ಸಂತಾನ ಪ್ರಾಪ್ತಿ, ಮಕ್ಕಳ ಉನ್ನತಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಕಾಲದಿಂದಲೂ ನಾಗದೇವತೆ ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿ ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸಿದರು.
ಕುಷ್ಟಗಿ:ನಾಗರ ಪಂಚಮಿ ಅಂಗವಾಗಿ ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಕೇಸೂರು, ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರು ನಾಗಪ್ಪನ ಕಟ್ಟಿಗೆ ಹಾಲೆರೆಯುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಿದರು.
ಹಬ್ಬದ ಅಂಗವಾಗಿ ಬೆಳಗ್ಗೆಯಿಂದಲೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮನೆಯಲ್ಲಿ ಹೋಳಿಗೆ, ಕರ್ಚಿಕಾಯಿ, ಶೇಂಗಾ ಉಂಡಿ, ಎಳ್ಳುಂಡಿ ಸಿದ್ಧಪಡಿಸಿ ಮಹಿಳೆಯರು ನಾಗಪ್ಪ ಕಟ್ಟೆಗಳಿಗೆ ತೆರಳಿ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲವನ್ನಿಟ್ಟು ಹಾಲೆರೆದರು. ವಿಶೇಷವಾಗಿ ರೈತ ಮಹಿಳೆಯರು ವರ್ಷಪೂರ್ತಿ ಕೃಷಿ ಬದುಕಿನಲ್ಲಿ ತೊಡಗಿದ್ದಾಗ ಯಾವುದೇ ವಿಷ ಜಂತುಗಳಿಂದ ಅಪಾಯವಾಗದಿರಲಿ. ನಮ್ಮ ಮಕ್ಕಳು, ನಾವು ಕ್ಷೇಮದಿಂದ ಇರಲಿ. ಮಳೆ-ಬೆಳೆ ಸಮೃದ್ಧಿಯಾಗಿ ಬರಲಿ. ಸುಖ-ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.
ಮಹಿಳೆಯರು. ಮಕ್ಕಳು ಹೊಸಬಟ್ಟೆ ಧರಿಸಿ ಸಂಭ್ರಮಪಟ್ಟರು. ನಂತರ ತರಹೇವಾರಿ ಉಂಡಿ, ಕುರುಕುಲ ತಿಂಡಿಗಳನ್ನು ಅಕ್ಕಪಕ್ಕದವರೊಂದಿಗೆ ವಿನಿಮಯ ಮಾಡುವ ಮೂಲಕ ಹಬ್ಬ ಆಚರಿಸಿದರು.
ಸಂತಾನ ಪ್ರಾಪ್ತಿ, ಮಕ್ಕಳ ಉನ್ನತಿ, ನಾಗದೋಷ ಪರಿಹಾರಕ್ಕಾಗಿ, ಸ್ತ್ರೀಯರು ತಮ್ಮ ಸೋದರರ ಒಳಿತಿಗಾಗಿ ಕಾಲದಿಂದಲೂ ನಾಗದೇವತೆ ಪೂಜಿಸುತ್ತಾ ಬಂದಿರುವುದು ವಿಶೇಷ. ಮನೆಯಲ್ಲಿ ತಾಯಂದಿರು ನಾಗಮೂರ್ತಿಗೆ ವಿಶೇಷ ತಿನಿಸುಗಳ ನೈವೇದ್ಯ ಮತ್ತು ಹರಕೆ ಹೊತ್ತವರು ಲೋಹಗಳ ಕಣ್ಣು, ಮೀಸೆ, ಇತ್ಯಾದಿ ಸಮರ್ಪಿಸಿ, ಮನೆಯವರ ಶ್ರೇಯೋಭಿವೃದ್ಧಿಗಾಗಿ ಹರಕೆ ತೀರಿಸಿದರು. ಹಬ್ಬದ ಅಂಗವಾಗಿ ಮನೆಯಂಗಳದ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿ ಮಕ್ಕಳು ಸರದಿಯಂತೆ ಜೋಕಾಲಿ ಆಡುತ್ತಾ ಸಂಭ್ರಮಿಸಿದರು.
ಎಲ್ಲೆಲ್ಲಿ:
ಪಟ್ಟಣದ ಬುತ್ತಿಬಸವೇಶ್ವರ ದೇವಸ್ಥಾನ, ಮದ್ದಾನೇಶ್ವರ ಮಠದ ಹತ್ತಿರ, ಅನ್ನದಾನೇಶ್ವರ ನಗರ ಸೇರಿದಂತೆ ತಾಲೂಕಿನ ದೋಟಿಹಾಳದ ಶುಖಮುನಿಸ್ವಾಮಿ ಮಠದ ಹತ್ತಿರ, ಪಾದಗಟ್ಟೆಯ ಹತ್ತಿರ ರುದ್ರಮುನಿ ಸ್ವಾಮಿ ಮಠದ ಹತ್ತಿರ, ಸಂತೆ ಬಜಾರ್ ಹತ್ತಿರ ಹಾಗೂ ಕೇಸೂರು ಗ್ರಾಮದ ವಿವಿಧ ನಾಗಕಟ್ಟೆಯ ಬಳಿ ಮಹಿಳೆಯರು ನಾಗದೇವತೆಗೆ ಹಾಲೆರೆದು ಜೋಕಾಲಿ ಹಬ್ಬವನ್ನು ಸಂಭ್ರಮಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.