ಮಹಿಳೆಯರ ಸ್ವಾವಲಂಬನೆ ಬದುಕು, ಆರ್ಥಿಕ ಶ್ರೇಯೋಭಿವೃದ್ಧಿಗೆ ವಿವಿಧ ತರಬೇತಿ ನೀಡಲು ಮತ್ತು ಧಾರ್ಮಿಕ ಆಚರಣೆಗೆ ಸುಮಾರು 25 ರಿಂದ 30 ಲಕ್ಷ ರು. ಖರ್ಚು ಮಾಡಿ ಕಚೇರಿ ಮತ್ತು ವಿವಿಧೋದ್ದೇಶ ಭವನ ನಿರ್ಮಿಸಿರುವುದು ಮಹಿಳಾ ಶಕ್ತಿ ತೋರಿದೆ. ಇಡೀ ನಗರಕ್ಕೆ ಮಾದರಿಯಾಗಿ ಮಹಿಳಾ ಸಂಘ ಕೆಲಸ ಮಾಡುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮಹಿಳೆಯರು ಸ್ವ-ಉದ್ಯೋಗದ ಸ್ವಾವಲಂಬಿ ಜೀವನ ನಡೆಸುತ್ತಿರುವುದು ಶ್ಲಾಘನೀಯ ಎಂದು ಎಂ.ಎಂ.ಫೌಂಡೇಶನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಗುತ್ತಲು ಬಡಾವಣೆಯ ಸೃಷ್ಟಿ ಮಹಿಳಾ ಸಮಾಜದಿಂದ ಏರ್ಪಡಿಸಿದ ಗಣೇಶ ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಹಿಳಾ ಕ್ಷೇಮಾಭಿವೃದ್ಧಿಗೆ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿದರು.
ಮಹಿಳೆಯರ ಸ್ವಾವಲಂಬನೆ ಬದುಕು, ಆರ್ಥಿಕ ಶ್ರೇಯೋಭಿವೃದ್ಧಿಗೆ ವಿವಿಧ ತರಬೇತಿ ನೀಡಲು ಮತ್ತು ಧಾರ್ಮಿಕ ಆಚರಣೆಗೆ ಸುಮಾರು 25 ರಿಂದ 30 ಲಕ್ಷ ರು. ಖರ್ಚು ಮಾಡಿ ಕಚೇರಿ ಮತ್ತು ವಿವಿಧೋದ್ದೇಶ ಭವನ ನಿರ್ಮಿಸಿರುವುದು ಮಹಿಳಾ ಶಕ್ತಿ ತೋರಿದೆ. ಇಡೀ ನಗರಕ್ಕೆ ಮಾದರಿಯಾಗಿ ಮಹಿಳಾ ಸಂಘ ಕೆಲಸ ಮಾಡುತ್ತಿದೆ ಎಂದರು.
ಇದೇ ವೇಳೆ ಎಂಎಂ ಫೌಂಡೇಶನ್ ವತಿಯಿಂದ ಸೃಷ್ಟಿ ಮಹಿಳಾ ಸಮಾಜಕ್ಕೆ ಆರ್ಥಿಕ ನೆರವು ನೀಡಿ, ಫೌಂಡೇಶನ್ ನಿಮ್ಮ ಸಮಾಜಮುಖಿ ಮತ್ತು ಮಹಿಳಾ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆ ಸದಾ ಭಾಗಿಯಾಗುತ್ತದೆ ಎಂದರು.
ಈ ವೇಳೆ ಸೃಷ್ಟಿ ಮಹಿಳಾ ಸಮಾಜದ ಅಧ್ಯಕ್ಷೆ ಮಧು ಶಿವಲಿಂಗಯ್ಯ, ಉಪಾಧ್ಯಕ್ಷೆ ಪ್ರೇಮ ಪುಟ್ಟರಾಜ್, ಕಾರ್ಯದರ್ಶಿ ಕವಿತಾ, ಫೌಂಡೇಶನ್ ಖಜಾಂಚಿ ಶಶಿ ಬೇಬಿ, ಸಂಘಟನಾ ಕಾರ್ಯದರ್ಶಿ ಮೋಹನ್, ಟ್ರಸ್ಟಿ ಪರಮೇಶ್ವರಪ್ಪ ಇತರರು ಇದ್ದರು.
ಸೆ.೬ರಂದು ಕೆ.ಗೌಡಗೆರೆಯಲ್ಲಿ ಗುರುವಂದನೆ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಕೆ.ಗೌಡಗೆರೆ ಗ್ರಾಮದ ಶ್ರೀವಿವೇಕಾನಂದ ಪ್ರೌಢಶಾಲೆಯ ೧೯೯೫ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ಸೆ.೬ರಂದು ಮಧ್ಯಾಹ್ನ ೩ ಗಂಟೆಗೆ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಬಿ.ಆರ್.ರವಿ ತಿಳಿಸಿದರು.
ಅಂದು ಶಿಕ್ಷಕರನ್ನು ಶ್ರೀಕಾಶಿ ವಿಶ್ವನಾಥ ದೇಗುಲದಿಂದ ಶಾಲೆಯವರೆಗೆ ಮೆರವಣಿಗೆಯಲ್ಲಿ ಕರೆತರಲಾಗುವುದು. ವಿಶೇಷ ಆಹ್ವಾನಿತರಾಗಿ ಉತ್ತರವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಭಾಗವಹಿಸುವರು. ಅಧ್ಯಕ್ಷತೆಯನ್ನು ಶ್ರೀ ವಿವೇಕಾನಂದ ವಿದ್ಯಾ ಸಂಸ್ಥೆ ಅಧ್ಯಕ್ಷ ಜಿ.ಎಲ್.ಸ್ವಾಮಿ ವಹಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರನ್ನು ಸನ್ಮಾನಿಸಲಾಗುವುದು. ಇದಲ್ಲದೇ, ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಅಮೃತ, ಲಿಖಿತಾ, ರಚನಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಕೆ.ಗೌಡಗೆರೆಗೆ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬರುವುದಕ್ಕೆ ಬಸ್ಗಳ ವ್ಯವಸ್ಥೆ ಇಲ್ಲ. ಅದಕ್ಕಾಗಿ ಹಳೆಯ ವಿದ್ಯಾರ್ಥಿಗಳೆಲ್ಲರೂ ಸೇರಿ ಒಂದು ಬಸ್ಸನ್ನು ಕೊಡುಗೆಯಾಗಿ ನೀಡುವುದಕ್ಕೆ ನಿರ್ಧರಿಸಿದ್ದೇವೆ. ಹಾಲಿ ಒಂದೇ ಒಂದು ವಾಹನ ಕಾರ್ಯನಿರ್ವಹಿಸುತ್ತಿದ್ದು, ಮೂರು ಬಾರಿ ಏಳು ಊರುಗಳಿಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಬರಬೇಕಾದ ಸ್ಥಿತಿ ಇದೆ. ಅದಕ್ಕಾಗಿ ಬಸ್ಸನ್ನೇ ದೊರಕಿಸಿಕೊಡಲು ಮುಂದಾಗಿರುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಜಿ.ಎಲ್.ಸ್ವಾಮಿ, ಬೋರೇಗೌಡ, ಕೆಂಪರಾಜು, ಲಕ್ಕಶೆಟ್ಟಿ, ಪ್ರಸನ್ನಕುಮಾರ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.