ಭದ್ರಾವತಿ: ಮಹಿಳೆ ಇಂದು ತನ್ನನ್ನು ರಕ್ಷಿಸಿಕೊಳ್ಳುವ ಜೊತೆಗೆ ಸಮಾನತೆಯೊಂದಿಗೆ ಪ್ರಗತಿ ಸಾಧಿಸಬೇಕಾಗಿದೆ ಎಂದು ನೂತನ ನ್ಯಾಯಧೀಶರಾಗಿ ಆಯ್ಕೆಯಾಗಿರುವ ಅನನ್ಯ ಶಾಸ್ತ್ರಿ ಹೇಳಿದರು.
ಈ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಲಿಂಗ ಸಮಾನತೆಗಾಗಿ ಉದಾರತೆ, ಸಹಯೋಗ ಮತ್ತು ಜ್ಞಾನ ಹಂಚಿಕೆಗೆ ಒತ್ತು ನೀಡುತ್ತದೆ. ಮಹಿಳೆಯರ ಪ್ರಗತಿ, ಸುರಕ್ಷತೆ ಮತ್ತು ಹಕ್ಕುಗಳಿಗಾಗಿ ಒಟ್ಟಾಗಿ ಕೆಲಸ ಮಾಡುವ ಸಂದೇಶ ಸಾರುತ್ತದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು. ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ. ವಿಜಯದೇವಿ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಕುರಿತು ಮಾತನಾಡಿದರು. ಈ ಬಾರಿ ಶಿಕಾರಿಪುರದ ಅಂತಾರಾಷ್ಟ್ರೀಯ ಪಂಜ ಕುಸ್ತಿಪಟು ಗೌರಮ್ಮ ಅವರಿಗೆ ಸರ್ವಮಂಗಳಮ್ಮ ಶಿವಶಂಕರಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ದಂತ ವೈದ್ಯೆ ಡಾ. ಮಯೂರಿ, ಆಕಾಶವಾಣಿ ಉದ್ಘೋಷಕಿ ವಿದ್ಯಾ ಕಾರಂತ್, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಶುಶ್ರೂಷಕಿ ಇಂದಿರಮ್ಮ, ವಾಹನ ಚಾಲಕಿ ಮಂಜುಳ ಶಿವಪ್ಪ, ಮಹಿಳಾ ಪೌರಕಾರ್ಮಿಕರಾದ ರುದ್ರಮ್ಮ ಅವರನ್ನು ಗೌರವಿಸಲಾಯಿತು. ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ಕೋಠಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಆರ್.ಎಸ್ ಶೋಭಾ, ಉಪಾಧ್ಯಕ್ಷೆ ವಿಜಯ ಜಗನ್ನಾಥ್ ಇದ್ದರು. ಕುಸುಮ ತೀರ್ಥಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.