ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಬರ ನಿರ್ವಹಣೆಗೆ ಅಧಿಕಾರಿಗಳು ಕಾರ್ಯತತ್ಪರಾಗಲಿ

KannadaprabhaNewsNetwork | Published : Oct 6, 2023 1:17 AM

ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯತತ್ಪರರಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅವರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಬರ ನಿರ್ವಹಣೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ.

ರೋಣ: ಬರ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯತತ್ಪರರಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಸೂಚನೆ ನೀಡಿದರು.

ಪಟ್ಟಣದ ತಾಪಂ ಕಚೇರಿ ಸಭಾಭವನದಲ್ಲಿ ಜರುಗಿದ ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ಹಾಗೂ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ತಾಲೂಕಿನ ರೈತರು ಸಂಕಷ್ಟದಲ್ಲಿ ಇದ್ದು, ಅವರ ನೆರೆವಿಗೆ ತಾಲೂಕು ಆಡಳಿತ ನಿಲ್ಲಬೇಕು. ರೈತರು ಮತ್ತು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ವಿಳಂಬ ಮಾಡದೆ, ತ್ವರಿತವಾಗಿ ಸ್ಪಂದಿಸಬೇಕು. ರೈತರು ಹಿಂಗಾರಿ ಹಂಗಾಮಿಗಾಗಿ ಕಡಲೆ, ಜೋಳ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದಾರೆ. ಅವರಿಗೆ ಬೀಜ, ಗೊಬ್ಬರ ತೊಂದರೆಯಾಗದಂತೆ ಕೃಷಿ ಇಲಾಖೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂದರು.

ನಮ್ಮ ಗ್ರಾಮ ನಮ್ಮ ಯೋಜನೆಯಡಿಯಲ್ಲಿ ತಾಲೂಕಿನಲ್ಲಿ 7 ಕಾಮಗಾರಿಗಳು ಪ್ರಗತಿಯಲ್ಲಿ ಇವೆ. ಅದರಲ್ಲಿ ಸವಡಿ ಅಂಗನವಾಡಿ ಕೇಂದ್ರ ಕಟ್ಟಡ ಕಾಮಗಾರಿ ವಿಳಂಬವಾಗಿದೆ ಎಂದು ಜಿಪಂ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಗತಿಯಲ್ಲಿರುವ ಕಾಮಗಾರಿಗಳು ಯಾವವು? ವಿಳಂಬವಾದ ಕಾಮಗಾರಿಗಳು ಯಾವವು ಎಂದು ಶಾಸಕರು ಪ್ರಶ್ನಿಸಿದರು. ಅಧಿಕಾರಿಗಳು ಉತ್ತರಿಸಲು ತಡಕಾಡಿದರು. ಆಗ ಶಾಸಕರು, ಇಲಾಖೆಯ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳದೆ ಸಭೆಗೆ ಬಂದರೆ ಏನರ್ಥ? ಎಂದರು.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಆದ್ದರಿಂದ ಕಟ್ಟಡ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಬಳಗೋಡದಿಂದ ಸರ್ಜಾಪುರ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಕರೆದು 9 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ. ನಿಮಗೆ ಗುತ್ತಿಗೆದಾರರಿಂದ ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಮರು ಟೆಂಡರ್ ಕರೆದು ಕಾಮಗಾರಿ ಪ್ರಾರಂಭ ಮಾಡಿ ಎಂದು ಸೂಚಿಸಿದರು.

