ಕುರುಗೋಡು: ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸಿ ಬೆಳೆಸುವಲ್ಲಿ ಸ್ತ್ರೀಯರ ಪಾತ್ರ ಪ್ರಮುಖವಾಗಿದೆ. ದೇವಿಪುರಾಣದಲ್ಲಿ ಬರುವ ಬಹುತೇಕ ಸನ್ನಿವೇಶಗಳು ಇದಕ್ಕೆ ಪುಷ್ಟಿ ನೀಡುತ್ತವೆ ಎಂದು ಕೊಟ್ಟೂರು ಸ್ವಾಮಿ ಸಂಸ್ಥಾನ ವಿರಕ್ತಮಠದ ಬಸವಲಿಂಗ ಶ್ರೀ ಹೇಳಿದರು.
ಒತ್ತಡದ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಭಕ್ತರ ಮಾನಸಿಕ ನೆಮ್ಮದಿಗಾಗಿ ಪುರಾಣ ಪುಣ್ಯಕಥೆಗಳ ಶ್ರವಣ ಅಗತ್ಯ. ಪುರಾಣದಲ್ಲಿ ದೇವಿಯ ಶಕ್ತಿಯನ್ನು ವಿಮರ್ಶೆ ಮಾಡದೆ ನಿರ್ಲಿಪ್ತಭಾವ ತಾಳಿ ನಮ್ಮ ದೇಹದ ವಿಮರ್ಶೆ ಮಾಡಿಕೊಂಡರೆ ಮಾತ್ರ ಮನುಷ್ಯರು ಖುಷಿಯಿಂದಿರಲು ಸಾಧ್ಯ ಎಂದರು.
ಅವಿಭಕ್ತ ಕುಟುಂಬಗಳಿದ್ದ ದಿನಮಾನಗಳಲ್ಲಿ ಜನರಲ್ಲಿ ಜ್ಞಾನದ ದಾಹವಿತ್ತು. ಇಂದು ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿ ಒಬ್ಬಂಟಿ ಜೀವನ ಸಾಗಿಸುತ್ತಿರುವವರಲ್ಲಿ ಹಣ ಗಳಿಕೆಯ ದಾಹ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.ಶಾಖಾ ಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮೀಜಿ ಮಾತನಾಡಿ, ತಮ್ಮಲ್ಲಿರುವ ತಾಮಸ ಗುಣಗಳನ್ನು ಕಳೆದು ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಧ್ಯಾತ್ಮಿಕ ಸಂಪತ್ತು ಹೊಂದಿರುವ ನಮ್ಮ ನಾಡು ವಿಶ್ವದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಜನ್ಮ ನೀಡಿದ ತಂದೆ, ತಾಯಿಯನ್ನು ದೇವರು ಎಂದು ಭಕ್ತಿಯಿಂದ ಪೂಜಿಸುವ ಶ್ರೇಷ್ಠನಾಡು ನಮ್ಮದು ಎಂದು ಬಣ್ಣಿಸಿದರು.ನಮ್ಮ ದೇಶದಲ್ಲಿ ಮಹಿಳೆಯ ಹೆಚ್ಚು ಗೌರವವಿದೆ. ನಾಡಿನಲ್ಲಿ ಆಚರಿಸುವ ಬಹುತೇಕ ಹಬ್ಬಗಳು ಮಹಿಳೆಯರಿಗಾಗಿಯೇ ಮೀಸಲಿರುವುದು ವಿಶೇಷ ದೇವಿಪುರಾಣ ಶ್ರವಣ ಮಾಡಿದ ಮನುಷ್ಯರು ತಮ್ಮಲ್ಲಿರುವ ತಾಮಸಗುಣಗಳನ್ನು ಕಳೆದು ಸಾತ್ವಿಕ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಿರಬೂರಿನ ವೇದಮೂರ್ತಿ ಬಸಯ್ಯಶಾಸ್ತ್ರಿ ಹಿರೇಮಠ ಪುರಾಣ ಪ್ರವಚನ ನೀಡುವರು. ಬಾದನಹಟ್ಟಿಯ ನಾಗನಗೌಡ ಪುರಾಣ ಪಠಣ ಮತ್ತು ಸಂಗೀತ ಸೇವೆ ನೀಡಲಿದ್ದಾರೆ. ಎಚ್.ಎಂ. ಚಂದ್ರಶೇಖರಯ್ಯ ಸ್ವಾಮಿ ಕುರುಗೋಡು ಅವರು ತಬಲಾ ಸಾಥ್ ನೀಡಿದರು.