನೇಶ್, ಜವರಪ್ಪ, ಮತ್ತಿತರ ಗಣ್ಯರು ಇದ್ದರು.

ಗೀತಾ ಗಾಯನ ಕಾರ‍್ಯಕ್ರಮದಲ್ಲಿ ಸ್ಥಳೀಯ ಗಾಯಕರು ಹಾಡಿ ಜನಮೆಚ್ಚುಗೆ ಗಳಿಸಿದರು. ಮಧ್ಯಾಹ್ನ ನಂತರ ವಿವಿಧ ವಿಚಾರಗೋಷ್ಠಿಗಳು ನಡೆದವು.

ಯಡೂರು ಬಿಟಿಸಿಜಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಡಿ. ಹರ್ಷ, ಗ್ರಾಮೀಣ ಜನರ ಜಾನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಸುಗ್ಗಿ ಹಬ್ಬವನ್ನು ಕೇವಲ ಹಸಿರು ಧಾನ್ಯಗಳ ಕೃತಜ್ಞತೆಗಾಗಿ ಅಚರಿಸುವ ಹಬ್ಬ ಮಾತ್ರ ಅಲ್ಲ. ಹಳ್ಳಿಗಳ ಸಾಮಾಜಿಕ, ಸಾಂಸೃತಿಕ ಬದುಕಿನ ವಿಶಿಷ್ಟತೆ ಎಂದು ಬಣ್ಣಿಸಿದರು. ಹಬ್ಬದ ನೃತ್ಯಗಳು, ಧಾರ‍್ಮಿಕ ಆಚರಣೆ, ಕಟ್ಟುನಿಟ್ಟು ಎಲ್ಲವೂ ಗ್ರಾಮೀಣ ಜನರ ಬದುಕಿನ ಅಂಗವಾಗಿದೆ ಎಂದು ಹೇಳಿದರು.

ರೈತಾಪಿ ವರ್ಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತ ಸಂಘದ ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ಸೋಮವಾರಪೇಟೆ ತಾಲೂಕಿನಲ್ಲಿ ಪ್ರವಾಸೋಧ್ಯಮ ಬೆಳವಣಿಗೆ ಬಗ್ಗೆ ಮೀನುಗಾರಿಕಾ ಇಲಾಖೆಯ ಮಿಲನಾ ಭರತ್ ಉಪನ್ಯಾಸ ನೀಡಿದರು.ಕವಿಗೋಷ್ಠಿಯಲ್ಲಿ ವಾಸಂತಿ ರವೀಂದ್ರ, ಹೇಮಂತ್ ಪಾರೇರ, ಮಹೇಶ್ ತಿಮ್ಮಯ್ಯ, ದೀಪಿಕಾ , ಲತಾಕೃಷ್ಣ, ಪದ್ಮಾವತಿ, ಸುಮನಾ ಗೌತಮ್, ಕೆ.ಎ. ಚಂದ್ರಕಲಾ, ನಾಗರಾಜ್ ಅಚಾರ್ ಕವನ ವಾಚಿಸಿದರು.ಸಂಜೆ ಬಹಿರಂಗ ಅಧಿವೇಶ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ೩೦ ಮಂದಿ ಗಣ್ಯರನ್ನು ಸನ್ಮಾನಿಸಲಾಯಿತು. ಇದರೊಂದಿಗೆ ರಾತ್ರಿ ಸಮಾರೋಪ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಅಭಿವೃದ್ಧಿಯಾದರೆ ಗ್ರಾಮ ವಿಕಾಸ: ಡಾ. ಹೆಗ್ಗಡೆ
ಕೊಣಂಜಗೇರಿ ಗ್ರಾ.ಪಂ. ನೂತನ ಕಟ್ಟಡದ ಉದ್ಘಾಟನೆ