ಗುತ್ತಿಗೆದಾರರಿಗೆ ನೋಟಿಸ್ ನೀಡಿ: ಅನೇಕ ಕಡೆಗಳಲ್ಲಿ ಜಿಪಂ ಇಲಾಖೆಯಿಂದ ಕರೆಯಲಾದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ. ಬಹುತೇಕ ಕಾಮಗಾರಿಗಳ ಅವಧಿ ಪೂರ್ಣಗೊಂಡಿದ್ದು, ಅಂತಹ ಕಾಮಗಾರಿಗಳ ಮರು ಟೆಂಡರ್ ಮಾಡಬೇಕು.‌ ಅನೇಕ‌ ಕಾಮಗಾರಿಗಳು 2 ವರ್ಷ ಮೇಲ್ಪಟ್ಟಿವೆ. ಟೆಂಡರ್ ಹಾಕಿದ ಗುತ್ತಿಗೆದಾರರಿಗೆ ಶೀಘ್ರವೇ ನೋಟಿಸ್ ನೀಡಬೇಕು. ಅಧಿಕಾರಿಗಳ ಮನಸ್ಥಿತಿ ಜಿಡುಗಟ್ಟಿದೆ. ಅವರಿಗೆ ಕೆಲಸ ಮಾಡುವ ಮನಸ್ಥಿತಿ ಇಲ್ಲ ಎಂದು ಜಿಪಂ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ರಸ್ತೆ, ಶಾಲೆ, ಶೌಚಾಲಯ, ಚರಂಡಿ ಇತರ ಸೌಲಭ್ಯ ಒದಗಿಸಿದ ಬಳಿಕ ಆದರ್ಶ ಗ್ರಾಮ ಎಂದು ಘೋಷಣೆ ಮಾಡಬೇಕು. ಕೇವಲ ದಾಖಲೆಯಲ್ಲಿ ಆದರ್ಶ ಗ್ರಾಮವೆಂದರೆ ಏನು ಅರ್ಥ? ಎಂದು ಜಿಪಂ ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ತೆರವಿಗೆ ಮುಂದಾದಾಗ ಹಲ್ಲೆ ಮಾಡ್ತಾರೆ: ಶಾಂತಗೇರಿ ಗ್ರಾಮದ 3ನೇ ವಾರ್ಡ್‌ನಲ್ಲಿ ಎಸ್‌ಟಿಪಿ, ಪಿಎಸ್‌ಟಿ ಯೋಜನೆಯಡಿ ಎಸ್‌ಟಿ ಜನಾಂಗ ಜಾಸ್ತಿ ಇರುವ ಪ್ರದೇಶದಲ್ಲಿ ಅಂಗನವಾಡಿ ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. ಆದರೆ ಅಲ್ಲಿ ಅನೇಕರು ಜಾಗ ಅತಿಕ್ರಮಣ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ. ಆ ಜಾಗ ತೆರವು ಮಾಡಲು ಮುಂದಾದಲ್ಲಿ ಗ್ರಾಪಂ ಅಧಿಕಾರಿಗಳ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂದು ಪಿಡಿಒ ಮಂಜುನಾಥ ಪಾಟೀಲ ಹೇಳಿದರು. ಆಗ ಶಾಸಕ ಜಿ.ಎಸ್. ಪಾಟೀಲ ಅವರು, ಬೇರೆ ಗ್ರಾಮಕ್ಕೆ ಕಾಮಗಾರಿ ಸ್ಥಳಾಂತರಿಸಲು ಅವಕಾಶವಿದ್ದಲ್ಲಿ ಸ್ಥಳಾಂತರಿಸಿ ಎಂದು ಗಜೇಂದ್ರಗಡ ಸಿಡಿಪಿಒ ಅವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರಶಾಂತ ವರಗಪ್ಪನವರ, ಜಿಪಂ ಯೋಜನಾಧಿಕಾರಿ ಎಂ.ವಿ. ಚಳಗೇರಿ, ಜಿಲ್ಲಾ ಹಿಂದುಳಿದ ವರ್ಗ ಕಲ್ಯಾಣಾಧಿಕಾರಿ ರವಿ ಗುಂಜಿಕೇರ, ತಹಸೀಲ್ದಾರ್ ವಾಣಿ ವಂಕಿ, ಗಜೇಂದ್ರಗಡ ತಾಪಂ ಇಒ ಡಾ. ಡಿ. ಮೋಹನ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.