ಸಾಹಿತಿ, ಹೋರಾಟಗಾರ್ತಿ ಮನೋರಮಾ ಎಂ. ಭಟ್‌ ನಿಧನ

KannadaprabhaNewsNetwork | Published : Sep 16, 2024 1:46 AM

ಸಾರಾಂಶ

ಕೊನೆವರೆಗೂ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯ ಲೇಖಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಅಶೋಕನಗರ ನಿವಾಸಿ ಮನೋರಮಾ ಎಂ. ಭಟ್‌ (92) ಅಲ್ಪ ಕಾಲದ ಅಸೌಖ್ಯದಿಂದ ಭಾನುವಾರ ನಿಧನರಾದರು.

ಪುತ್ತೂರಿನಲ್ಲಿ ಪರಮೇಶ್ವರ ಶಾಸ್ತ್ರಿ- ಸತ್ಯಭಾಮಾ ದಂಪತಿಗೆ 1932ರ ಜು.15ರಂದು ಜನಿಸಿದ ಮನೋರಮಾ ಭಟ್‌, ಕಲಾವಿದರಾಗಿ, ಹೋರಾಟಗಾರರಾಗಿ, ನಾಟಕಕಾರ್ತಿಯಾಗಿ ಹಲವು ಕ್ಷೇತ್ರಗಳಲ್ಲಿ ಹೆಸರು ಪಡೆದವರು. ಮಂಗಳೂರು ಹೊರವಲಯದ ಉಳಾಯಿಬೆಟ್ಟಿನಲ್ಲಿ ‘ಅವತಾರ್‌’ ಮನೆಯಲ್ಲಿ ವಾಸವಾಗಿದ್ದ ಅವರು, ವಾರದ ಹಿಂದಷ್ಟೆ ಅನಾರೋಗ್ಯಕ್ಕೆ ತುತ್ತಾಗಿದ್ದರು.

ಸ್ವಯಂವರ, ಶಬ್ದಗಳಾಗದ ಧ್ವನಿಗಳು ಅವರ ಕಥಾ ಸಂಕಲನಗಳು. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಲೇಖಕಿಯರು, ವ್ಯಂಗ್ಯ ಬದುಕು (ಶಿಂಗಣ್ಣ ಖ್ಯಾತಿಯ ಕೆ.ರಾಮಕೃಷ್ಣ ಅವರ ಜೀವನ ಮತ್ತು ಸಾಧನೆ), ಮುಳಿಯರ ನೆನಪು (ಮುಳಿಯ ತಿಮ್ಮಪ್ಪಯ್ಯ ಅವರ ಜೀವನ ಸಾಧನೆ ಕುರಿತ ಲೇಖನ ಸಂಗ್ರಹ) ಅವರ ಸಂಪಾದಿತ ಕೃತಿಗಳು. ಹೆಣ್ಣಿಗೇಕೆ ಈ ಶಿಕ್ಷೆ? ಎಂಬ ವೈಚಾರಿಕ ಬರಹವನ್ನು ಬರೆದಿದ್ದಾರೆ. ಅತ್ತಿಮಬ್ಬೆ ಪ್ರತಿಷ್ಠಾನದ ಸಾಹಿತ್ಯ ಪ್ರಶಸ್ತಿ, ಸಾಗರದ ಹೊಸಬಾಳೆ ಅನಂತಪ್ಪ ಸೇವಾ ಪುರಸ್ಕಾರ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದಾರೆ. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದರು.

ಅವರು 20ಕ್ಕೂ ಅಧಿಕ ರೇಡಿಯೋ ನಾಟಕ ರಚಿಸಿದ್ದು, ಅವುಗಳ ಕೃತಿಗಳನ್ನೂ ಹೊರತಂದಿದ್ದರು.

ಮನೋರಮಾ ಭಟ್‌ ಪುತ್ತೂರಿನ ಮುಳಿಯ ತಿಮ್ಮಪ್ಪಯ್ಯ ಅವರ ಹಿರಿಯ ಸೊಸೆ, ಯಕ್ಷಗಾನ ವಿದ್ವಾಂಸ ಮುಳಿಯ ಮಹಾಬಲ ಭಟ್ಟರ ಪತ್ನಿ. ಮಹಿಳೆಯರ ಹಕ್ಕುಗಳ ಪ್ರಶ್ನೆ ಬಂದಾಗ ದಿಟ್ಟವಾಗಿ ಎದುರಿಸಿದವರು. ವಿಧವೆಯರು ಮಾಂಗಲ್ಯ ಸರ ತೆಗೆಯಬೇಕೆಂಬ ನಂಬಿಕೆ ಎದುರಿಸಿ ಹೋರಾಡಿದವರು. ಕೊನೆವರೆಗೂ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಮುಳಿಯ ತಿಮ್ಮಪ್ಪಯ್ಯ ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಮುಳಿಯ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.

ಮನೋರಮಾ ಭಟ್‌ ಅವರ ಒಬ್ಬ ಪುತ್ರ ಜಯರಾಮ್ ಭಟ್ ಅಮೆರಿಕದಲ್ಲಿ ನೆಲೆಸಿದ್ದಾರೆ. ಇನ್ನೋರ್ವ ಪುತ್ರ ಮಹೇಶ್ ಎಂ. ಭಟ್‌ ಬೆಂಗಳೂರಿನಲ್ಲಿ ಖ್ಯಾತ ಛಾಯಾಚಿತ್ರ ತಂತ್ರಜ್ಞರಾಗಿದ್ದಾರೆ.

Share this article