ಧಾರವಾಡ:
ವಿಪತ್ತಿನ ಸಮಯದಲ್ಲಿ ಮೂಲಭೂತ ಅಗತ್ಯತೆಯ ಜತೆಗೆ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಂತಾನೋತ್ಪತ್ತಿ ಆರೋಗ್ಯ ಸೇವಾ ಅಗತ್ಯತೆಯೂ ಪ್ರಮುಖವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವಿ. ಬರಮನಿ ಹೇಳಿದರು.ಫ್ಯಾಮಿಲಿ ಪ್ಲಾನಿಂಗ್ ಅಸೋಶಿಯೇಶನ್ ಆಫ್ ಇಂಡಿಯಾ ಧಾರವಾಡ ಶಾಖೆಯು ಇಂಟರ್ ಎಜೆನ್ಸಿ ವರ್ಕಿಂಗ್ ಗ್ರೂಪ್ ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ಆಯೋಜಿಸಿದ್ದ ವಿಪತ್ತಿನ ಸಂದರ್ಭದಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಕನಿಷ್ಠ ಆರಂಭಿಕ ಸೇವಾ ಪ್ಯಾಕೇಜ್ ಮಹತ್ವದ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಈ ರೀತಿಯ ಕಾರ್ಯಾಗಾರಗಳ ಮೂಲಕ ಸಮಾಜದಲ್ಲಿ ಸೇವಾ ಮನೋಭಾವನೆ ಬೆಳೆಯಲಿದೆ. ಮಾನವೀಯ ನೆಲೆಗಟ್ಟಿನಲ್ಲಿ ಅಗತ್ಯವಿರುವ ಜನರಿಗೆ ಜೀವ ರಕ್ಷಿಸಲು ಸರ್ಕಾರ ಮತ್ತು ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳನ್ನು ಒಗ್ಗೂಡಿಸಿದ್ದು ಶ್ಲಾಘನೀಯ. ಈ ದಿಸೆಯಲ್ಲಿ ಪೊಲೀಸ್ ಇಲಾಖೆವು ಎಲ್ಲ ರೀತಿಯ ಸಹಕಾರದೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದರು.ಇಂಟರ್ ಎಜೆನ್ಸಿ ವರ್ಕಿಂಗ್ ಗ್ರೂಪ್ ಸಿಇಒ ಶರಣಪ್ಪ ಬರಸಿ ಮಾತನಾಡಿ, ಸಂಸ್ಥೆಯು ಹಲವು ವರ್ಷಗಳಿಂದ ವಿಪತ್ತುಗಳಲ್ಲಿ ಕೆಲಸ ಮಾಡುತ್ತಿದೆ. ಕಾರ್ಯಾಗಾರದಲ್ಲಿ ಕನಿಷ್ಠ ಆರಂಭಿಕ ಸೇವೆ ಪ್ಯಾಕೇಜ್ ಕುರಿತು ಚರ್ಚೆ ವಿಶೇಷವಾಗಿದೆ. ರಾಜ್ಯದ ಯಾವುದೇ ಭಾಗದ ವಿಪತ್ತಿನ ಸಂದರ್ಭದಲ್ಲಿ ಎಲ್ಲರೂ ಸೇರಿ ಸಂತಾನೋತ್ಪತ್ತಿ ಆರೋಗ್ಯದ ಕನಿಷ್ಠ ಆರಂಭಿಕ ಸೇವೆ ನೀಡಲು ಕಾರ್ಯಾಗಾರ ಸಹಾಯವಾಗಲಿದೆ ಎಂದರು. ಅಥಿತಿಗಳಾದ ಡಾ. ಮೋಹನಕುಮಾರ ತಂಬದ, ವಯನಾಡಿನ ಜನರ ಸಂಕಷ್ಟ ವಿವರಿಸಿದರು. ಇಂತಹ ಕಾರ್ಯಾಗಾರಗಳು ನಮ್ಮನ್ನು ನಾವು ಸನ್ನದ್ಧಗೊಳಿಸಲು ಸಹಕಾರಿಯಾಗುತ್ತವೆ ಎಂದರು.
ಶಾಖಾ ವ್ಯವಸ್ಥಾಪಕರಾದ ಸುಜಾತಾ ಆನಿಶೆಟ್ಟರ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಸಂಘ-ಸಂಸ್ಥೆಗಳ 50ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಶಿಲ್ಪಾ ಅದರಗುಂಚಿ ಸ್ವಾಗತಿಸಿದರು, ಆಶಾ ಕೋರಿಶೆಟ್ಟರ ವಂದಿಸಿದರು. ಎನ್.ಎಫ್. ಮಡಿವಾಳರ ನಿರೂಪಿಸಿದರು.