ರೋಣ: ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾಲಯವಾಗಿ ತ್ರಿಭುವನ್ ವಿಶ್ವವಿದ್ಯಾಲಯ ಆರಂಭವಾಗಿದೆ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ ತಿಳಿಸಿದರು.ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯುನಿಯನ್, ಕೆಸಿಸಿ ಬ್ಯಾಂಕ್, ಕೆಎಂಎಫ್, ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ರೋಣ ತಾಲೂಕಿನ ಎಲ್ಲ ಸಹಕಾರ ಸಂಘ, ಬ್ಯಾಂಕುಗಳ ಆಶ್ರಯದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು 2025ರಲ್ಲಿ ವಿಶ್ವವಿದ್ಯಾಲಯ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯುವ ಮೂಲಕ ಸಹಕಾರ ಚಳವಳಿಯ ಪೂರಕ ಬೆಳವಣಿಗೆಗೆ ಚಾಲನೆ ನೀಡಿದ್ದಾರೆ. ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾಗಿ ಗುರುತಿಸಲ್ಪಟ್ಟ ಈ ವಿಶ್ವವಿದ್ಯಾಲಯವು ಸಹಕಾರ ಮೂಲಕ ಸಮೃದ್ಧಿ ಎಂಬ ದೃಷ್ಟಿಕೋನಕ್ಕೆ ಅನುಗುಣವಾಗಿ ಸಹಕಾರಿ ಸಂಸ್ಥೆಗಳಿಗೆ ತಾಂತ್ರಿಕ ಮತ್ತು ನಿರ್ವಹಣಾ ಶಿಕ್ಷಣದಲ್ಲಿ ಪರಿಣತಿಯನ್ನು ನೀಡುತ್ತಿದೆ. ಇದರ ಜತೆಗೆ ಸಹಕಾರ ವಲಯದಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ಸಾಂಸ್ಥಿಕ ಜಾಲಗಳನ್ನು ಮುನ್ನಡೆಸುವ ಭಾರತದ ಸಹಕಾರ ಚಳವಳಿಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಕೆಸಿಸಿ ಬ್ಯಾಂಕಿನಿಂದ ಸಿಗುವ ಸರ್ವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸಂಘದ ಏಳ್ಗೆಗೆ ಪ್ರಯತ್ನಿಸಬೇಕು ಎಂದರು.ಅಂದಪ್ಪ ಉಗಲಾಟ ಮಾತನಾಡಿ, ಗ್ರಾಮೀಣಾಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಪ್ರಮುಖ ಕೊಡುಗೆಗಳಾದ ಆರ್ಥಿಕ ಸೇರ್ಪಡೆ, ಆರ್ಥಿಕ ಒಟ್ಟುಗೂಡುವಿಕೆ ಮತ್ತು ಮೌಲ್ಯ ಸರಪಳಿ ಮತ್ತು ಏಕೀಕರಣ, ಗ್ರಾಮೀಣ ಜನರಿಗೆ ಕೈಗೆಟಕುವ ಹಣಕಾಸು ಸಾಲ, ಸ್ಥಳೀಯ ಸೇವಾ ವಿತರಣೆ ಮತ್ತು ಸಾಮಾಜಿಕ ರಕ್ಷಣೆ, ಅಂತರ್ಗತ ಉದ್ಯೋಗ ಮತ್ತು ಲಿಂಗ ಸಬಲೀಕರಣ, ಗ್ರಾಮೀಣ ಆರ್ಥಿಕತೆಯ ಬಲವರ್ಧನೆ, ಹೊಂದಿ ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳ ಬೆಳವಣಿಗೆಗೆ ಅಡೆತಡೆಗಳಾದ ಆಡಳಿತ ಕೊರತೆಗಳು, ತಂತ್ರಜ್ಞಾನ ಅಳವಡಿಕೆ ಮತ್ತು ಪ್ರಮಾಣ ಈ ಕುರಿತು ಮಾತನಾಡಿದರು.ರೋಣ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ.ಎ. ಹಾದಿಮನಿ ಮಾತನಾಡಿದರು. ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯ, ಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ಆ ದಿನದ ಕುರಿತು ವಿಶ್ರಾಂತ ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಜಿ. ಕುಲಕರ್ಣಿ ಅವರು ಉಪನ್ಯಾಸ ನೀಡಿದರು.ಈ ವೇಳೆ ಮೃತ್ಯುಂಜಯ ಹೊಸಮನಿ, ಪುಷ್ಪಾ ಕಡಿವಾಳ, ಪಿ.ಎಲ್. ಹಳೇಮನಿ, ಪ್ರಶಾಂತ ಮುಧೊಳ, ವಿ.ಎಸ್. ಪಾಟೀಲ, ಎ.ಎ. ಶಾಬಾದಿ, ಎಂ.ಬಿ. ಪೂಜಾರಿ, ಸಾಲೋಟಗಿಮಠ ಸೇರಿದಂತೆ ಇತರರು ಇದ್ದರು. ಲಿಂಗರಾಜ ಪಾಟೀಲ ಸ್ವಾಗತಿಸಿದರು. ಚಂದ್ರಶೇಖರ ಎಸ್. ಕರಿಯಪ್ಪನವರ ನಿರೂಪಿಸಿ, ವಂದಿಸಿದರು.