ವರ್ಕ್ ಫ್ರಮ್ ಹೋಮ್ ಉದ್ಯೋಗದ ಆಮಿಷ: ಕೋಟ್ಯಂತರ ಡೆಪಾಸಿಟ್ ಪಡೆದು ಪರಾರಿ ಆರೋಪ

KannadaprabhaNewsNetwork |  
Published : Jun 10, 2026, 02:00 AM IST
9 ಎಚ್‌ವಿಆರ್ 9 ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸ್ಥಳೀಯ ಅಶ್ವಿನಿನಗರದಲ್ಲಿ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆ್ಯಂಡ್ ಮಾರ್ಕೆಟಿಂಗ್ ಹೆಸರಿನಲ್ಲಿ ಕಚೇರಿ ಆರಂಭಿಸಿ ವರ್ಕ್ ಫ್ರಮ್ ಹೋಮ್ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಡೆಪಾಸಿಟ್ ಪಡೆದು ವಂಚಿಸಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

ಹಾವೇರಿ: ಸ್ಥಳೀಯ ಅಶ್ವಿನಿನಗರದಲ್ಲಿ ‘ಎಸ್‌ಎಲ್‌ವಿ ಮಹಿಳಾ ಮಾರ್ಟ್ ಆಂಡ್ ಮಾರ್ಕೆಟಿಂಗ್ ಹೆಸರಿನಲ್ಲಿ ಕಚೇರಿ ಆರಂಭಿಸಿ ವರ್ಕ್ ಫ್ರಮ್ ಹೋಮ್ ನೀಡುವುದಾಗಿ ನಂಬಿಸಿ ನೂರಾರು ಮಹಿಳೆಯರಿಂದ ಕೋಟ್ಯಂತರ ರೂಪಾಯಿ ಡೆಪಾಸಿಟ್ ಪಡೆದು ವಂಚಿಸಿ ಪರಾರಿಯಾಗಿರುವ ಆರೋಪ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ನೊಂದ ಮಹಿಳೆಯರು ಮಂಗಳವಾರ ಹಾವೇರಿ ಶಹರ ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಸಲ್ಲಿಸಿದರು.

ಶಹರ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದ ಮಹಿಳೆಯರು, ಹಾವೇರಿ ತಾಲೂಕಿನ ನೆಲೋಗಲ್ಲ ಗ್ರಾಮದ ವಿನಾಯಕ ಆನ್ವೇರಿ ಎಂಬಾತ ತಮಗೆ ವಂಚನೆ ಎಸಗಿದ್ದು, ಕೋಟ್ಯಂತರ ರೂಪಾಯಿ ಪಡೆದು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಿದರು. ಕೂಡಲೇ ಆತನನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೊಂದ ಮಹಿಳೆಯರ ಪ್ರಕಾರ ಊದಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಮನೆಗಳಿಗೆ ನೀಡಿ, ಅವುಗಳನ್ನು ಪ್ಯಾಕಿಂಗ್ ಮಾಡುವ ಕೆಲಸ ನೀಡುವುದಾಗಿ ಸಂಸ್ಥೆ ಭರವಸೆ ನೀಡಿತ್ತು. ರಾಜ್ಯಾದ್ಯಂತ ಸಂಸ್ಥೆಯ ಒಂಬತ್ತು ಶಾಖೆಗಳಿದ್ದು, ಕನಿಷ್ಠ 25 ಸಾವಿರದಿಂದ 5 ಲಕ್ಷದವರೆಗೆ ಡೆಪಾಸಿಟ್ ಮಾಡಬೇಕು ಎಂದು ತಿಳಿಸಲಾಗಿತ್ತು. ಅಲ್ಲದೆ, ₹1 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹26 ಸಾವಿರ ಆದಾಯ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎನ್ನಲಾಗಿದೆ.

ರಾಣೆಬೆನ್ನೂರು ತಾಲೂಕಿನ ಜೋಯಿಸರಹರಳಹಳ್ಳಿಯ ಶಂಕ್ರಮ್ಮ ಮಾತನಾಡಿ, ಮೊದಲಿಗೆ ನಾನು ₹1 ಲಕ್ಷ ಡೆಪಾಸಿಟ್ ಮಾಡಿದ್ದು, ನಾಲ್ಕೈದು ತಿಂಗಳು ಹಣವನ್ನು ಸರಿಯಾಗಿ ನೀಡಿದರು. ನಂತರ ಮತ್ತಷ್ಟು ನಂಬಿಕೆ ಮೂಡಿಸಿ ₹2 ಲಕ್ಷ ಹೆಚ್ಚುವರಿಯಾಗಿ ಪಾವತಿಸುವಂತೆ ಮಾಡಿದರು. ಆದರೆ ಆ ಬಳಿಕ ಒಂದು ರೂಪಾಯಿಯನ್ನೂ ನೀಡದೆ ವಂಚಿಸಿದ್ದಾರೆ ಎಂದು ಆರೋಪಿಸಿದರು.

₹8ರಿಂದ ₹10 ಕೋಟಿ ವಂಚನೆ ಶಂಕೆ

ಈ ಸಂಸ್ಥೆಯ ಮೂಲಕ ಅಂದಾಜು ₹8ರಿಂದ ₹10 ಕೋಟಿ ವರೆಗೆ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ನೊಂದವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುತ್ತಿದೆ ಎಂದು ಬ್ಯಾಡಗಿ ಮೂಲದ ವಕೀಲರಾದ ನವೀನ ಮುಳಗುಂದ ಹಾಗೂ ಮಂಜುನಾಥ ಅರಳಿಕಟ್ಟಿ ತಿಳಿಸಿದರು. ಆರೋಪಿಯನ್ನು ಶೀಘ್ರ ಬಂಧಿಸಿ, ಸಂತ್ರಸ್ತರಿಗೆ ಹಣ ವಾಪಸ್ ಕೊಡಿಸುವಂತೆ ಅವರು ಆಗ್ರಹಿಸಿದರು.

ದಾಖಲೆ ಸಮೇತ ಲಿಖಿತ ದೂರು ಸಲ್ಲಿಸುವಂತೆ ಸೂಚಿಸಿದ್ದು, ದೂರು ಸ್ವೀಕರಿಸಿದ ಬಳಿಕ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

​ಅಕ್ರಮ ಕ್ವಾರಿ ದುರಂತ: ಕೋಟುಮಚಗಿಗೆ ಅಧಿಕಾರಿಗಳ ಭೇಟಿ
ಮಣ್ಣಿನ ಆರೋಗ್ಯ ಕಾಪಾಡಲು ರೈತರು ಆದ್ಯತೆ ನೀಡಲಿ: ಬಸವರಾಜ ಬೊಮ್ಮಾಯಿ